ಕುಸಿದ ಸರ್ಕಾರಿ ಶಾಲೆ ಛಾವಣಿ; ತಪ್ಪಿದ ಅಪಾಯ
Team Udayavani, Dec 6, 2019, 5:15 PM IST
ಚಿಕ್ಕನಾಯಕನಹಳ್ಳಿ: ತಾಲೂಕಿನ ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯದ ಪ್ರಾಥಮಿಕ ಶಾಲೆಯ ಛಾವಣಿ ಹಾಗೂ ಕಂಬ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಗುರುವಾರ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಕೊಠಡಿ ಸ್ವಚ್ಛಗೊಳಿಸುವಾಗ ಛಾವಣಿ ಕುಸಿದು ಬಿದ್ದಿದ್ದು, ಒಬ್ಬ ವಿದ್ಯಾರ್ಥಿಯ ಬೆರಳಿಗೆ ಸಣ್ಣ ಗಾಯವಾಗಿದೆ. ಕಳೆದ ಸುಮಾರು 20 ವರ್ಷದಿಂದ ಶಾಲೆ ಕೊಠಡಿ ದುರಸ್ತಿ ಮಾಡಿಸಿ ಕೊಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಲೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಆರೋಪ ಮಾಡಿದ್ದಾರೆ.
ಅಧಿಕಾರಿಗಳ ಭೇಟಿ: ಛಾವಣಿ ಕುಸಿದ ಸುದ್ದಿ ತಿಳಿದ ತಕ್ಷಣ ತಾಲೂಕು ತಹಶೀಲ್ದಾರ್ ತೇಜಸ್ವಿನಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿಣಿ ಶಾಲೆಗೆಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಂಡರು. ಶೀಘ್ರವೇ ಹೊಸ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.
ಸರ್ಕಾರಿ ಶಾಲೆಗಳ ಸ್ಥಿತಿ ಕೇಳ್ಳೋರಿಲ್ಲ: ತಾಲೂಕಿನಲ್ಲಿ ಸುಮಾರು 100ಕ್ಕೂ ಅಧಿಕ ಸರ್ಕಾರಿ ಶಾಲೆಗಳು ಅವನತಿ ಕಾಣುವತ್ತ ಸಾಗಿದೆ. ಬಹುತೇಕ ಶಾಲೆಗಳ ಛಾವಣಿ ಇನ್ನೂ ಕೆಂಪು ಹೆಂಚುಗಳದ್ದಾಗಿದೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಮಳೆ ಬಂದರೆ ಸೋರುತ್ತಿದ್ದು, ಶಿಕ್ಷಣ ಇಲಾಖೆ ದುರಸ್ತಿ ಮಾಡಿಸುವ ಕನಿಷ್ಠ ಕಾಳಜಿ ಈವರೆಗೆ ತೋರದಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಶಾಲೆಗಳಲ್ಲಿ ಶಿಕ್ಷಕರೇ ಸ್ವಂತ ಹಣದಿಂದ ಸಣ್ಣ ಪುಟ್ಟ ದುರಸ್ತಿ ಕೆಲಸ ಮಾಡಿಸಿದ್ದಾರೆ. ಸರ್ಕಾರಗಳು
ದುರಸ್ತಿ ಹಂತ ತಲುಪಿರುವ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ.
ಮನವಿಗೆ ಸ್ಪಂದಿಸಿಲ್ಲ: ಶಾಲೆ ಛಾವಣಿ ಹಾಗೂ ಕಟ್ಟಡ ದುರಸ್ತಿ ಮಾಡುವಂತೆ ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು, ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಛಾವಣಿ ಮರದ ತೀರು ಶಿಕ್ಷಕರೇ ರಿಪೇರಿ ಕೆಲಸ ಮಾಡಿಸಿದ್ದರು. ಆದರೂ ಗುರುವಾರ ಬೆಳಗ್ಗೆ ಶಾಲೆ ಕೊಠಡಿ ಛಾವಣಿ ಕುಸಿದಿದೆ.
ಮಕ್ಕಳನ್ನು ಶಾಲೆಗೆ ಕಳಿಸಲ್ಲ: ದೊಡ್ಡಪಾಳ್ಯದಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಆಸೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೇ ಶಾಲೆಯೇ ಮಕ್ಕಳ ಪ್ರಾಣಕ್ಕೆ ಆಪತ್ತು ತರುತ್ತದೆ ಎಂಬ ಸತ್ಯ ತಿಳಿದ ಮಕ್ಕಳ ಪೋಷಕರು, ಮಕ್ಕಳು ಶಿಕ್ಷಣ
ಪಡೆಯದಿದ್ದರೂ ಪರವಾಗಿಲ್ಲ. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ