ಕೊರಟಗೆರೆ : ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ ಬೋನಿಗೆ
Team Udayavani, Jul 22, 2022, 5:33 PM IST
ಕೊರಟಗೆರೆ : ಕಳೆದ ಕೆಲವು ದಿನಗಳಿಂದ್ದ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ಇಟ್ಟ ಬೋನಿಗೆ ಸೆರೆಯಾಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಬಳಿ ಕಳೆದ ಮೂರು ದಿನಗಳ ಹಿಂದೆ ನಾಯಿಯನ್ನು ಕೊಂದು ತಿಂದು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೆಳಿಗ್ಗೆ ಆಹಾರ ಅರಸಿ ಬಂದು ಅರಣ್ಯ ಇಲಾಖೆಯ ಬೋನ್ ನಲ್ಲಿ ಸೆರೆಯಾಗಿದೆ.
ತಾಲೂಕಿನಲ್ಲಿ ಆಹಾರ ಅರಸಿ ನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿರತೆಗಳು ಬರುತ್ತಿದ್ದು ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಅತಂಕ ಹೆಚ್ಚಾಗಿದ್ದು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂಧಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದರು ಇಂದು ಬೆಳಂ ಬೆಳಿಗೆ ಚಿರತೆ ಬೋನಿನಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುರೇಶ್ ಹೆಚ್ ಎಮ್, ಉಪ ವಲಯ ಅರಣ್ಯಾಧಿಕಾರಿ ನಾಗರಾಜು ಭೇಟಿ ನೀಡಿ ಚಿರತೆಯನ್ನು ಸಿದ್ದರಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಚಿರತೆ ಸುಮಾರು 5 ವರ್ಷ ಪ್ರಾಯದ್ದು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕರಾದ ಚಾಂದ್ ಪಾಷಾ, ಮಂಜುನಾಥ್, ಜಿ.ಬಿ ನರಸಿಂಹಯ್ಯ, ವಾಹನ ಚಾಲಕ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.