ಎತ್ತಿನಹೊಳೆ ಕಾಮಗಾರಿಗೆ ಹಿನ್ನಡೆ
Team Udayavani, Oct 16, 2021, 5:08 PM IST
ಮಧುಗಿರಿ: ಕಳೆದ ಒಂದು ವಾರದಿಂದ ಸುರಿದ ಮಳೆಗೆ ತಾಲೂಕಿನಲ್ಲಿ ಹಲವಾರು ಕೆರೆ, ಕಟ್ಟೆಗಳು ಭರ್ತಿಯಾಗಿದ್ದು, ಕೆಶಿಫ್ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಎತ್ತಿನ ಹೊಳೆ ಕಾಮಗಾರಿಗೆ ಹಿನ್ನಡೆಯಾಗಿದೆ.
ತಾಲೂಕಿನ ಹುಣಸೇಮರದಹಟ್ಟಿ ಬಳಿಯ ಕೆಶಿಫ್ ರಸ್ತೆ ಬದಿಯಲ್ಲಿ ಹಾದುಹೋಗಿದ್ದ ಎತ್ತಿನಹೊಳೆ ಪೈಪುಗಳನ್ನು ಮಣ್ಣಿನಿಂದ ಮುಚ್ಚಲಾ ಗಿತ್ತು. ಈ ಕಾಮಗಾರಿ ಚೋಳೇನಹಳ್ಳಿ ಕೆರೆಗೆ ಹರಿಯುವ ನೀರಿನ ಹಳ್ಳದಲ್ಲಿ ನಿರ್ಮಿಸಿ ಮಣ್ಣು ಮುಚ್ಚಲಾಗಿತ್ತು. ಆದರೆ, ಕಳೆದ ರೆಡು ದಿನ ಸುರಿದ ಭಾರೀ ಮಳೆಗೆ ಮಣ್ಣಿ ನಲ್ಲಿ ಹೂತಿದ್ದ ಎತ್ತಿನಹೊಳೆ ಕಾಮಗಾರಿ ಬೃಹತ್ ಪೈಪುಗಳು ತೇಲಿದ್ದು, ಮತ್ತೆ ಮಣ್ಣು ಹಾಕುವ ಕೆಲಸ ಮಾಡಬೇಕಿದೆ.
ರೈತರ ಬೆಳೆ ನಾಶ: ಹರಿಹರರೊಪ್ಪ ಗ್ರಾಮದ ರಸ್ತೆಯಲ್ಲಿಯೂ ಇದೇ ಚೋಳೇನಹಳ್ಳಿ ಕೆರೆಗೆ ಹರಿವ ನೀರಿನ ಹಳ್ಳ ಭರ್ತಿಯಾಗಿ ಹರಿದಿದ್ದು, ಪಕ್ಕದ ಜಮೀನುಗಳು ನೀರಿನ ಸೆಳೆತಕ್ಕೆ ತನ್ನ ನಿಜ ಸ್ವರೂಪ ಕಳೆದುಕೊಂಡಿದೆ. ಹಲವಾರು ಕಡೆ ವಾಣಿಜ್ಯ ಬೆಳೆಗಳಾದ ಅಡಕೆ, ಟೊಮೆಟೋ, ಜೋಳ, ಮೆಣಸಿನಕಾಯಿ, ರಾಗಿ, ಹುರುಳಿ, ಸೇವಂತಿಗೆ, ಸೇರಿ ಹತ್ತಾರು ಎಕರೆಯ ಬೆಳೆಗೆ ನೀರು ನುಗ್ಗಿದ್ದು, ಬೆಳೆ ನಾಶವಾಗಿ ರೈತರಿಗೆ ಆರ್ಥಿಕವಾಗಿ ಹೊಡೆತ ಬಿದ್ದಿದೆ.
ಇಂತಹ ಕಡೆಗಳಲ್ಲಿ ಸರ್ಕಾರದ ವತಿಯಿಂದ ಕಂದಾಯಾಧಿಕಾರಿ ಜಯರಾಮಯ್ಯ, ವಿಐ ಶಿವರಾಂ ಭೇಟಿ ನೀಡಿ ಪರಿಶೀಲಿಸಿದ್ದು, ತಹಶೀಲ್ದಾರ್ಗೆ ಬೆಳೆ ನಷ್ಟದ ಬಗ್ಗೆ ವರದಿ ನೀಡಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಚೋಳೇನಹಳ್ಳಿ ಹಾಗೂ ಸಿದ್ದಾಪುರ ಕೆರೆಗಳು ಭಾಗಶಃ ಭರ್ತಿಯಾಗಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲದಾಗಿದೆ.