ಪೂರ್ವ ಮುಂಗಾರು ಸಂಪೂರ್ಣ ವಿಫಲ
ಜಿಲ್ಲೆಗೆ ಮುಂಗಾರು ಮಳೆ ಬರತ್ತೋ ಬರಲ್ವೋ ಎಂದು ಆಕಾಶದತ್ತ ಮುಖ ಮಾಡಿದ ಅನ್ನದಾತ
Team Udayavani, May 21, 2019, 10:25 AM IST
ತುಮಕೂರು ಜಿಲ್ಲೆಯಲ್ಲಿ ಶೇಂಗಾ ಬೆಳೆ ಬಿತ್ತನೆ ಮಾಡಲು ರೈತರು ಭೂಮಿಯನ್ನು ಹಸನು ಮಾಡಿದ್ದು, ಮಳೆಗಾಗಿ ಕಾಯುತ್ತಿದ್ದಾರೆ
ತುಮಕೂರು: ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆ ಆಶಾದಾಯಕವಾಗಿ ಬಂದು ಕೃಷಿಗೆ ನೆರ ವಾಗುತ್ತದೆ ಎಂದು ಭಾವಿಸಿದ್ದ ಕಲ್ಪತರು ನಾಡಿನ ಜನರಿಗೆ ಈ ಬಾರಿಯ ಪೂರ್ವ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಭರಣಿ ಮಳೆ ಬಂದರೆ ಧರಣಿ ಯಲ್ಲ ಬೆಳೆ ಎನ್ನುವ ನಿರೀಕ್ಷೆ ಉಸಿಯಾಗಿದೆ ಭರಣಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ದ್ವಿದಳ ಧಾನ್ಯ ಬೆಳೆ ಉತ್ತಮವಾಗಿ ಬೆಳೆದು ಬಂಪರ್ ಬೆಳೆ ನಿರೀಕ್ಷಿಸಿದ್ದ ರೈತರಿಗೆ ನಿರಾಶೆ ಮೂಡಿ ಸಿದ್ದು. ಬಿತ್ತನೆಯೂ ಆಗದೇ ಬಿತ್ತಿದ್ದ ಬೆಳೆಯೂ ಒಣಗಿ ರೈತರು ಕಂಗಾಲಾಗಿದ್ದಾರೆ.
ಬಹುತೇಕ ಬಯಲುಸೀಮೆ ಪ್ರದೇಶವಾಗಿರುವ ತುಮಕೂರು ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲ ರೈತರಿಗಿಲ್ಲ, ತೋಟ ಗಾರಿಕೆ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ. ಪೂರ್ವ ಮುಂಗಾರು ಮಳೆಯಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ, ಭಾಗಗಳಲ್ಲಿ ಹೆಸರು, ಉದ್ದು, ಅಲಸಂದಿ, ಬೆಳೆ ಬೆಳೆದು ತಮ್ಮ ಆರ್ಥಿಕತೆಯನ್ನು ಅಬಿವೃದ್ಧಿ ಪಡಿಸಿಕೊಳ್ಳುತ್ತಿದ್ದರು. ಮುಂಗಾರು ಮಳೆ ಆರಂಭವಾಗುವ ವೇಳೆಗೆ ಈ ಬೆಳೆಯನ್ನು ಕಟಾವು ಮಾಡಿ ಮುಂದೆ ಮತ್ತೆ ರಾಗಿ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರನ್ನು ಆಂತಕಕ್ಕೀಡುಮಾಡಿದೆ.
ದಾನ್ಯ ಬಿತ್ತನೆ: ಪೂರ್ವ ಮುಂಗಾರು ಮಳೆ ಈ ಭಾರಿ ಜಿಲ್ಲೆಯಾದ್ಯಂತ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದು, ರೈತರು ನಿರೀಕ್ಷೆಯಂತೆ ಮಳೆ ಬಂದಿಲ್ಲ, ಜಿಲ್ಲೆಯಲ್ಲಿ 479950 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲಿದ್ದು, ಅದರಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು 13045 ಹೆಕ್ಟೇರ್ ಪ್ರದೇಶದಲ್ಲಿ, ತೊಗರಿ 1500 ಹೆಕ್ಟೇರ್, ಅಲಸಂದೆ 1627 ಹೆಕ್ಟೇರ್, ಎಳ್ಳು 853 ಹೆಕ್ಟೇರ್, ಶೇಂಗಾ 790 ಹೆಕ್ಟೇರ್ ಬಿತ್ತನೆಯಾಗಬೇಕಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಆರಂಭದಲ್ಲಿಯೇ ಕೈಕೊಟ್ಟಿದ ರಿಂದ 12800 ಹೆಕ್ಟೇರ್ ಪೂರ್ವ ಮುಂಗಾರು ಬೆಳೆ ಬಿತ್ತನೆ ಮಾಡಲು ಸಿದ್ಧತೆ ನಡೆದಿತ್ತು, ಆದರೆ ಕೇವಲ 1696 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ. 420 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಉದ್ದು ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಏಪ್ರಿಲ್ ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆ ಬರುತ್ತದೆ. ಈ ಮಳೆಯಿಂದ ರೈತರು ಭೂಮಿ ಹಸನು ಮಾಡಿ ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ. ಆದರೆ ಈ ಬಾರಿ ಸುರಿದಿರುವ ಮಳೆಯ ಪ್ರಮಾಣ ನೋಡಿದರೆ ವಾಡಿಕೆ ಮತ್ತು ವಾಸ್ತವಿಕ ಮಳೆಗಿಂತ ಅತಿ ಕಡಿಮೆ ಮಳೆ ಬಂದಿದೆ.
ಮಳೆ ಇಳಿಮುಖ: ಕಳೆದ ವರ್ಷಗಳಿಗೆ ಹೋಲಿಸಿದರೆ ಏಪ್ರಿಲ್ನಲ್ಲಿ ವಾಡಿಕೆ ಮಳೆ 36.03 ಮಿ.ಮೀ.ಬರ ಬೇಕಾಗಿತ್ತು. ಆದರೆ, ಕಳೆದ ವರ್ಷ 17.05 ಮಿ.ಮೀ ಬಂದಿತು. ಈ ವರ್ಷ ಕೇವಲ 14,03 ಮಿ.ಮೀ. ಮಳೆ ಬಂದಿದೆ. ಮೇ. ತಿಂಗಳಲ್ಲಿ ವಾಡಿಕೆ ಮಳೆ 92.03 ಮಿ.ಮೀ.ಬೀಳಬೇಕಾಗಿತ್ತು.
ಕಳೆದ ವರ್ಷ 22.06 ಮಿ.ಮೀ. ಮಳೆ ಬಂದಿದೆ. ಆದರೆ ಈ ವರ್ಷ ಇಲ್ಲಿಯ ವರೆಗೆ 34.36 ಮಿ.ಮೀ.ಬಿದ್ದಿದ್ದು, ಹೆಸರು, ಉದ್ದು, ಅಲಸಂದಿ ಬೆಳೆಯುವ ಚಿಕ್ಕನಾಯಕನಹಳ್ಳಿಯಲ್ಲಿ ಕೇವಲ 9.05 ಮಿ.ಮೀ ತುರುವೇಕೆರೆಯಲ್ಲಿ 19,08 ಮಿ.ಮೀ. ಮಾತ್ರ ಮಳೆ ಬಿದ್ದಿದ್ದು, ಅತಿ ಕಡಿಮೆ ಮಳೆ ಬಿದ್ದಿದೆ. ಜಿಲ್ಲೆಯ ಪಾವಗಡ, ತಿಪಟೂರು, ಸಿರಾ, ಸೇರಿದಂತೆ ವಿವಿಧ ತಾಲೂಕುಗಳಲ್ಲಿಯೂ ಮಳೆ ಕಡಿಮೆಯಾಗಿದೆ.
ಮುಂಗಾರು ವಿಳಂಬ: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದರೂ ಮುಂದೆ ಮಳೆ ಬರುತ್ತದೆ ಬಿತ್ತನೆ ಮಾಡಬಹುದು ಎಂದು ಏಪ್ರಿಲ್ ಮೇ ತಿಂಗಳಲ್ಲಿ ರೈತರು ತಮ್ಮ ಭೂಮಿ ಹಸನು ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಂಡಿದ್ದರು.
ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ಕುಣಿಗಲ್ ತಾಲೂಕು ಸೇರಿದಂತೆ ಇತರೆ ಕಡೆಗಳಲ್ಲಿ ರೈತರ ಆರ್ಥಿಕ ಅಬಿವೃದ್ಧಿಯ ಬೆಳೆಯಾದ ಹೆಸರುಕಾಳು ಬೆಳೆ ಉತ್ತಮ ವಾಗಿ ಬರುತ್ತದೆ ಎಂದು ನಿರೀಕ್ಷಿಸಿ, ಕೆಲವು ರೈತರು ಸಾಲ, ಸೋಲ ಮಾಡಿ ಬಿತ್ತನೆ ಮಾಡಿದ್ದರು ಈಗ ಕಾಳು ಗಳು ಮಳೆ ಬಾರದೆ ಮೊಳಕೆಯೊಡುವ ಹಂತದಲ್ಲಿಯೇ ಒಣಗಿದೆ. ಮುಂಗಾರು ಮಳೆ ವಿಳಂಬದಿಂದಾಗಿ ಹಾಕಿದ್ದ ಬೆಳೆಗಳು ಒಣಗಿ ರೈತ ಸಮೂಹಕ್ಕೆ ಅಪಾರ ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳು: ಜಿಲ್ಲೆಯಲ್ಲಿ ಪ್ರಮುಖವಾಗಿ ರಾಗಿ, ಶೇಂಗಾ ಪ್ರಮುಖ ಬೆಳೆ ಯಾಗಿದೆ. ಉಳಿದಂತೆ ಹೆಸರು, ಅಲಂಸದೆ, ಉದ್ದು, ಎಳ್ಳು, ಉಚ್ಚಳ್ಳು, ನವಣೆ, ಸಜ್ಜೆ, ಮೆಕ್ಕೆಜೋಳ, ತೊಗರಿ, ಅವರೆ, ಸೂರ್ಯಕಾಂತಿ, ಹುರುಳಿ, ಆರ್ಕಾ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ.ಅದರಲ್ಲಿ ಮುಖ್ಯವಾಗಿ ರಾಗಿ ಮತ್ತು ಶೇಂಗಾ ಬೆಳೆಯೇ ಜಿಲ್ಲೆಯ ಪ್ರಧಾನ ಬೆಳೆಯಾಗಿದೆ. ಈ ಭಾರಿ ಜಿಲ್ಲೆಯಲ್ಲಿ 192000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ ಜೂ.15 ರಿಂದ ಜುಲೈ 15 ರವರೆಗೆ ಶೇಂಗಾ ಬಿತ್ತನೆ ಮಾಡಲು ಸಕಾಲವಾಗಿದೆ ಅದೇ ರೀತಿಯಲ್ಲಿ ರಾಗಿ ಬಿತ್ತನೆ ಮಾಡಲು ಇದು ಸಕಾಲವಾಗಿದೆ. ಜಿಲ್ಲೆಯ ರೈತರು ಪ್ರಧಾನ ಬೆಳೆಗಳಾದ ಶೇಂಗಾ ಹಾಗೂ ರಾಗಿ ಬೆಳೆಗಳನ್ನು ಬಿತ್ತಲು ಭೂಮಿ ಹಸನು ಮಾಡಿಕೊಂಡು ಕಾಯುತ್ತಿದ್ದಾರೆ. ನಿರೀಕ್ಷೆ ಯಂತೆ ಬರುವ ಜೂನ್ ತಿಂಗಳಲ್ಲಿ ಮಳೆ ವಿಳಂಬ ವಾದರೆ ಬಿತ್ತನೆ ಮಾಡಲು ತೊಂದರೆ ಉಂಟಾಗಿ ಬೆಳೆ ನಷ್ಟವಾಗುತ್ತದೆ.
● ಚಿ.ನಿ. ಪುರುಷೋತ್ತಮ್