ರೈತರ, ಉದ್ಯಮಿಗಳ ಹಿತ ಕಾಯಲು ಬದ್ಧ
Team Udayavani, Jun 8, 2020, 7:32 AM IST
ತುಮಕೂರು: ಭತ್ತ ಬೆಳೆಯುವ ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರ ನಡುವೆ ಇರುವ ಸಮಸ್ಯೆಯನ್ನು ಅರಿತು ಬಗೆಹರಿಸಲು ಬಂದಿದ್ದು, ನಾವೆಲ್ಲರೂ ರೈತರ ಮಕ್ಕಳಾಗಿದ್ದೇವೆ, ಆ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಹೇಳಿದರು.
ನಗರದ ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್ನಲ್ಲಿ ಅಕ್ಕಿ ಗಿರಣಿ ಮಾಲೀಕರು ಮತ್ತು ರೈತರೊಂದಿಗೆ ಭಾನುವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ರಾಜ್ಯದ ರೈತರು ಹಾಗೂ ಉದ್ಯಮಿಗಳ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಲಾಕ್ಡೌನ್ ನಿಂದಾಗಿ ಸಾಕಷ್ಟು ಗಿರಣಿ ಮಾಲೀಕರು ಸಂಕಷ್ಟಕ್ಕೀಡಾಗಿ ದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಒಳ್ಳೆಯ ನಿರ್ಧಾರ ಕೈಗೊಳ್ಳುವೆ: ರೈತರು ಭತ್ತ ಬೆಳೆದು ಗಿರಣಿಗಳಿಗೆ ತಂದರೆ ಮಾತ್ರ ಗಿರಣಿ ಮಾಲೀಕರು ಉಳಿಯಲು ಸಾಧ್ಯ. ಹಾಗಾಗಿ ರೈತರು ಮತ್ತು ವಾಣಿಜ್ಯೋದ್ಯಮಿಗಳಾದ ಗಿರಣಿ ಮಾಲೀಕರು ಇಬ್ಬರ ಹಿತದೃಷ್ಟಿಯಿಂದ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯ ಗಳ ಮಾದರಿಯಲ್ಲಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರ ಬಗ್ಗೆ ಕಾಳಜಿ: ಮುಖ್ಯಮಂತ್ರಿ ಯಡಿಯೂರಪ್ಪ ರೈತರಾಗಿದ್ದವರು, ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ. ಅದೇ ರೀತಿ ಗಿರಣಿ ಮಾಲೀಕರ ಸಂಕಷ್ಟಗಳು ಅವರಿಗೆ ಗೊತ್ತಿವೆ. ಅವರಿಂದ ನಾವೆಲ್ಲಾ ಒಳ್ಳೆಯ ತೀರ್ಮಾನವನ್ನು ನಿರೀಕ್ಷಿಸಬಹುದು ಎಂದು ಗಿರಣಿ ಮಾಲೀಕರಿಗೆ ಭರವಸೆ ನೀಡಿದರು.
ರೈತರಿಗೆ ನೆರವಾಗುವ ಯೋಜನೆ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರೈತರು ಮತ್ತು ಆಹಾರ ಉತ್ಪಾದನೆಗೆ ಸಂಬಂ ಧಿಸಿದಂತಹ ಉದ್ದಿಮೆಗಳಿಗೆ ಯಾವ ತೊಂದ ರೆಯೂ ಆಗದಂತೆ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಆಹಾರ ಸಚಿವರು ರೈತರು ಹಾಗೂ ಉದ್ಯಮಿಗಳೊಂದಿಗೆ ಚರ್ಚೆ ನಡೆ ಸುವ ಮೂಲಕ ಉದ್ಯೋಗ ಸೃಷ್ಟಿಯೊಂದಿಗೆ ರೈತರಿಗೆ ನೆರವಾಗುವ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದರು.
ಭತ್ತ ಖರೀದಿಸಲು ಸಿದ್ಧ: ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್ ಮಾಲೀಕ ಶ್ರೀಧರಬಾಬು ಮಾತ ನಾಡಿ, ಕೇಂದ್ರ ಸರ್ಕಾರ ಭತ್ತ ಖರೀದಿಗೆ ನಿಗದಿ ಮಾಡಿರುವ ಎಂಎಫ್ಟಿ ದರದಲ್ಲೇ ನೇರವಾಗಿ ರೈತರಿಂದ ಭತ್ತ ಖರೀದಿಸಲು ನಾವು ಸಿದ್ಧರಿದ್ದೇವೆ ಎಂದರು. ಅರಣ್ಯ ಸಚಿವ ಆನಂದ್ಸಿಂಗ್, ಶಾಸಕ ಸೋಮನಿಂಗಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಯದರ್ಶಿ ಎ.ಎನ್. ಪ್ರಸಾದ್, ಆಯುಕ್ತೆ ಶ್ಯಾಮಲಾ, ಇಕ್ಬಾಲ್, ವಿಶ್ವರಾಧ್ಯ ಇದ್ದರು.
ಮಠದಲ್ಲಿ ಪರಿಸರ ದಿನಾಚರಣೆ: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್, ಆಹಾರ ಸಚಿವ ಕೆ.ಗೋಪಾಲಯ್ಯ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಅರಣ್ಯ ಇಲಾಖೆಯಿಂದ ಪರಿಸರ ದಿನಾಚರಣೆ ಆಚರಿಸಿದರು. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಠದ ಆವರಣದಲ್ಲಿ ಪರಿಸರ ದಿನಾಚರಣೆ ನೆನಪಿಗಾಗಿ ಗಿಡ ನೆಡುವ ಕಾರ್ಯ ಕ್ರಮದಲ್ಲಿ ಔಷಧಿ ಗಿಡಗಳನ್ನು ನೆಟ್ಟರು. ಡಿಎಫ್ಒ ಗಿರೀಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ನಟರಾಜು ಇದ್ದರು.