ಶ್ರೀನಿವಾಸ್ ದಕ್ಷತೆ, ಬದ್ಧತೆ ಇಲ್ಲದ ರಾಜಕಾರಣಿ
Team Udayavani, Dec 10, 2022, 4:53 PM IST
ಗುಬ್ಬಿ: ಕಾಂಗ್ರೆಸ್ ಪಕ್ಷವನ್ನು 12 ಸಾವಿರ ಮತಗಳ ಗೂಡು ಎಂದು ಹೇಳಿ ಅಹಿಂದ ವರ್ಗವನ್ನು ಅವಮಾನಿಸಿದ ಗುಬ್ಬಿ ಶಾಸಕ ಎಸ್. ಆರ್.ಶ್ರೀನಿವಾಸ್ ಒಡೆದು ಆಳುವ ನೀತಿ ಅನುಸರಿಸಿ ವೀರಶೈವ ಲಿಂಗಾಯತ ಸಮುದಾಯದ ವಿರೋಧಿ ಎನಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹತ್ತು ತಲೆಯ ರಾವಣ ಮುಖವಾಡದ ಭಿತ್ತಿ ಚಿತ್ರ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಗೂಡು ಕಟ್ಟುವ ಕಾಯಕ ಮಾಡುತ್ತಿದ್ದೇವೆ. ನೀವು ಸ್ವತಂತ್ರವಾಗಿ ನಿಂತು ಗೆದ್ದವರು, ನೀವೇ ಮತ್ತೂಮ್ಮೆ ಪಕ್ಷೇತರವಾಗಿ ನಿಲ್ಲಿ ಎಂದು ಸವಾಲೆಸೆದರು. ಅಧಿಕಾರದ ದಾಹದಲ್ಲಿ ಪಕ್ಷಾಂತರ ನಿಲುವು ತಾಳಿರುವ ನೀವು ದಕ್ಷತೆ ಮತ್ತು ಬದ್ಧತೆ ಇಲ್ಲದ ರಾಜಕಾರಣಿ ಆಗಿದ್ದೀರಿ. ಪಕ್ಷದ ವರಿಷ್ಠರು, ಹಿರಿಯರನ್ನು ಹೀಯಾಳಿಸಿ ಮಾತನಾಡುವ ಪ್ರವೃತ್ತಿ ಅವರ ತಂದೆ ಸಮಾನರಾದ ಸಂಸದರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದೂ ಎಲ್ಲರಿಗೂ ತಿಳಿದಿದೆ ಎಂದರು.
ಅಧಿಕಾರದ ಆಸೆಗಾಗಿ ಸ್ವಂತಿಕೆ ಇಲ್ಲದ ನೀವು ಗೂಡು ಹುಡುಕುತ್ತಿದ್ದೀರಿ, ತಾಕತ್ತು ಬಗ್ಗೆ ಸದಾ ಮಾತನಾಡುವ ನೀವು ಹಣ, ಹೆಂಡ, ಹಂಚದೇ ಚುನಾವಣೆ ನಡೆಸಲು ನೀವು ಮಣ್ಣಮ್ಮ ದೇವಸ್ಥಾನಕ್ಕೆ ಬನ್ನಿ, ಪ್ರಮಾಣ ಮಾಡಿ ಯಾವುದೇ ಆಮಿಷವೊಡ್ಡದೇ ಚುನಾವಣೆ ನಡೆಸಲು ಸಿದ್ಧರೆಂದು ತಿಳಿಸಿ, ಯಾರಿಗೆ ಮತ ಹೆಚ್ಚು ಬೀಳುತ್ತದೆ ನೋಡಿ ಎಂದು ಸವಾಲೆಸೆದರು.
ಕಳೆದ 20 ವರ್ಷದ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲಲ್ಲು ನಿಮ್ಮದೂ ಯಾವ ವರ್ಚಸ್ಸು ಕೆಲಸ ಮಾಡಿಲ್ಲ. ಅಂದಿನ ಬದಲಾವಣೆ ಅಲೆ ನಿಮ್ಮನ್ನು ಕರೆದೊಯ್ದಿದೆ. ಅದೇ ಸಂದರ್ಭದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವುದು ಕಷ್ಟ ಎಂದು ತಿಳಿದು ಜೆಡಿಎಸ್ ನತ್ತ ಹೋಗಿದ್ದೀರಿ ಎಂದರು.
ಈ ಸಂದರ್ಭದಲ್ಲಿ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ನರಸಿಂಹಯ್ಯ, ಮುಖಂಡರಾದ ಟಿ.ಆರ್. ಚಿಕ್ಕರಂಗಯ್ಯ, ಶ್ರೀನಿವಾಸ್, ಪ.ಪಂ ಸದಸ್ಯ ಸಾಧಿಕ್, ಸಲೀಂಪಾಷಾ, ಸೇವಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಡಬ ಶಿವಕುಮಾರ್, ಶಿವಾನಂದ್, ರಂಗನಾಥ್, ಸೌಭಾಗ್ಯಮ್ಮ, ಜಯಣ್ಣ, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಬಂಡಾಯ ಅಭ್ಯರ್ಥಿಯಾಗುವ ಎಚ್ಚರಿಕೆ: ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಸೋಲುವ ಭೀತಿಯಲ್ಲಿ ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿದರು. ಮುದ್ದಹನುಮೇಗೌಡ ಅವರ ಮೂಲಕ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿಯಲ್ಲಿ ಸ್ವತಂತ್ರ ಅಭ್ಯರ್ಥಿ ಸೃಷ್ಟಿಸಿ ಲಿಂಗಾಯತ ಮತಗಳ ವಿಭಜನೆ ಹೀಗೆ ಕುತಂತ್ರ ಮಾಡಿ ಚುನಾವಣೆಯಲ್ಲಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ತಂತ್ರ ಮಾಡಿದರು. ಈ ಬಾರಿ ಕಾಂಗ್ರೆಸ್ ಗೆಲುವು ಅರಿತು ಇತ್ತ ಬರುತ್ತಿದ್ದಾರೆ. ಮೊದಲಿನಿಂದ ಪಕ್ಷ ಸಂಘಟನೆ ಮಾಡಿದ ನಮ್ಮಲ್ಲಿ ಇರುವವರಿಗೆ ಟಿಕೆಟ್ ನೀಡಿ, ವಲಸೆ ಅಭ್ಯರ್ಥಿ ತರುವುದಾದರೆ ನಾನು ಸಹ ಈ ಬಾರಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗುವೆ ಎಂದು ಹೈಕಮಾಂಡ್ ಗೆ ನೇರ ಎಚ್ಚರಿಕೆ ನೀಡಿದರು. ರಾ
ಜ್ಯಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡಿ ಮಾತೃ ಪಕ್ಷ ದೂರ ಮಾಡಿ ವರಿಷ್ಠರ ಬಗ್ಗೆ ಸಲ್ಲದ ಮಾತು ಆಡಿರುವ ಶಾಸಕರು ಈ ಕ್ಷಣ ರಾಜೀನಾಮೆ ಕೊಟ್ಟು ಕ್ಷೇತ್ರದಲ್ಲಿ ಓಡಾಡಲಿ ಎಂದು ಆಗ್ರಹಿಸಿದರು.