ಮೂಢನಂಬಿಕೆ ವಿರುದ್ಧ ವಿನೂತನ ಜನ ಜಾಗೃತಿ
Team Udayavani, Dec 27, 2019, 2:37 PM IST
ಹುಳಿಯಾರು: ಕಂಕಣ ಸೂರ್ಯಗ್ರಹಣದ ವೇಳೆ ವಾಸವಿ ವಿದ್ಯಾಸಂಸ್ಥೆಯ ಟಿಆರ್ಎಸ್ಆರ್ ಪೌಢಶಾಲೆ ವಿಜ್ಞಾನ ಶಿಕ್ಷಕಿ ಬಿ.ಕೆ. ಮಂಜುಳಾ ಮಕ್ಕಳೊಂದಿಗೆ ತಿಂಡಿ ಸೇವಿಸಿ ಅರಿವು ಮೂಡಿಸಿದರು.
ಶಿಕ್ಷಕಿ ಬಿ.ಕೆ.ಮಂಜುಳಾ ಮಾತನಾಡಿ, ಗ್ರಹಣದ ಬಗ್ಗೆ ಮೌಡ್ಯ ಬಿತ್ತುತ್ತಿದ್ದಾರೆ. ಬಾಲ್ಯದಲ್ಲೇ ಮೌಡ್ಯ ಬೇರೂರಿದರೆ ಭವಿಷ್ಯಕ್ಕೆ ಗ್ರಹಣ ಬಡಿಯುತ್ತದೆ. ಈ ನಿಟ್ಟಿನಲ್ಲಿ ಗ್ರಹಣ ಬಗ್ಗೆ ತಪ್ಪು ತಿಳಿವಳಿಕೆ ಇಟ್ಟುಕೊಳ್ಳಬೇಡಿ. ಗ್ರಹಣ ಸೂರ್ಯ ಚಂದ್ರ ಭೂಮಿಯ ನಡುವಿನ ನೆರೆಳು ಬೆಳಕಿನ ಆಟ ವಿನಹ ಬೇರೇನೂ ಅಲ್ಲ ಎಂದರು.
ಮೂವತ್ತಕ್ಕೂ ಹೆಚ್ಚು ಮಕ್ಕಳು ಚಪಾತಿ, ಉಪ್ಪಿಟ್ಟು, ಹಣ್ಣುಗಳು, ಅನ್ನ ಸಾಂಬರ್ ಸೇರಿ ಒಬ್ಬೊಬ್ಬರು ಒಂದೊಂದು ಬಗೆಯ ತಿಂಡಿ ತಂದಿದ್ದರು. ಗ್ರಹಣ ನಡೆಯುತ್ತಿರುವ ಸಂದರ್ಭ ಸೌರ ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿ ತಿಂಡಿ ಸವಿದರು. ಸಂಸ್ಥೆ ಕಾರ್ಯದರ್ಶಿ ಎಲ್.ಆರ್.ಬಾಲಾಜಿ, ಮುಖ್ಯಶಿಕ್ಷಕ ಕೆ.ಆರ್. ಗಂಗಾಧರಯ್ಯ, ಶಿಕ್ಷಕರಾದ ಬಿ.ಎಸ್.ನಟರಾಜ್, ಕೆ.ಎಂ.ಮಂಜುನಾಥ್, ಕೆ.ಆರ್.ರೇಣಿಕಪ್ರಸಾದ್, ಸುಂದರೇಶ್, ಕವಿತಾ ಇದ್ದರು.