ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇ ನಾನು
3 ಪಕ್ಷಗಳಿಗೂ ಮದಲೂರು ಕೆರೆಯೇ ಚುನಾವಣಾ ಅಸ್ತ್ರ | ಕೋಟೆನಾಡಲ್ಲಿ ರಂಗೇರಿದ ಚುನಾವಣೆ
Team Udayavani, Oct 31, 2020, 4:49 PM IST
ಕೋಟೆನಾಡಲ್ಲಿ ಚುನಾವಣಾ ರಣರಂಗ ದಿನೇ ದಿನೆ ರಂಗೇರುತ್ತಿದೆ, ಮೂರೂ ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ ಎಲ್ಲರ ಚುನಾವಣಾ ಅಸ್ತ್ರವೂ ಒಂದೇ ಮದಲೂರು ಕೆರೆಗೆ ನೀರು ಹರಿಸುವುದು. ಈ ಚುನಾವಣಾ ಪ್ರಚಾರದ ನಡುವೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನ.
ತುಮಕೂರು: ಶಿರಾ ಉಪಚುನಾವಣೆಗೆ ದಿನ ಗಣನೆ ಆರಂಭವಾಗಿದೆ ಮತಬೇಟೆ ಜೋರಾಗಿಯೇ ಇದೆ, ಈಗ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಮೂರು ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಮೂರು ಪಕ್ಷಗಳು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆ ಪ್ರಸ್ತಾಪಿಸುತ್ತಾ ಮತ ಬೇಟೆ ಮಾಡುತ್ತಿದ್ದಾರೆ. ಶಿರಾ ಕಣದಲ್ಲಿ ಇರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಯೋಜನೆ ನಮ್ಮದು ಎಂದು ಬೊಬ್ಬೆ ಹೊಡೆಯುತ್ತಿವೆ.
ಈ ಕ್ಷೇತ್ರದಲ್ಲಿ ಶುಕ್ರವಾರ ಭರ್ಜರಿ ಪ್ರಚಾರ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೀರು ಹರಿಸದಿದ್ದರೆ ಶಿರಾದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.
- ಶಿರಾ ಉಪಕದನದಲ್ಲಿ ಜೆಡಿಎಸ್ ಪಕ್ಷ ವೀಕ್ ಆಗಿದೆ, ಬಿಜೆಪಿಯೊಂದಿಗೆ ಒಳ ಒಪ್ಪಂದ ಆಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ?ನಮ್ಮ ಪಕ್ಷ ಪ್ರಾದೇಶಿಕ ಪಕ್ಷ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿ ಕೊಂಡಿಲ್ಲ, ನಮ್ಮ ಅಭ್ಯರ್ಥಿ ವೀಕ್ ಆಗಿಲ್ಲ ಇದು ಜೆಡಿಎಸ್ ಭದ್ರ ಕೋಟೆ ಅದನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಾರಂಭದಲ್ಲಿ ಸತ್ಯಣ್ಣನ ನೆನಪು ಇನ್ನೂ ಇತ್ತು, ಚಿತೆ ಇನ್ನೂ ಆರಿರಲಿಲ್ಲ ಬಿಜೆಪಿ, ಕಾಂಗ್ರೆಸ್ ಪ್ರಚಾರ ಆರಂಭಿಸಿ ನಮ್ಮ ಪಕ್ಷ ವೀಕ್ಎಂದು ಬಿಂಬಿಸಿದರು. ನಾವು ಪ್ರಚಾರ ಆರಂಭ ಮಾಡಲು ತಡ ಆಗಿತು ಅಷ್ಟೇ ಯಾವ ಪಕ್ಷದೊಂದಿಗೂ ಒಳ ಒಪ್ಪಂದ ಇಲ್ಲ ನಮ್ಮ ಮತದಾರರು ಯಾವುದಕ್ಕೂ ಜಗ್ಗದೇ ನಮ್ಮ ಅಭ್ಯರ್ಥಿ ಕೈಹಿಡಿಯುತ್ತಾರೆ.
- ಈ ಚುನಾ ವಣೆಯಲ್ಲಿ ಎಲ್ಲಾ ಪಕ್ಷದವರೂ ಮದಲೂರು ಕೆರೆ ನೀರಿನ ಬಗೆಯೇ ಪ್ರಸ್ತಾಪ ಇದೆಯಲ್ಲ ? ಮದಲೂರು ಕೆರೆಗೆ ನೀರು ಹರಿಸಲು 2006ರಲ್ಲಿ ಡಿಪಿಆರ್ ತಯಾರಿಸಲು ಸೂಚಿಸಿದ್ದೇ ನಾನು, ನಾನು ಆಗ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಕಾನ್ ಸಂಸ್ಥೆಗೆ ಡಿಪಿಆರ್ ತಯಾರಿಸಲು ಆದೇಶ ಮಾಡಿದ್ದೆ, ನಂತರ ಬಂದ ಬಿಜೆಪಿ ಸರ್ಕಾರ, ಕಾಂಗ್ರೆಸ್ ಸರ್ಕಾರ ಏನು ಮಾಡಲಿಲ್ಲ. ಭದ್ರಾ ಮೇಲ್ದಂಡೆಯಿಂದ ತರಿಕೇರೆ, ಕಡೂರು ಮೂಲಕ ತುಮಕೂರು, ಚಿತ್ರದುರ್ಗ ಭಾಗದ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಹತ್ತು ವರ್ಷ ಏನು ಮಾಡದೇ ಈಗ ನೀರಾವರಿ ಯೋಜನೆ ವಿಚಾರ ಮುಂದಿಟ್ಟು ಮತದಾರರನ್ನು ವಂಚಿಸುವ ಕೆಲಸ ಮಾಡುತ್ತಿವೆ.
- ಈ ಚುನಾವಣೆ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದೇ? ಈ ಉಪಚುನಾವಣಾ ಫಲಿತಾಂಶ ವ್ಯತಿರಿಕ್ತವಾದರೆ, ಸರ್ಕಾರದ ಮೇಲೆ ಪರಿಣಾಮ ಬೀರಲ್ಲ ಆದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಧ್ವನಿ ಜೋರಾಗುತ್ತದೆ. ∙ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಈಗಲೇ ಚರ್ಚೆ ಆರಂಭ ವಾಗಿದೆಯಲ್ಲಾ? ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಚರ್ಚೆ ಜೋರಾಗಿರುವುದಂತೂ ಸತ್ಯ. ಕಾಂಗ್ರೆಸ್ನವರು ಕೂಸು ಹುಟ್ಟುವುದಕ್ಕೆ ಮುಂಚೆಯೇ ಕುಲಾವಿ ಹೊಲಿಸಿದಂತೆ ಸಿಎಂ ಆಗುವ ಬಗ್ಗೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮಾತುಗಳನ್ನಾಡುತ್ತಿದ್ದಾರೆ.
- ನಿಮ್ಮ ಪಕ್ಷದ ಹಲವು ಮುಖಂಡರು ಪಕ್ಷ ತೊರೆದು ಹೋಗಿದ್ದಾರೆ ಅದರಿಂದ ಪಕ್ಷಕ್ಕೆ ನಷ್ಟವಾಗಿಲ್ಲವೇ ? ಜೆಡಿಎಸ್ ಪಕ್ಷ ತೊರೆದವರಿಂದ ಪಕ್ಷಕ್ಕೆ ಯಾವುದೇ ನಷ್ಟ ವಾಗಿಲ್ಲ, ಜೆಡಿಎಸ್ ಪರ ವಾತಾವರಣ ಹೆಚ್ಚಿದೆ ಅವರು ಹೊರ ಹೋಗಿದ್ದು ಒಳ್ಳೆಯದಾಯ್ತು. ನಮ್ಮ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ಒಂದೆಡೆ ಕೋವಿಡ್ ಸಂಕಷ್ಟ, ನೆರೆಹಾವಳಿಯ ನಡುವೆ ಚುನಾವಣೆ ಬಂದಿದ್ದು, ಕಳೆದೊಂದು ವಾರದಿಂದಕ್ಷೇತ್ರದ ಚಿತ್ರಣ ಬದಲಾಗಿದ್ದು, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಒಲವು ವ್ಯಕ್ತವಾಗಿದೆ. ಪಕ್ಷದಲ್ಲಿ ಅಧಿಕಾರ ಅನುಭವಿಸಿ ಹೊರ ಹೋಗಿರುವವರಿಂದ ಪಕ್ಷಕ್ಕೆ ಅನುಕೂಲವೇ ಆಗಲಿದೆ. ಜೆಡಿಎಸ್ ಮತ್ತೆ ಕ್ಷೇತ್ರ ಉಳಿಸಿಕೊಳ್ಳುವುದು ನಿಶ್ಚಿತ.
- ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರಾಗಲು ಯತ್ನ ಮಾಡುತ್ತಿದ್ದಾರೆ? ಅವರಿಗೆ ಒಕ್ಕಲಿಗ ಸಮಾಜ ಈಗ ನೆನಪಾಯಿತೇ, ಆಸ್ತಿರಕ್ಷಣೆ ಮಾಡಿಕೊಳ್ಳುತ್ತಿದ್ದವರಿಗೆ ಈಗ ಸಮಾಜ ನೆನಪಾಗಿದೆ. ಒಕ್ಕಲಿಗ ಸಮಾಜದ ರಕ್ಷಣೆಯ ಬಗ್ಗೆ ಉಪಚುನಾವಣೆ ಅಖಾಡದಲ್ಲಿ ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಗೌಡರ ಕುಟುಂಬದ ಬಗ್ಗೆಯೂ ಟೀಕಿಸುತ್ತಿದ್ದಾರೆ. ಇಷ್ಟು ದಿನ ಅವರು ಎಲ್ಲಿ ಹೋಗಿದ್ದರು. ಸಾರ್ವಜನಿಕ ಜೀವನದಲ್ಲಿ ತಾವೂ ಲಪಟಾಯಿಸಿದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ಸೀಮಿತವಾದವರಿಗೆ ಈಗ ಸಮಾಜದ ನೆನಪಾಗಿದೆ. ನಮ್ಮ ಜನತೆ ಇದನ್ನು ಅರ್ಥಮಾಡಿಕೊಳ್ಳದಿರುವಷ್ಟು ದಡ್ಡರಲ್ಲ.
- ಜೆಡಿಎಸ್ ಬಿಜೆಪಿ ಜೊತೆ ಶಾಮೀಲಾಗಿದೆ ಅದಕ್ಕೆ ಪ್ರಚಾರ ಕುಂಠಿತ ಮಾಡಿದ್ದಾರೆ ಎನ್ನುವ ಆರೋಪ ಇದೆ? ನಾವು ಬಿಜೆಪಿ ಜೊತೆ ಶಾಮೀಲಾಗಿಲ್ಲ ಕಾಂಗ್ರೆಸ್ಸಿನ ಕೆಲ ಮುಖಂಡರೇ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಅವರು ಯಾರು ಎಂದು ನಿಮಗೆ ಹೇಳಬೇಕಿಲ್ಲ ನಾವು ಯಾವ ಪಕ್ಷ ದೊಂದಿಗೂ ಶಾಮಿಲು ಆಗಿಲ್ಲ.
- ಬಿಜೆಪಿ ಹಣ ಬಲದಿಂದ ಗೆಲುವು ಪಡೆಯಲು ಯತ್ನ ನಡೆಸುತ್ತಿದೆಯೇ? ಹಣ ಬಲದಿಂದ ಗೆಲ್ಲಬಹುದು ಎಂದು ಮುಖ್ಯಮಂತ್ರಿ ಮಗ ವಿಜಯೇಂದ್ರ ಇಲ್ಲಿ ಬಂದು ಠಿಕಾಣಿ ಹೂಡಿದ್ದರೆ, ಇದು ಶಿರಾ ಕ್ಷೇತ್ರ ಇಲ್ಲಿ ಇವರ ಆಟ ನಡೆಯುವುದಿಲ್ಲ ಹಾಸನದಿಂದ 1200 ಮಂದಿ ಶಿರಾಗೆ ಬಂದಿರುವುದೇಕೆ, ಬಿಜೆಪಿ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದೆ ಎಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಹಾಸನ ಬಿಜೆಪಿ ಶಾಸಕರ ಕಡೆಯಿಂದ 1200 ಮಂದಿ ಬಂದು ಶಿರಾದಲ್ಲಿ ಲಗ್ಗೆ ಹೂಡಿರುವುದು ಯಾವ ಕಾರಣಕ್ಕೆ. ಚೆಕ್ಪೋಸ್ಟ್ಗಳಲ್ಲಿ ದಾಖಲೆಯಿಲ್ಲದ ಹಣಗಳು ಸಿಗುತ್ತಿರುವುದು ಇದಕ್ಕೆ ನಿದರ್ಶನವಲ್ಲವೇ.
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ