ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂದು ನೇಣಿಗೆ ಶರಣಾದ 28ರ ಯುವಕ !
Team Udayavani, Aug 11, 2022, 6:04 PM IST
ಕೊರಟಗೆರೆ: ಮೊಬೈಲ್ ಅಂಗಡಿ ಮಾಲೀಕ ಯುವಕನೋರ್ವ ನಾಲ್ಕೈದು ವರ್ಷಗಳಿಂದ ಹುಡುಕಿದರೂ ಹೆಣ್ಣು ಸಿಗಲಿಲ್ಲ, ಮದುವೆ ಯಾಗಲಿಲ್ಲವೆಂಬ ಕಾರಣಕ್ಕೆ ಮಾನಸಿಕವಾಗಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಜೋನಿಗರಹಳ್ಳಿ ಗ್ರಾಮದ ಲೇಟ್ ರಮೇಶಾಚಾರ್ಯ ಎಂಬವರ ಮಗ ಹೇಮಂತ್ ಕುಮಾರ್ (28) ಆತ್ಮ ಹತ್ಯೆ ಮಾಡಿಕೊಂಡ ಯುವಕ.
ಮೃತ ಹೇಮಂತ್ ಕುಮಾರ್ ತೋವಿನಕೆರೆಯಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದ್ದು, ಈತ ಶೋಕಿ ವ್ಯಕ್ತಿತ್ವ ಹೊಂದಿದ್ದು, ವರ್ಷದಲ್ಲಿ 8-10 ಬೈಕ್ ಬದಲಿಸುತ್ತಿದ್ದ, ಹೊಸದಾಗಿ ಬರುವ ಎಲ್ಲಾ ಬೈಕ್ ಗಳನ್ನು ಖರೀದಿ ಮಾಡಿ ಸ್ವಲ್ಪ ದಿನದಲ್ಲೇ ಬದಲಾಯಿಸುತ್ತಿದ್ದ ಎನ್ನಲಾಗಿದ್ದು, ಫುಲ್ ಖುಷಿಯಿಂದ ಜೀವನ ಸಾಗಿಸುತ್ತಿದ್ದ ಯುವಕ ಇತ್ತೀಚಿಗೆ 4-5 ವರ್ಷಗಳಿಂದ ಬಹಳಷ್ಟು ಹೆಣ್ಣುಗಳನ್ನು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಾರದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ .ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.