ಕುತೂಹಲ ಮೂಡಿಸಿದ ಮುಖಂಡರ ಮೈತ್ರಿ ಆಟ
ಅತ್ತ ವರಿಷ್ಠರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತು • 'ಕೈ' ಅತೃಪ್ತರು ತಮ್ಮ ಪಕ್ಷಕ್ಕೇ ಮತ ಹಾಕಿದ್ದಾರೆನ್ನುವ ಬಿಜೆಪಿಗರು
Team Udayavani, Apr 23, 2019, 5:29 PM IST
● ಚಿ.ನಿ.ಪುರುಷೋತ್ತಮ್
ತುಮಕೂರು: ಕಳೆದ 2 ದಿನಗಳ ಹಿಂದೆ ಸುರಿದ ಸಾಧಾರಣ ಮಳೆಯಿಂದ ಭೂಮಿ ಸ್ವಲ್ಪ ತಂಪಾದರೂ ಚುನಾವಣೆ ಕಾವು ಇನ್ನು ಜಿಲ್ಲೆಯಲ್ಲಿ ಆರಿಲ್ಲ. ಎಲ್ಲಾ ಕಡೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಲೇ ಇದೆ. ಈ ನಡುವೆ ಮೈತ್ರಿ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಕಹಳೆ ಊದಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಬೆಂಬಗಲಿಗರು ಮೈತ್ರಿ ಧರ್ಮ ಪಾಲಿಸಿದ್ದಾರೆಯೇ ಎನ್ನುವ ಅನುಮಾನ ಕ್ಷೇತ್ರಾದ್ಯಂತ ಮೂಡಿದೆ. ಈ ಕುರಿತು ಮಧುಗಿರಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತು ಈ ವಿಚಾರಕ್ಕೆ ಪುಷ್ಠಿ ನೀಡಿದೆ.
ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ತುಮಕೂರು ಲೋಕಸಭಾ ಕ್ಷೇತ್ರ 8, ವಿಧಾನಸಭಾ ಕ್ಷೇತ್ರಗಳ ಪೈಕಿ 8, ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ಮಾಡಿದರೂ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡರಾಗಲಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಾಗಲಿ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ.
ಮಧುಗಿರಿಯಲ್ಲಿ ನಡೆದ ಮೈತ್ರಿ ಪ್ರಚಾರ ಸಭೆಯಲ್ಲಿಯೂ ಕಾಣದ ಇಬ್ಬರು ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಮಧುಗಿರಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ವೇಳೆ ವೇದಿಕೆಯಲ್ಲಿ ಕಾಣಿಸಿಕೊಂಡರು. ಆನಂತರ ಸಂಸದ ಎಸ್.ಪಿ.ಮುದ್ದಹನುಮೇಗೌಡ ತುಮಕೂರಿನಲ್ಲಿ ನಡೆದ ವಕೀಲರ ಘಟಕದ ಕಾರ್ಯಕ್ರಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಬಿಟ್ಟರೇ ಬೇರೆ ಎಲ್ಲಿಯೂ ಪ್ರಚಾರದ ಸಭೆಗಳಲ್ಲಿ ಶಾಸಕ ಕೆ.ಎನ್.ರಾಜಣ್ಣ, ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕಾಣಿಸಲೇ ಇಲ್ಲ.
ಈ ಎಲ್ಲಾ ಬೆಳವಣಿ ಗಮನಿಸಿರುವ ಕಾಂಗ್ರೆಸ್-ಜೆಡಿಎಸ್ ಮುಖಂಡರಲ್ಲಿ ಈಗ ಅನುಮಾನ ಉಂಟಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರಿಗೆ ಕಾಂಗ್ರೆಸ್ನ ಒಂದು ಗುಂಪು ವಿರೋಧ ಮಾಡಿದೆಯೇ ಎನ್ನುವುದು. ಪಕ್ಷದಲ್ಲಿ ಬಂಡಾಯ ಎದ್ದು ಮಾಜಿ ಸಿಎಂ ಮಧುಗಿರಿಗೆ ಬಂದಾಗ ವೇದಿಕೆ ಹಂಚಿಕೊಂಡ ಮೇಲೆ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೋ ಇಲ್ಲವೋ ಸ್ಪಷ್ಟತೆಯಿಲ್ಲ. ಆದರೆ ಕಾಕತಾಳೀಯ ಎನ್ನುವಂತೆ ಮಧುಗಿರಿ ವಿಧಾನ ಸಭಾ ಕ್ಷೇತ್ರದ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ರಾಜಗೋಪಾಲ್ರನ್ನು ಪಕ್ಷ ವಿರೋಧಿ ಚಟುವಟಿಕೆ ಎನ್ನುವ ಕಾರಣ ಹೇಳಿ ಕೆಪಿಸಿಸಿ ಅಮಾನತು ಮಾಡಿದೆ. ಇನ್ನು ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತು ಮಾಡಿರುವುದಕ್ಕೆ ಸಿಡಿಮಿಡಿಗೊಂಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದಕ್ಕೆ ದಾಖಲೇ ಇದೆಯೇ ಎನ್ನುವ ಪ್ರಶ್ನೆಯನ್ನು ಕೆಪಿಸಿಸಿಗೆ ಹಾಕಿದ್ದಾರೆ. ಅಮಾನತು ವಾಪಸ್ ಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ನ್ನು ಶೂನ್ಯ ಮಾಡುತ್ತೇನೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಮಧುಗಿರಿಯಲ್ಲಿ 5 ಜಿಪಂ ಕಾಂಗ್ರೆಸ್ ಸದಸ್ಯರಿದ್ದಾರೆ, ತಾಪಂ ಕಾಂಗ್ರೆಸ್ ವಶದಲ್ಲಿದೆ. ಪುರಸಭೆಯಲ್ಲಿ ಕಾಂಗ್ರೆಸ್ನರೇ ಹೆಚ್ಚಿನ ಸದಸ್ಯರಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತನ್ನು ಪಕ್ಷ ವಾಪಸ್ ಪಡೆಯದಿದ್ದರೇ ಜಿಪಂ, ತಾಪಂ, ಪುರಸಭೆ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿ ಕಾಂಗ್ರೆಸ್ ಇಲ್ಲದಂತೆ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು ನಮಗೆ ಬೆಂಬಲಿಸಿರುವ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ಅಧಿಕಾರಿಗಳ ಪಾತ್ರ ಬಹಳವಿದ್ದು, ಈ ಚುನಾವಣೆ ಉತ್ತಮವಾಗಿ ನಡೆದಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಗಿದ್ದ ಮತದಾನಕ್ಕಿಂತ ಈ ಬಾರಿ ಹೆಚ್ಚಾಗಿದೆ. ಈ ಬಾರಿ ದೇಶದೆಲ್ಲೆಡೆ ಮೋದಿ ಅಲೆಯಿದ್ದು ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದರು.
ತಾನು ಚುನಾವಣೆಯಲ್ಲಿ ಮೈತ್ರಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆಯೇ ಹೊರತು ದೇವೇಗೌಡರ ವಿರುದ್ಧವಲ್ಲ. ತನಗೂ ಅವರಿಗೂ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಅವರು ಚುನಾವಣೆಗೆ ಮುಂಚೆ ಎಲ್ಲಾ ಮುಖಂಡರು, ಕಾರ್ಯಕರ್ತರು ಹಗಲು, ರಾತ್ರಿ ಎನ್ನದೆ, ಬಿಸಿಲನ್ನೂ ಲೆಕ್ಕಿಸಿದೆ ಭರ್ಜರಿಯಾಗಿ ಮತಯಾಚನೆ ಮಾಡಿದ್ದಾರೆ. ಅದರಂತೆಯೇ ಈ ಬಾರಿ ಮತದಾನದ ಶೇಕಡ ಪ್ರಮಾಣವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಕಾಯರ್ಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಅಮೆರಿಕಾ ಎಂಜಿನಿಯರ್ ಸೌರವ್ಬಾಬು ಮಾತನಾಡಿ, ಭಾರತದಿಂದ ವಲಸೆ ಹೋಗಿ ಇತರೆ ದೇಶಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಅನೇಕ ಎನ್ಆರ್ಐಗಳು ಸ್ವಗ್ರಾಮಕ್ಕೆ ತೆರಳಿ ಮತದಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿ ಪಡುತ್ತಿರುವ ಶ್ರಮಕ್ಕೆ ಬೆಂಬಲ ನೀಡಿದ್ದಾರೆಂದರು.
ಈ ವೇಳೆ ಮಾಜಿ ಶಾಸಕ ಎಂ.ಆರ್.ಹುಲಿನಾಯ್ಕರ್, ರೈತ ಮೋರ್ಚಾ ಅಧ್ಯಕ್ಷ ಎಸ್.ಶಿವಪ್ರಸಾದ್, ಹೆಬ್ಟಾಕ ರವಿಶಂಕರ್, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ನಾಗರಾಜರಾವ್, ರುದ್ರೇಶ್ ಮತ್ತಿತರರಿದ್ದರು.