ಟೆಸ್ಟ್ಗಾಗಿ ಆಸ್ಪತ್ರೆ ಮುಂದೆ ಸಾಲು..ಸಾಲು…
ಕೋವಿಡ್ ಎರಡನೇ ಅಲೆಗೆ ಬೆಚ್ಚುತ್ತಿರುವ ನಾಗರಿಕರು
Team Udayavani, Apr 27, 2021, 4:25 PM IST
ತುಮಕೂರು: ತುಮಕೂರಿನಲ್ಲಿ ನಿರೀಕ್ಷೆಗೂ ಮೀರಿ ಕೋವಿಡ್ ಸೋಂಕಿತರು ದಿನೇ ದಿನೆ ಹೆಚ್ಚಳ ಆಗುತ್ತಲೇ ಇದ್ದಾರೆ. ಮನೆಯಲ್ಲಿ ಇದ್ದವರಿಗೂ ಸೋಂಕು ವ್ಯಾಪಿಸತೊಡಗಿದೆ. ಸೋಂಕು ಯಾವರೂಪದಲ್ಲಿ ಬರುತ್ತದೆ ಎಂದು ಯಾರಿಗೂ ತಿಳಿಯದ ಸ್ಥಿತಿ ಇದ್ದು, ನಗರದಲ್ಲಿ ಕೊವೀಡ್ ಸೊಂಕು ಪರೀಕ್ಷಿಸಿಕೊಳ್ಳಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ನಗರದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯನ್ನೂ ಎಲ್ಲ ಕಡೆ ತೀವ್ರವಾಗಿ ಮಾಡುತ್ತಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹೆಚ್ಚು ಜನ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ಕೋವಿಡ್ ಮಹಾಮಾರಿ ತುಮಕೂರುತಾಲೂಕಿನಲ್ಲಿಯೇ ಹೆಚ್ಚು ಸೋಂಕಿತರು ಇರುವುದುಕಂಡು ಬಂದಿದೆ. ಅದರಲ್ಲಿಯೂ ತುಮಕೂರುನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.
ನಗರದಲ್ಲಿ ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ ಕಂಡುಬಂದಿದ್ದ 1,235 ಒಟ್ಟು ಸೋಂಕಿತರಲ್ಲಿ 508 ಸೋಂಕಿತರು ನಗರದಲ್ಲಿಯೇ ಕಂಡು ಬಂದಿದ್ದು, ಇಲ್ಲಿಯವರೆಗೆ ತುಮಕೂರು ತಾಲೂಕಿನಲ್ಲಿ 15,640ಸೋಂಕಿತರು ಇದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 39,709 ಒಟ್ಟು ಸೋಂಕಿತರು ಇದ್ದಾರೆ. ಜಿಲ್ಲೆಯಲ್ಲಿ29,438 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಅದರಲ್ಲಿ ತುಮಕೂರುತಾಲೂಕಿನಲ್ಲಿ 10,646 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 9,767 ಒಟ್ಟುಸಕ್ರಿಯ ಪ್ರಕರಣಗಳಿದ್ದು, ತಾಲೂಕಿನಲ್ಲಿಯೇ 4,745ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 504 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ.
ಕೋವಿಡ್ ಟೆಸ್ಟ್ಗೆ ಮುಗಿಬಿದ್ದ ಜನ: ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ಮೇಲಿಂದ ಮೇಲೆ ಹೇಳುತ್ತಿದ್ದರೂ , ಅದಕ್ಕೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳದ ನಗರದ ಜನ ಈಗ ಸೋಂಕು ಹೆಚ್ಚಾಗುತ್ತಲೇ ಪರೀಕ್ಷೆ ಮಾಡಿಸಿಕೊಳ್ಳಲು ಹೆಚ್ಚು ಜನ ಬರುತ್ತಿದ್ದಾರೆ. ಜ್ವರ, ತಲೆನೋವು, ಕೆಮ್ಮು, ಶೀತ ಇತರೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ
ಸೋಂಕು ಕಂಡು ಬರುತ್ತಿರುವುದರಿಂದ ಆತಂಕಗೊಂಡಿರುವ ಜನ ಇರಲಿ ನಮ್ಮದೂ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದು ಬರುತ್ತಿರುವವರೇ ಹೆಚ್ಚಾಗಿದ್ದು, ಇದರಿಂದರೋಗಲಕ್ಷಣ ಇರುವವರೂ ಕೊರೊನಾ ಪರೀಕ್ಷೆಗಾಗಿಗಂಟಾನುಗಂಟ್ಟಲೆ ಕೋವಿಡ್ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಮುಂದೆ ಸಾಲಿನಲ್ಲಿ ನಿಲ್ಲಬೇಕಾಗಿದೆ.
3 ದಿನವಾದರೂ ವರದಿ ಬಂದಿಲ್ಲ :
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಕೋವಿಡ್ ಸೋಂಕುಲಕ್ಷಣ ಇರುವವರು ಹಾಗೂ ಸಾಮಾನ್ಯ ಜನ ಒಂದೇ ಕಡೆ ನಿಲ್ಲಬೇಕು. ಇಲ್ಲಿ ಸಿಬ್ಬಂದಿ ಕಡಿಮೆ ಇದ್ದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಇಲ್ಲಿ ಪರೀಕ್ಷೆಗೆ ಬರುವವರ ಮೂಗು ಮತ್ತು ಗಂಟಲಿನ ದ್ರವ ಸಂಗ್ರಹಣೆ ಮಾಡುವುದು ತಡವಾಗುತ್ತಿದೆ.ನಗರದ ವಿವಿಧಕಡೆಗಳಲ್ಲಿ ಕೋವಿಡ್ ಪರೀಕ್ಷೆಗೆ ನೀಡಿದರೆ ಅದರಮಾಹಿತಿಯೇ ಬರುತ್ತಿಲ್ಲ ಎಂದು ಸಾರ್ವಜನಿಕರುದೂರುತ್ತಿದ್ದು, ಇಲ್ಲಿಯ ಶಾಂತಿನಗರ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ನೀಡಿ ಮೂರುದಿನವಾದರೂ ವರದಿ ಬಂದಿಲ್ಲ. ಜಿಲ್ಲಾಡಳಿತ ಮಾದರಿ ನೀಡಿ ಒಂದು ದಿನಕ್ಕೇ ವರದಿ ಬರುತ್ತಿದೆ ಎಂದು ಹೇಳುತ್ತಿದೆ. ಆದರೆ, ನಾಲ್ಕು ದಿನವಾದರೂ ಮಾಹಿತಿ ಬರದೇ ಇರುವುದರಿಂದ ಕೋವಿಡ್ ಸೋಂಕು ಮಾದರಿಯ ಲಕ್ಷಣ ಇರುವವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ನನಗೆ ಜ್ವರ, ತಲೆ ನೋವು ಬೇರೆ ಆಸ್ಪತ್ರೆಗೆ ತೋರಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ವರದಿತೋರಿಸಿ ಎಂದು ಹೇಳುತ್ತಾರೆ. ನಾನು ಮೂರು ದಿನದ ಹಿಂದೆ ಶಾಂತಿನಗರದಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಇನ್ನು ವರದಿ ಬಂದಿಲ್ಲ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಈಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. –ಜಿ.ಆರ್.ರಾಜಣ್ಣ, ನಾಗರಿಕ
– ಚಿ.ನಿ.ಪುರುಷೋತ್ತಮ್