ಕೆರೆ-ಕಟ್ಟೆ, ಚೆಕ್ಡ್ಯಾಂನಿಂದ ಅಂತರ್ಜಲ ವೃದ್ಧಿ
Team Udayavani, Aug 17, 2020, 1:35 PM IST
ಕೊರಟಗೆರೆ: ಪುರಾತನ ಕಾಲದ ಕೆರೆ-ಕಟ್ಟೆಗಳ ಪುನಶ್ಚೇತನ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಚೆಕ್ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣದಿಂದ ಅಂತರ್ಜಲ ಅಭಿವೃದ್ಧಿಯಾಗಿ ನೀರಾವರಿಗೆ ಅನುಕೂಲವಾಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ತಾಲೂಕಿನ ಬುಕ್ಕಾಪಟ್ಟಣ ಮತ್ತು ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಚೆಕ್ಡ್ಯಾಂ ಬ್ರಿಡ್ಜ್ ಮತ್ತು ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಕೆರೆಗಳ ಪುನಶ್ಚೇತನ ಮತ್ತು ಚೆಕ್ಡ್ಯಾಂ ನಿರ್ಮಾಣಕ್ಕೆ ಅನುದಾನ ತಂದಿದ್ದೇನೆ. ನೀರಾವರಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ನೆರವಿಗೆ ಬರಬೇಕಾಗಿದೆ ಎಂದು ಆಗ್ರಹಿಸಿದರು.
ಕ್ಷೇತ್ರದ ಮೂಲಕ ಹಾದುಹೋಗುವ ಸುವರ್ಣ ಮುಖೀ ಮತ್ತು ಜಯಮಂಗಳಿ ನದಿಗಳಿಗೆ ಸಂಪರ್ಕ ಕಲ್ಪಿಸುವಂತಹ ಕಿರು ಹಳ್ಳಗಳಿಗೆ ಅಡ್ಡಲಾಗಿ ಈಗಾಗಲೇ ಹತ್ತಾರು ಚೆಕ್ಡ್ಯಾಂ ಕಂ ಬ್ರಿಡ್ಜ್ ಕಾಮಗಾರಿ ನಡೆಯುತ್ತಿವೆ. ಅಂತರ್ಜಲ ಅಭಿವೃದ್ಧಿಗೆ ರೈತರು ನಿಗದಿ ಪಡಿಸುವ ಸ್ಥಳದಲ್ಲಿಯೇ ಕಾಮಗಾರಿ ನಡೆಸಲು ಈಗಾಗಲೇ ಸೂಚಿಸಿದ್ದೇನೆ ಎಂದು ತಿಳಿಸಿದರು. ನಂತರ ಪಶು ಇಲಾಖೆ ಅನುದಾನದಿಂದ ವಡ್ಡಗೆರೆಯಲ್ಲಿ 40 ಲಕ್ಷದ ಪಶು ಆಸ್ಪತ್ರೆ ನಿರ್ಮಾಣ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯಿಂದ ಬರಕ ಗ್ರಾಮದ ಸುವರ್ಣಮುಖೀ ನದಿಗೆ ಅಡ್ಡಲಾಗಿ 2 ಕೋಟಿ ವೆಚ್ಚದ ಚೆಕ್ಡ್ಯಾಂ ಕಂ ಬ್ರಿಡ್ಜ್, ಗೊಂದಿಹಳ್ಳಿ ಸಮೀಪ 1 ಕೋಟಿ ವೆಚ್ಚದ ಚೆಕ್ಡ್ಯಾಂ ಕಂ ಬ್ರಿಡ್ಜ್ ಮತ್ತು ಬುಕ್ಕಾಪಟ್ಟಣ ಹತ್ತಿರ 60 ಲಕ್ಷ ವೆಚ್ಚದ ಚೆಕ್ಡ್ಯಾಂನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು