ಗಿಣಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ಕೊಡ್ತೀವಿ..!
Team Udayavani, Jul 19, 2022, 8:03 PM IST
ತುಮಕೂರು: ಇಲ್ಲಿನ ಜಯನಗರದ ನಿವಾಸಿ ರವಿ ಕುಟುಂಬ ಪ್ರೀತಿಯಿಂದ ಸಾಕಿದ್ದ ಗಿಣಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದು, ಕುಟುಂಬದ ಸದಸ್ಯರು ದುಃಖದಲ್ಲಿದ್ದಾರೆ.
ಗಿಣಿ ಪತ್ತೆ ಮಾಡಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.
ಆಫ್ರಿಕನ್ ಗ್ರೇ ತಳಿಯ ಎರಡು ಗಿಣಿಗಳನ್ನು ಎರಡೂವರೆ ವರ್ಷದಿಂದ ಸಾಕಲಾಗಿತ್ತು. ಈ ಪೈಕಿ ರುಸ್ತುಮಾ ಎಂಬ ಹೆಸರಿನ ಗಿಣಿ ಇದೇ 16ರಂದು ಮನೆಯಿಂದ ನಾಪತ್ತೆಯಾಗಿದ್ದು, ಕುಟುಂಬದ ಸದಸ್ಯರು ಹಗಲು ರಾತ್ರಿ ಎನ್ನದೆ ಹುಡುಕಾಟ ನಡೆಸುತ್ತಿದ್ದಾರೆ.
ಗಿಣಿ ಪತ್ತೆಯಾದರೆ ಮಾಹಿತಿ ನೀಡುವಂತೆ ನಗರದಲ್ಲಿ ಬ್ಯಾನರ್ ಕೂಡ ಅಳವಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡಿದೆ.
ಅಲ್ಲದೆ, ಗಿಣಿ ಹುಡುಕಿ ಕೊಟ್ಟರೆ 50 ಸಾವಿರ ರೂ.ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ.