ಆ್ಯಂಬುಲೆನ್ಸ್ ಸಿಬ್ಬಂದಿ ಸೇವೆಗೆ ಪ್ರಶಂಸೆ
ತಿಂಗಳಗಟ್ಟಲೆ ಕುಟುಂಬ ತೊರೆದು ಸಂದಿಗ್ಧ ಸ್ಥಿತಿಯಲ್ಲಿ ಕೊರೊನಾ ರೋಗಿಗಳ ಸೇವೆ
Team Udayavani, May 9, 2020, 3:14 PM IST
ಸಾಂದರ್ಭಿಕ ಚಿತ್ರ
ತುಮಕೂರು: ಮಹಾಮಾರಿ ಕೋವಿಡ್ ಯುದ್ಧದ ಹೋರಾಟದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ವೈದ್ಯಕೀಯ ವೃತ್ತಿ ನಿರತರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳಂತೆ 108 ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯವೂ ಕೂಡ ಶ್ಲಾಘನೀಯ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿ ತರು, ಶಂಕಿತರನ್ನು ಜೀವದ ಹಂಗು ತೊರೆದು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ತಮ್ಮ ಮನೆ, ಕುಟುಂಬ ಸದಸ್ಯರನ್ನು ಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಆ್ಯಂಬುಲೆನ್ಸ್ ಸಿಬ್ಬಂದಿ ಕೋವಿಡ್ ಸೋಂಕಿತರು, ಶಂಕಿತರನ್ನು ಆಸ್ಪತ್ರೆಗೆ ಕರೆ ತರುವ ಮೂಲಕ ಸೇವಾಮನೋಭಾವ ಪ್ರದರ್ಶಿಸಿದ್ದಾರೆ.
ಎಂಟು ಆ್ಯಂಬುಲೆನ್ಸ್ ಬಳಕೆ: ಜಿವಿಕೆ- ಇಎಂಆರ್ಐನಿಂದ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬು ಲೆನ್ಸ್ಗಳ 35 ವಾಹನಗಳು ತುಮಕೂರು
ಜಿಲ್ಲೆಯಲ್ಲಿದ್ದು, ಇವುಗಳಲ್ಲಿ 8 ವಾಹನಗಳನ್ನು ಕೋವಿಡ್ ಸೋಂಕಿತರು, ಅವರ ಕುಟುಂಬ ದವರನ್ನು ಕ್ವಾರೆಂಟೈನ್ ಮಾಡಲು, ಆಸ್ಪತ್ರೆ ಸಿಬ್ಬಂದಿಯನ್ನು ಕರೆತರಲು ಬಳಸಿಕೊಳ್ಳ
ಲಾಗುತ್ತಿದೆ.
ಸಮರೋಪಾದಿ ಕಾರ್ಯ: ಕೋವಿಡ್ ಹೋರಾಟದಲ್ಲಿ ತೊಡಗಿಕೊಂಡಿರುವ ಆ್ಯಂಬುಲೆನ್ಸ್ ಸಿಬ್ಬಂದಿ 2 ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವಾಹನದಲ್ಲಿ ಚಾಲಕ
ಹಾಗೂ ಸಹಾಯಕ ನರ್ಸ್ಗಳ ಸುರಕ್ಷತೆಗಾಗಿ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಜರ್ ಒಳಗೊಂಡಂತೆ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
15 ದಿನ ಮನೆಯಿಂದ ದೂರ: ಸೋಂಕಿತರನ್ನು ಕರೆತರುವ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ ಕಾರ್ಯ ಮುಗಿದ ಬಳಿಕ ಅವರನ್ನು 1 ವಾರಗಳ ಕಾಲ ಪ್ರತ್ಯೇಕವಾಗಿ ಕ್ವಾರೆಂಟೈನ್
ನಲ್ಲಿ ಇಡಲಾಗುತ್ತದೆ. ಇದರಿಂದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ತಮ್ಮ ಕುಟುಂಬದ ವರನ್ನು ಸುಮಾರು 15 ದಿನಗಟ್ಟಲೇ ದೂರವೇ ಉಳಿಯುವಂತಹ ಸ್ಥಿತಿ ಉಂಟಾಗಿದೆ.
ಜಿವಿಕೆಯಿಂದ ಸಿಬ್ಬಂದಿಗೆ ವಿಶೇಷ ತರಬೇತಿ:
ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರೊಂದಿಗೆ ಸಹಕಾರಿಯಾಗಿ ನಿಂತಿರುವ ಆ್ಯಂಬುಲೆನ್ಸ್ ಸಿಬ್ಬಂದಿಗೂ ಸಹ ವಿಶೇಷ ತರಬೇತಿ ನೀಡಲಾಗಿದೆ. ಸೋಂಕಿತರನ್ನು ಕರೆತರುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಸೋಂಕಿತರನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸುವ ಬಗ್ಗೆ ತರಬೇತಿ ನೀಡಲಾಗಿದೆ.
ಪ್ರಶಂಸೆ: ತಮ್ಮ ಜೀವದ ಹಂಗು ತೊರೆದು ವೈದ್ಯರಿಗೆ ಸಹಕಾರಿಯಾಗಿ ಸೈನಿಕರಂತೆ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಸೈನಿಕರುಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್. ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯ ಅವರು
ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವೈರಸ್ ಸೋಂಕಿತರು ಹಾಗೂ ಶಂಕಿತರನ್ನು ಚಿಕಿತ್ಸೆ, ಸುರಕ್ಷತಾ ಜಾಗಕ್ಕೆ ಸಾಗಿಸುವಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ಕರ್ತವ್ಯ ನಿರ್ವಹಣೆ ಸಮಯದಲ್ಲಿ ಅಳವಡಿಸಿಕೊಳ್ಳಲು ಸಿಬ್ಬಂದಿಗೆ ರಕ್ಷಾ ಕವಚ ನೀಡಲಾಗಿದೆ. ಕ್ವಾರೆಂಟೈನ್ ಸಮಯದಲ್ಲಿ ಉಳಿದು ಕೊಳ್ಳಲು ಕೊಠಡಿ, ಊಟ, ಸ್ನಾನ ಇತ್ಯಾದಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ.
●ಹಫಿಸ್ ಉಲ್ಲಾ, ಜಿವಿಕೆ ಪ್ರಾದೇಶಿಕ ವ್ಯವಸ್ಥಾಪಕ