ಜಿಲ್ಲೆಯ ಮೊದಲ ಬಲಿಗೆ ಬೆಚ್ಚಿ ಬಿದ್ದ ಜನತೆ
Team Udayavani, Mar 28, 2020, 3:38 PM IST
ತಿಪಟೂರು: ತುಮಕೂರು ಜಿಲ್ಲೆಯಲ್ಲಿ ಕೋವಿಡ್ 19 ಮಹಾ ಮಾರಿಯಿಂದ ಶಿರಾ ಮೂಲದ ವ್ಯಕ್ತಿ ಮೊದಲ ಸಾವಿಗೆ ತಾಲೂಕಿನ ಜನರು ಸಹ ಭಯಭೀತರಾಗಿದ್ದಾರೆ.
ತಿಪಟೂರಿನ ವ್ಯಕ್ತಿ ಬಗ್ಗೆ ಶಂಕೆ: ಕೋವಿಡ್ 19 ಮಹಾಮಾರಿಗೆ ಬಲಿಯಾಗಿರುವ ಶಿರಾ ವ್ಯಕ್ತಿಯ ಜೊತೆ ತಿಪಟೂರಿನ ಗಾಂಧಿ ನಗರದ 53 ವರ್ಷದ ವ್ಯಕ್ತಿಯೊಬ್ಬರೂ ಸಹ ಓಡಾಡಿದ್ದರು ಎಂದು ಕೆಲ ಮಾಧ್ಯಮಗಳ ಸುದ್ದಿಯಂತೂ ತಿಪಟೂರಿನ ಜನತೆಗೆ ನುಂಗಲಾರದ ತುತ್ತಾಗಿದೆ. ಎಲ್ಲರ ಮೊಬೈಲ್ನಲ್ಲೂ ಇದೇ ಸುದ್ದಿಯ ತುಣುಕು, ಮಾತು. ಆದರೆ ತಾಲೂಕಿನ ಯಾವ ಅಧಿಕಾರಿಯೂ ದೃಢಪಡಿಸುತ್ತಿಲ್ಲದಿರುವುದು ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದ್ದರೂ ಈ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿಟ್ಟಿದ್ದು ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಗ್ರಾಮದೊಳಗೆ ಬರದಂತೆ ಬೇಲಿ: ತಾಲೂಕಿನ ಕೆಲ ಗ್ರಾಮ ಗಳಿಗೆ ಹೊರಗಿನವರು ಬಾರದಂತೆ ಮುಳ್ಳುಬೇಲಿ, ತಂತಿಬೇಲಿ, ಕಲ್ಲಿನ ಅಡ್ಡಗೋಡೆ ಇತರೆ ಕ್ರಮಗಳಿಂದ ತಡೆಯೊಡ್ಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲೇ ಕೆಲವರಿಗೆ ಗೊಂದಲವಿದ್ದು ಕೆಲವರು ತಡೆ ಗೋಡೆ ನಿರ್ಮಿಸಿದ್ದು ಈ ಬಗ್ಗೆ ತಾಲೂಕು ಆಡಳಿತ ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಬೇಕು.
ಗ್ರಾಮಗಳಲ್ಲಿ ತಿಳಿವಳಿಕೆ: ತಾಲೂಕು ಆಡಳಿತ, ಆರೋಗ್ಯ ಇಲಾಖೆಗಳು ತಾಲೂಕಿನ ವಿವಿಧ ಅಧಿಕಾರಿಗಳ ತಂಡ ರಚಿಸಿ ಪ್ರತಿ ಗ್ರಾಮಗಳಿಗೂ ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಆರೋಗ್ಯ, ಶಿಕ್ಷಣ ಇತರೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಕೋವಿಡ್ 19 ಮಹಾಮಾರಿ ತಡೆಯ ಬಗ್ಗೆ ಪ್ರಮುಖ ತಿಳಿವಳಿಕೆ ನೀಡಲಾಗುತ್ತಿದ್ದು, ಗ್ರಾಮಗಳಲ್ಲಿ ಯಾವುದಾದರೂ ಅನುಮಾನಿತ ಸೋಕಿತರು ಇದ್ದರೆ ಮಾಹಿತಿ ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.