ಖಾಸಗೀಕರಣ ಹಿಂಪಡೆಯಲು ಅಂಗನವಾಡಿ ನೌಕರರ ಆಗ್ರಹ
Team Udayavani, Aug 8, 2020, 12:48 PM IST
ತುಮಕೂರು: ಆರೋಗ್ಯ, ಬಿಸಿಯೂಟ, ಶಿಕ್ಷಣ ಮೊದಲಾದ ಅಗತ್ಯ ಮೂಲಭೂತ ಸೇವೆಗಳ ಖಾಸಗೀಕರಣದ ಪ್ರಸ್ತಾಪ ಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗೀಕರಣ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕಾಯಂ ಮಾಡಿ. ಪ್ರತಿ ತಿಂಗಳಿಗೆ 21 ಸಾವಿರರೂ. ಕನಿಷ್ಠ ವೇತನ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರ ರೂ. ಕೊಡಬೇಕು. ಇಎಸ್ಐ ಮತ್ತು ಪಿಎಫ್ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕೋವಿಡ್ ಅವಧಿಯ ನೆಪವೊಡ್ಡಿ ಕೆಲಸದ ಅವಧಿ ಹೆಚ್ಚಿಸುವುದನ್ನು ಕೈಬಿಡಬಬೇಕು. ಆದಾಯ ತೆರಿಗೆ ಪಾವತಿಸಲಾಗದ ಎಲ್ಲಾ ಬಡ ಕುಟುಂಬಗಳಿಗೆ 6 ತಿಂಗಳ ಕಾಲ ಪ್ರತಿ ತಿಂಗಳಿಗೆ 7500 ರೂ. ನೀಡಬೇಕು. ಉಚಿತ ರೇಷನ್ ಮತ್ತು ಆಹಾರ ಧಾನ್ಯ ಕೊಡ ಬೇಕು ಎಂದು ಒತ್ತಾಯಿಸಿದರು.
ಕೆಲಸದಲ್ಲಿದ್ದಾಗ ಸೋಂಕಿತರಾಗುವ ಎಲ್ಲ ಕಾರ್ಮಿಕರಿಗೂ ಕನಿಷ್ಠ 10 ಲಕ್ಷ ರೂ. ಪರಿಹಾರ ನಿಧಿಯನ್ನು ನೀಡಬೇಕು. ಕ್ವಾರೈಂಟೆನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಪಾವತಿ ಮಾಡಬೇಕು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮುಂದೂಡಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.