ಅನಾಥ ಶವಕ್ಕೆ ಪೌರ ಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರೇ ಬಂಧು!
ಕೋವಿಡ್-19ನಿಂದ ಸಾವನ್ನಪ್ಪಿದ ಅನಾಥ ಶವಗಳನ್ನು ಕೊಂಡೊಯ್ದು ಅಂತ್ಯಕ್ರಿಯೆ
Team Udayavani, Apr 24, 2021, 5:49 PM IST
ಚಿಕ್ಕನಾಯಕನಹಳ್ಳಿ: ಕೋವಿಡ್ 2ನೇ ಅಲೆಗೆ ತಾಲೂಕಿನಲ್ಲಿ ಈಗಾಗಲೇ 2 ಬಲಿಯಾಗಿದೆ. ಆದರೇ ಇದಕ್ಕೆಲ್ಲ ಭಯಪಡದೆ, ಸಾವಿಗೀಡಾದ ಕೋವಿಡ್ ರೋಗಿಯನ್ನು ಸಾಗಿಸುವ ಪೌರಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಯೋಜನೆಗಳನ್ನು ರೂಪಿಸಿ: ಕೋವಿಡ್ ಸುಳ್ಳು ಎಂದು ವಾದ ಮಾಡಿದವರೂ ಕೋವಿಡ್ ಆರ್ಭಟಕ್ಕೆ ಹೆದರುತ್ತಿದ್ದಾರೆ. ಜನರ ಜತೆ ಸಂಪರ್ಕ ಕಡಿದುಕೊಳ್ಳುತ್ತಿರುವ, ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರು ಕೊರೊನಾದಿಂದ ಬಳಲುತ್ತಿರುವ ಹಾಗೂ ಕೋವಿಡ್ ದಿಂದ ಸಾವಿಗೀಡಾದವರ ಜತೆ ಸಂಪರ್ಕದಲ್ಲಿ ಇರುವಂತಾಗಿದೆ. ಇವರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ಮೊದಲು ಇಂತಹವರ ಯೋಗಕ್ಷೇಮಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ.
ಸ್ವಚ್ಛತೆ ಜತೆ ಮಾನವೀಯತೆ: ಊರಿನಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲದ್ದಕ್ಕೂ ಪೌರಕಾರ್ಮಿಕರು ಬೇಕು, ಸಮಾರಂಭಕ್ಕೆ ಚೇರ್ ಹಾಕಲು ಪೌರಕಾರ್ಮಿಕರು ಬೇಕು, ಸಾವನ್ನಪ್ಪಿದರೆ ಹೆಣ ಎತ್ತಿಹಾಕಲು ಪೌರಕಾರ್ಮಿಕರು ಬೇಕು , ಹೀಗೆ ಪ್ರತಿಯೊಂದು ಕೆಲಸದಲ್ಲಿ ಪೌರಕಾರ್ಮಿಕರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
ಪೌರಕಾರ್ಮಿಕರನ್ನು ಗೌರವಿಸೋಣ: ಊರಿನ ರಸ್ತೆ ಹಾಗೂ ಚರಂಡಿಯಿಂದ ಹಿಡಿದು ಕಚೇರಿಯ ಕಸ ಗುಡಿಸುವ ಪೌರಕಾರ್ಮಿಕರು, ಇಂದು ಕೋವಿಡ್ ಎಂಬ ಕಾಯಿಲೆ ತಡೆಗಟ್ಟಲು ತಮ್ಮ ಜೀವವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಮನೆ ಮುಂದೆ ಬಂದಾಗ ಅಸಡ್ಡೆ ತೋರಿಸದೆ ಒಂದೆರೆಡು ಒಳ್ಳೆಯ ಮಾತುಗಳನ್ನು ಹಾಡಿ ಗೌರವಿಸೋಣ.
ಪೌರಕಾರ್ಮಿಕರಿಗೆ ಸನ್ಮಾನ: ನಾವು ಯಾರು ಮಾಡದ ಕೆಲಸವನ್ನು ಪೌರಕಾರ್ಮಿಕರು ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವ ಹಾಗೂ ಜೀವನದ ಲೆಕ್ಕವಿಲ್ಲದೆ ಕೋವಿಡ್ ದಿಂದ ಮೃತರಾದವರನ್ನು ಶವಸಂಸ್ಕಾರ ಮಾಡಲು ಹೋಗುವುದು ಸಾಮಾನ್ಯಮಾತಲ್ಲ. ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ, ಮಿಲ್ಟ್ರಿ ಶಿವಣ್ಣ ಪೌರಕಾರ್ಮಿಕರನ್ನು ಅಭಿನಂದಿಸಿದರು.
ಇವರೇ ನಿಜವಾದ ಕೋವಿಡ್ ವಾರಿಯರ್ಸ್ :
ಸಂಬಂಧಿಕರೇ ಕೋವಿಡ್ ದಿಂದ ಮೃತಪಟ್ಟ ವ್ಯಕ್ತಿ ಬಳಿಗೆ ಬರಲು ಹೆದರುತ್ತಾರೆ. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು ಗೌರವಯುತವಾಗಿ ಶವ ಸಂಸ್ಕಾರ ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯ. ಇವರೇ ನಿಜವಾದ ಕೋವಿಡ್ ವಾರಿಯರ್ಸ್ ಎಂದು ಪರಿಸರ ಎಂಜಿನಿಯರ್ ಆದ ಜ್ಯೋತಿಶ್ವರಿ ತಿಳಿಸಿದ್ದಾರೆ.
ಶವ ಸಂಸ್ಕಾರ ಮಾಡಿ ಮಾನವೀಯತೆ : ಅಧಿಕಾರಿಗಳು ದೂರದಲ್ಲಿ ನಿಂತು ಹೇಳಿದ್ದನ್ನು ಚಾಚೂ ತಪ್ಪದೇ ಕೆಲಸ ನಿರ್ವಹಿಸುತ್ತಿದ್ದಾರೆ. ಬುಧವಾರಪಟ್ಟಣದಲ್ಲಿ ಕೋವಿಡ್-19ಗೆ 62 ವರ್ಷದ ವೃದ್ಧೆ ಸಾವನ್ನಪ್ಪಿದರು. ಮಹಿಳೆ ಶವ ಸಾಗಿಸಲು ಯಾರೂ ಇರಲಿಲ್ಲ. ಅಧಿಕಾರಿಗಳು ಕೊಟ್ಟ ಪಿಪಿಇ ಕಿಟ್ ಧರಿಸಿದ ಚಿಕ್ಕನಾಯಕನಹಳ್ಳಿ ಪುರಸಭೆಯ 6 ಪೌರಕಾರ್ಮಿಕರು ಹಾಗೂ ಆ್ಯಂಬುಲೆನ್ಸ್ ಚಾಲಕ, ಶವಾಗಾರದಲ್ಲಿದ್ದ ಶವವನ್ನು ಆ್ಯಂಬುಲೆನ್ಸ್ ಗೆ ಹಾಕಿಕೊಂಡು ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.
–ಚೇತನ್