ಪ್ಲಾಸ್ಟಿಕ್ ಬಳಕೆ ಸಂಪೂರ್ಣ ತ್ಯಜಿಸಿ
Team Udayavani, Nov 29, 2020, 4:38 PM IST
ತುಮಕೂರು: ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕರ. ಇದನ್ನು ಪ್ರತಿಯೊಬ್ಬರೂ ಅರಿತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂಕರೆ ನೀಡಿದರು.
ಮಹಾನಗರ ಪಾಲಿಕೆ ಕಚೇರಿ ಸಭಾಂ ಗಣದಲ್ಲಿ ಸಂಕಲ್ಪ ಫೌಂಡೇಶನ್ ಮತ್ತು ಮಹಾ ನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ಹೋಟೆಲ್ ಆಹಾರ ವಿತರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವುಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರಕ: ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹೋಟೆಲ್ನವರು, ಅಂಗಡಿಗಳ ವರ್ತ ಕರು ತಮ್ಮ ದಿನನಿತ್ಯ ವ್ಯಾಪಾರ ವಹಿವಾ ಟಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದರು.
ಪ್ಲಾಸ್ಟಿಕ್ ಬಳಸಬೇಡಿ: ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಹಾಕಲಾಗುತ್ತಿದ್ದರೂ ದಂಡಕಟ್ಟಿದ ತದ ನಂತರ ಮತ್ತೆ ಪ್ಲಾಸ್ಟಿಕ್ ಬಳಕೆಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ. ಇದಕ್ಕೆ ಅವಕಾಶ ನೀಡದೆ ಹೋಟೆಲ್ನವರು, ವರ್ತಕರು ಸ್ವಯಂ ಪ್ರೇರಿತರಾಗಿಯೇ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನುಕೈಬಿಡಬೇಕು ಎಂದು ಸಲಹೆ ಮಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ನಗರಪಾಲಿಕೆ ಜತೆ ಕೈ ಜೋಡಿಸಿ: ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಜಾಸ್ತಿಯೇ ಇದೆ. ಹಾಗಾಗಿ ಹೋಟೆಲ್ ಮಾಲೀಕರು ಮಹಾನಗರ ಪಾಲಿಕೆ ಜೊತೆ ಕೈಜೋಡಿಸಿ ಪ್ಲಾಸ್ಟಿಕ್ ಮುಕ್ತ ತುಮಕೂರು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ನಾಗರಿಕರು ಸಹ ತಾವಾಗಿಯೇ ಈ ಬಗ್ಗೆ ಅರಿತು ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬಹುದಾಗಿದೆ ಎಂದರು.
ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ನಿಷೇಧಿಸಿ: ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ಹೋಟೆಲ್ ಅಸೋಸಿಯೇಷನ್ ಮೂಲಕವೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ ದಂಡ ಹಾಕುವ ಹಂತಕ್ಕೆ ಪರಿಸ್ಥಿತಿಯನ್ನು ಹೋಟೆಲ್ ಗಳವರು, ವರ್ತಕರು ತಂದುಕೊಳ್ಳಬಾರದು. ಸ್ವಯಂ ಪ್ರೇರಿತರಾಗಿಯೇ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಬೇಕು ಎಂದರು.
ಪ್ಲಾಸ್ಟಿಕ್ನಿಂದ ಕ್ಯಾನ್ಸರ್: ಕೆಲ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ಬಳಕೆ ಮಾಡುತ್ತಿರುವುದರಿಂದ ಮನುಷ್ಯರಿಗೆ ಕ್ಯಾನ್ಸರ್ ರೋಗ ಬರಲು ಕಾರಣವಾಗುತ್ತಿದೆ. ಕೆಲ ಫುಟ್ಪಾತ್ ಹೋಟೆಲ್ಗಳಲ್ಲಿ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಮನುಷ್ಯನ ಆರೋಗ್ಯ ದೃಷ್ಟಿಯಿಂದ ಹಾಗೂ ಸ್ವತ್ಛಪರಿಸರ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಎಂದು ಹೇಳಿದರು.
ಪ್ಲಾಸ್ಟಿಕ್ನಿಂದ ಮನುಷ್ಯನ ಆರೋಗ್ಯವನ್ನೇ ಹಾಳಾಗುತ್ತಿದೆ. ಬಿ.ಪಿ., ಶುಗರ್ ಇನ್ನಿತರೆಕಾಯಿಲೆಗಳಿಗೆ ಈ ಪ್ಲಾಸ್ಟಿಕ್ ಬಳಕೆ ಕಾರಣವಾಗುತ್ತಿದೆ. ಹೋಟೆಲ್ ಅಸೋಸಿಯೇಷನ್ನವರು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸಬೇಕು. ಜತೆಗೆ ಇತರೆ ಹೋಟೆಲ್ಗಳವರಿಗೂ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ,ಜಿ.ಎಸ್.ಮಂಜುನಾಥ್, ಡಾ. ನವೀನ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್ಕುಮಾರ್ ಇದ್ದರು.