ತ್ರಿಮೂರ್ತಿಗಳ ಸಂಗಮ ಕ್ಷೇತ್ರ ಕಾಡುಮಲ್ಲೇಶ್ವರ ಬೆಟ್ಟ
Team Udayavani, Nov 23, 2019, 5:03 PM IST
ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಾಡುಮಲ್ಲೇಶ್ವರ ಬೆಟ್ಟ ಐತಿಹಾಸಿಕ, ಧಾರ್ಮಿಕವಾಗಿಯೂ ಪ್ರಕೃತಿದತ್ತವಾಗಿಯೂ ಸಾಕಷ್ಟು ಬೆರಗು ಮೂಡಿಸಿ, ತ್ರೀಮೂರ್ತಿ ದೇವರ ಸಂಗಮ ಕ್ಷೇತ್ರವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೇಮಗಿರಿ ಬೆಟ್ಟ ಪ್ರಾಕೃತಿಕ ಸೌಂದರ್ಯಕ್ಕೆ ಹೊಂದಿಕೊಂಡಿರುವ ಕಾಡುಮಲ್ಲೇಶ್ವರ ಬೆಟ್ಟ ಕೇವಲ ಭಕ್ತರನ್ನಷ್ಟೇ ಅಲ್ಲ. ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಿಗೆ ಹೇಳಿ ಮಾಡಿದ ತಾಣವೂ ಹೌದು. ಬೆಟ್ಟ ಹತ್ತಿ ನಿಂತು ಎತ್ತ ನೋಡಿದರೂ ಸುತ್ತಲೂ ಹಸಿರು ಪ್ರಕೃತಿ ಒದ್ದು ಮಲಗಿದಂತೆ ಭಾಸವಾಗುತ್ತದೆ. ಸಾಲು ಸಾಲು ಬೆಟ್ಟಗಳು, ಕೆರೆಕಟ್ಟೆಗಳ ಸುಂದರ ನೋಟ, ಹಚ್ಚ ಹಸಿರಿನ ಹೊದಿಕೆಯಿಂದ ಕಂಗೊಳಿಸುವ ಪಾಕೃತಿಕ ಸೌಂದರ್ಯ, ತಣ್ಣಗೆ ಬೀಸುವ ಗಾಳಿ ನಡುವೆ ಬೆಟ್ಟದ ಮೇಲೆ ತ್ರಿಮೂರ್ತಿಗಳ ದೇವರ ದರ್ಶನ ಪಡೆಯುವುದೇ ಪುಣ್ಯ.
ತ್ರೀಮೂರ್ತಿ ದೇವರ ದರ್ಶನ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೇಮಗಿರಿ ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯದ ಬಳಿ ನಿಂತು ನೋಡಿದರೆ ಕಾಣುವ ದೃಶ್ಯಗಳು. ಒಂದು ದಿನ ಚಾರಣಕ್ಕೆ ಹೇಳಿ ಮಾಡಿಸಿದ ಪ್ರವಾಸಿ ತಾಣದ ಜೊತೆಗೆ ತ್ರೀಮೂರ್ತಿ ದೇವರಾದ ಬ್ರಹ್ಮ, ವಿಷ್ಣು, ಮಹೇಶ್ವರರ ದರ್ಶನ ಭಾಗ್ಯ ದೊರೆಯುವ ಏಕೈಕ ಪುಣ್ಯ ಕ್ಷೇತ್ರವೂ ಹೌದು. ಹುಲಿಯೂರು ದುರ್ಗದ ಅಕ್ಕಪಕ್ಕ ಕುಂಬಿ ಬೆಟ್ಟ ಹಾಗೂ ಹೇಮಗಿರಿ ಬೆಟ್ಟಗಳಿವೆ. ಹೇಮಗಿರಿ ಬೆಟ್ಟದಲ್ಲಿ ವರದರಾಜಸ್ವಾಮಿ, ಇನ್ನೊಂದು ಕಡೆ ಒಡೆ ಬೈರವೇಶ್ವರ ಸ್ವಾಮಿ ಹಾಗೂ ಬೆಟ್ಟದ ತುದಿಯಲ್ಲಿ ಕಾಡು ಮಲ್ಲೇಶ್ವರಸ್ವಾಮಿ ದೇವಾಲಯ ಇದೆ. 700 ಅಡಿ ಎತ್ತರ ಇರುವ ಬೆಟ್ಟ ಏರಲು ಯಾವುದೇ ಸಮಸ್ಯೆ ಇಲ್ಲ.
ಭಕ್ತರೇ ನಿರ್ಮಾಣ ಮಾಡಿರುವ ಮೆಟ್ಟಿಲು ಇದೆ. ಪರಿಸರ ಸೌಂದರ್ಯ ಸವಿಯುತ್ತ ತಣ್ಣನೆಯ ಗಾಳಿಯ ಮುದದೊಂದಿಗೆ ಬೆಟ್ಟ ಹತ್ತುವುದೇ ಗೊತ್ತಾಗುವುದಿಲ್ಲ. ಅಲ್ಲಿ ಮಲ್ಲೇಶ್ವರ ಸ್ವಾಮಿ ದರ್ಶನದಿಂದ ಆಯಾಸ ನಿರಾಯಾಸವಾಗಿಸುತ್ತೆ. ಬೆಟ್ಟದ ಮೇಲೆ ಮೂರು ತಣ್ಣೀರು ಕೊಳ, ಅಂಜನೇಯ ಪಾದ, ಎರಡು ಬಸವಣ್ಣ ದೇವರ ದರ್ಶನವನ್ನೂ ಮಾಡಬಹುದಾಗಿದೆ.
ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ: ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ಇರುತ್ತದೆ. ಸರ್ಕಾರಿ ರಜೆ ದಿನ ಭಾನುವಾರ ವಿಶೇಷ ಪೂಜೆ ಅಲಂಕಾರ ಏರ್ಪಡಿಸಲಾಗುತ್ತದೆ. ಇದರಿಂದ ಕಾರ್ತೀಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಮಲ್ಲೇಶ್ವರಸ್ವಾಮಿ ದರ್ಶನಕ್ಕೆ ಕುಟಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಬಹುದು.
ಬೆಟ್ಟ ಹತ್ತಿ ಮಲ್ಲೇಶ್ವರ ಸ್ವಾಮಿ ದೇವರ ದರ್ಶನ ಪಡೆದರೆ ಮದುವೆಯಾಗದಿದ್ದವರಿಗೆ ಕಂಕಣ ಭಾಗ್ಯ ಹಾಗೂ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಪ್ರಾಪ್ತ ವಾಗಲಿದೆ ಎಂಬುದು ಇಲ್ಲಿಗೆ ಬರುವ ಭಕ್ತರ ಅಚಲ ನಂಬಿಕೆಯಾಗಿದೆ. ಇದರಿಂದ ಈ ನಿಟ್ಟಿನಲ್ಲಿ ಎಲ್ಲ ವರ್ಗದ ಜನ ಇಲ್ಲಿಗೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಮಲ್ಲೇಶ್ವರ ದೇವರ ದರ್ಶನ ಜೊತೆಗೆ ಬೆಟ್ಟದ ತಪ್ಪಲಿನಲ್ಲಿರುವ ಹೇಮಗಿರಿ ವರದರಾಜಸ್ವಾಮಿ ಹಾಗೂ ಇನ್ನೊಂದು ಭಾಗದಲ್ಲಿರುವ ಒಡೆ ಬೈರವೇಶ್ವರ ಸ್ವಾಮಿ ದರ್ಶನವನ್ನೂ ಮಾಡಬಹುದು.
ಹೋಗುವ ಮಾರ್ಗ: ಕುಣಿಗಲ್ನಿಂದ 22 ಕಿ.ಮೀ ಹುಲಿಯೂರು ದುರ್ಗ ಅಲ್ಲಿಂದ ಕೇವಲ 4 ಕಿ.ಮೀ ದೂರ ಹೇಮಗಿರಿ ಬೆಟ್ಟ ತಲುಪಬಹುದು. ಬೆಟ್ಟಕ್ಕೆ ಭಕ್ತರು ಸರಾಗವಾಗಿ ಹತ್ತಲು ಹಾಗೂ ಬೆಟ್ಟದ ಮೇಲೆ ಮೂಲಸೌಕರ್ಯ ಸರ್ಕಾರ ಕಲ್ಪಿಸಿದರೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬಂದು ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ.
ಹೇಮಗಿರಿ ಬೆಟ್ಟದಲ್ಲಿರುವ ಮಲ್ಲೇಶ್ವರಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಗೆ 4 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ನಾಡಪ್ರಭು ಕೆಂಪೇಗೌಡ ಅಳ್ವಿಕೆಯ ಕೋಟಿ ಹಾಗೂ ರಹಸ್ಯ ಸುರಂಗ ಮಾರ್ಗಗಳೂ ಇವೆ. –ಗಿರಿಗೌಡ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಣಿಗಲ್
– ಕೆ.ಎನ್.ಲೋಕೇಶ್