ಕೋವಿಡ್ 19: ಸುರಕ್ಷತಾ ಕ್ರಮಗಳ ಪರಿಶೀಲನೆ
Team Udayavani, Apr 7, 2020, 4:01 PM IST
ತುಮಕೂರು: ಕೋವಿಡ್-19 ಸೋಂಕು ರೋಗದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅವರು ಸೋಮವಾರ ಗಾಂಧಿ ನಗರದ ಸರ್ಕಾರಿ ಬಾಲಕರ ಬಾಲಮಂದಿರ ಹಾಗೂ ಅಮರ ಜ್ಯೋತಿ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ಒದಗಿಸಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ನಂತರ ಬಾಲಮಂದಿರದ ಮಕ್ಕಳ ಆರೋಗ್ಯ ವಿಚಾರಿಸಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಪ್ರತಿ 2 ಗಂಟೆಗಳಿಗೊಮ್ಮೆ ಕೈಗಳನ್ನು ತೊಳೆಯಬೇಕೆಂದು ಮಕ್ಕಳಿಗೆ ಸಲಹೆ ನೀಡಿ, ಕಾಲಕಾಲಕ್ಕೆ ಮಕ್ಕಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ಬಾಲಮಂದಿರದಲ್ಲಿ 7 ಬಾಲಕರು ಹಾಗೂ 21 ಬಾಲಕಿಯರಿದ್ದು, ಎಲ್ಲಾ ಮಕ್ಕಳಿಗೂ ಕಣ್ಣು, ಬಾಯಿ, ಮೂಗನ್ನು ಮುಟ್ಟಿಕೊಳ್ಳದಂತೆ ಪ್ರತ್ಯೇಕವಾಗಿ ಹ್ಯಾಂಡ್ ಕರ್ಚಿಫ್ಗಳನ್ನು ಹಾಗೂ ಹ್ಯಾಂಡ್ ಟವಲ್ಗಳನ್ನು ಒದಗಿಸಲಾಗಿದೆ. ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಾಲಕರ ಬಾಲ ಮಂದಿರದ ಅಧೀಕ್ಷಕ ಶಶಿಧರ್, ಬಾಲಕಿಯರ ಬಾಲಮಂದಿರದ ದರ್ಜೆ-2 ಅಧೀಕ್ಷಕಿ ಕಲ್ಪನಾ, ಮತ್ತಿತರರು ಉಪಸ್ಥಿತರಿದ್ದರು.