ಗ್ರಾಮದಲ್ಲಿ ಗ್ರಂಥಾಲಯ ನಿರ್ಮಿಸಿ
Team Udayavani, Nov 25, 2019, 5:00 PM IST
ತುಮಕೂರು: ನಮ್ಮ ಗ್ರಾಮದಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ದಿನನಿತ್ಯದ ಮಾಹಿತಿ ತಿಳಿದುಕೊಳ್ಳಲು ಗ್ರಂಥಾಲಯದ ಅವಶ್ಯಕತೆ ಇದೆ ಎಂದು ಮುದಿಮಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿ ತಿಪ್ಪೇಸ್ವಾಮಿ ಒತ್ತಾಯಿಸಿದರು.
ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತ ನಾಡಿದರು. ಕಟಾವೀರನಹಳ್ಳಿಯ ಕೆ.ಮಲ್ಲಣ್ಣ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿ ಅನಿಲ್ ಕುಮಾರ್, ಶಾಲೆಯಲ್ಲಿ ಇಂಗ್ಲಿಷ್ ಬೋಧಿಸುವ ಶಿಕ್ಷಕರಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಇಂಗ್ಲಿಷ್ ಶಿಕ್ಷಕರ ಅವಶ್ಯಕತೆಯಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸ ಬೇಕು ಎಂದು ಮನವಿ ಮಾಡಿದರು. ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಂಜು ನಾಥ್ ಅಮಲಗೊಂದಿ ಮಾತನಾಡಿ, ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆ ಹಕ್ಕು, ವಿಕಾಸ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳಿವೆ. ಇದಕ್ಕೆ ಸಂಬಂಧಿಸಿ ಉತ್ತೇಜನ ನೀಡುವುದು ಎಲ್ಲರ ಜವಬ್ದಾರಿಯಾಗಿದೆ ಎಂದರು.
12 ಶಾಲೆಯ 169 ಮಕ್ಕಳು ಭಾಗವಹಿಸಿ 34 ಸಮಸ್ಯೆ ಹೇಳಿಕೊಂಡರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ. ಭಾಗ್ಯಲಕ್ಷ್ಮೀ, ಹಿಂದಿನ ವರ್ಷದ ಮಕ್ಕಳ ಗ್ರಾಮಸಭೆ ವರದಿ ಮಂಡಿಸಿದರು. ಚರ್ಚಾಸ್ಪರ್ಧೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಗಂಗಮ್ಮ ರಾಜಣ್ಣ, ಪಂಚಾಯಿತಿ ಸಿಬ್ಬಂದಿ ಕಾಂತರಾಜು, ಉಪಾಧ್ಯಕ್ಷ ಮುರ್ಕಣಪ್ಪ, ಶಿಕ್ಷಣ ಇಲಾಖೆಯ ಕೆ.ಎಚ್. ರಂಗನಾಥ, ಎಲ್ಲಾ ಶಾಲೆಯ ಶಿಕ್ಷಕರು, ಅಂಗನಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳ ಹಕ್ಕುಗಳ ಕಾರ್ಯಕರ್ತ ಎನ್.ಆರ್ ಮಧು ಇದ್ದರು.