ಅನುಷ್ಠಾನವಾಗುತ್ತಾ ಕೈಗಾರಿಕಾ ಕಾರಿಡಾರ್?
Team Udayavani, Feb 1, 2021, 12:07 PM IST
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಾ ದೇಶದ ಗಮನ ಸೆಳೆ ಯುತ್ತಿರುವ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರ ಎಚ್.ಎ.ಎಲ್, ಸೋಲಾರ್ ಪಾರ್ಕ್ ಹಾಗೂ ಸ್ಮಾಟ್ ಸಿಟಿ, ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಕಲ್ಪತರು ನಾಡಿಗೆ ಈ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಹೊಸ ಯೋಜನೆ ಘೋಷಿಸುತ್ತಾ ರೆಯೇ? ಹಳೆಯ ಯೋಜನೆಗಳ ಚಾಲನೆಗೆ ಒತ್ತು ನೀಡುತ್ತಾರೆಯೇ? ಎಂದು ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನ. ಪ್ರತಿವರ್ಷ ಕೇಂದ್ರ ಬಜೆಟ್ನಲ್ಲಿ ರೈಲ್ವೆ ಬಜೆಟ್ ಮಂಡನೆಯಾದ ಮೇಲೆ ಸಾಮಾನ್ಯ ಬಜೆಟ್ ಮಂಡನೆಯಾಗುತ್ತಿತ್ತು.
ಆದರೆ, ಇದು ಆರನೇ ಬಾರಿಗೆ ಸಾಮಾನ್ಯ ಬಜೆಟ್ ಜೊತೆಯಲ್ಲಿ ರೈಲ್ವೆ ಬಜೆಟ್ ಸೇರಿಸಿ ಮಂಡನೆಯಾಗುತ್ತಿದೆ. ಜಿಲ್ಲೆಗೆ ಕಳೆದ 2009-10ರಲ್ಲಿ ಮಂಜೂರಾದ ಹಲವು ರೈಲ್ವೆ ಯೋಜನೆಗಳು ಇಂದಿಗೂ ಕಾರ್ಯಗತವಾಗಿಲ್ಲ. ಕಳೆದ ರೈಲ್ವೆ ಬಜೆಟ್ ನಲ್ಲಿ ಮಂಡಿಸಿದ್ದ ಯೋಜನೆಗಳು ನಿಂತಲ್ಲೇ ನಿಂತಿವೆ.
ಹೀಗಿರುವಾಗ ಈಗ ಮಂಡಿಸಲಿರುವ ಬಜೆಟ್ನಲ್ಲಿ ಕಲ್ಪತರು ನಾಡಿಗೆ ರೈಲ್ವೆ ಯೋಜನೆಯಲ್ಲಿ ಏನು ಕೊಡುಗೆ ನೀಡಬಹುದು ಎಂಬ ಕುತೂಹಲವಿದೆ. ತುಮಕೂರು-ದಾವಣಗೆರೆ ರೈಲು ಮಾರ್ಗ, ರಾಯದುರ್ಗ- ತುಮಕೂರು ಮಾರ್ಗದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಹಣದ ಕೊರತೆ ಇಲ್ಲದಿದ್ದರೂ ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ.
ತುರುವೇಕೆರೆ-ಚಿಕ್ಕನಾಯಕನಹಳ್ಳಿ-ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭ ವಾಗಿಲ್ಲ. ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆಗಳು ಮಂಜೂರಾಗಿವೆ. ಆದರೆ ಅವು ಕಾರ್ಯಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ:ಜೆಡಿಎಸ್ ಅಲ್ಪಸಂಖ್ಯಾತ ಯುವ ಘಟಕಕ್ಕೆ ಶಹಬಾಜ್ ಅಧ್ಯಕ್ಷ
ಮೋದಿ ಸರ್ಕಾರದಲ್ಲಿ ಜಿಲ್ಲೆಗೆ ಬಂದಿದ್ದೇನು?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜಿಲ್ಲೆಗೆ ಸ್ಮಾರ್ಟ್ ಸಿಟಿ ಕೆಲಸ ಪ್ರಗತಿಯಲ್ಲಿದೆ. ಪಾಸ್ಪೋರ್ಟ್ ಕಚೇರಿ ಆರಂಭಗೊಂಡಿದೆ. ತುಮಕೂರು ಎಚ್ಎಂಟಿ ಕೈ ಗಡಿಯಾರ ಕಾರ್ಖಾನೆ ಜಾಗವನ್ನು ಇಸ್ರೋಗೆ ನೀಡಲಾಗಿದ್ದು, ಅದರ ಕಾಮಗಾರಿಗಳು ನಡೆಯುತ್ತಿದೆ. ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿ ಎಚ್ಎಎಲ್ ಹೆಲಿಕ್ಯಾಪ್ ಟರ್ ಘಟಕ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ವಸಂತ ನರಸಾಪುರದಲ್ಲಿ ಫುಡ್ಪಾರ್ಕ್ ಆರಂಭಗೊಂಡಿದೆ.
ಹಲವು ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದರೆ, ಕೆಲವು ಚಾಲನೆಯಲ್ಲಿವೆ. ಕೈಗಾರಿಕಾ ಕಾರಿಡಾರ್ ಯೋಜನೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿತ್ತು. ಅದು ಇನ್ನೂ ಅನುಷ್ಠಾನ ವಾಗಿಲ್ಲ. ಕೆಲವು ರೈಲ್ವೆ ಯೋಜನೆ ಗಳು ಘೋಷಣೆ ಆಗಿದ್ದರೂ ಅವುಗಳ ಕಾರ್ಯ ಆರಂಭವಾಗಿಲ್ಲ. ತುಮ ಕೂರು ಜಿಲ್ಲೆಯ ತೆಂಗು, ಅಡಕೆ, ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಈ ಬಜೆಟ್ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತಾ? ಏನೆಲ್ಲಾ ಬಜೆಟ್ನಲ್ಲಿ ಇರುತ್ತೆ ಎನ್ನುವುದೇ ಕುತೂಹಲ ಮೂಡಿದೆ.
ಚಿ.ನಿ. ಪುರುಷೋತ್ತಮ್