ಟಾರ್ಗೆಟ್ ರೀಚ್ ಆಗದಿದ್ದರೆ ಕಾನೂನು ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ
ನಿಗಮಗಳಿಂದ ಬಂದಿರುವ ಅರ್ಜಿ ಆ.14ರೊಳಗೆ ಇತ್ಯರ್ಥ ಮಾಡಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಖಡಕ್ ಸೂಚನೆ
Team Udayavani, Aug 8, 2021, 6:24 PM IST
ತುಮಕೂರು: ಜಿಲ್ಲೆಯ ರೈತರು ಬಡವರು ನಮಗೆ ಸಾಲ ಬೇಕು ಎಂದು ಎಷ್ಟು ಸಾರಿ ಬ್ಯಾಂಕ್ಗೆ ಅಲಿಯಬೇಕು. ಅವರಿಗೆ ನಿಮ್ಮ ಮನೆಯ ಹಣ ನೀಡುತ್ತೀರಾ? ನಿಮಗೆಕೊಟ್ಟಿರುವ ಟಾರ್ಗೆಟ್ ರೀಚ್ ಆಗಲು ಏನು ಸಮಸ್ಯೆ ಆ.14ರೊಳಗೆ ತಮ್ಮ ಬ್ಯಾಂಕ್ಗೆ ಬಂದಿರುವ ಎಲ್ಲ ಅರ್ಜಿಗಳೂ ವಿಲೇವಾರಿ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬ್ಯಾಂಕ್ ವ್ಯವಸ್ಥಾಪಕರಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬ್ಯಾಂಕ್ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,
ಸರ್ಕಾರಿ ವಲಯದ ನಿಗಮ ಮಂಡಳಿ ಯೋಜನೆಯಡಿ ಫಲಾನುಭವಿಗಳಿಗೆ ಸಾಲ-ಸೌಲಭ್ಯ ನೀಡಲು ವಿಳಂಬ ಮಾಡುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ವ್ಯವಸ್ಥಾಪಕರು ವಿಳಂಬ ಮಾಡುತ್ತಿರುವುದರಿಂದ ಪ.ಜಾತಿ, ಪಂಗಡದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ.ಈನಿಟ್ಟಿನಲ್ಲಿಸೌಲಭ್ಯಒದಗಿಸದ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಹಕರಿಗೆ ಅರಿವು ಮೂಡಿಸಿ: ಜಿಲ್ಲೆಯಲ್ಲಿ ಒಟ್ಟು49 ರಾಷ್ಟ್ರೀಕೃತ ಬ್ಯಾಂಕ್ಗಳ ಪೈಕಿ ವಾರ್ಷಿಕ ಗುರಿ ನಿಗದಿಯಾಗದಿರುವ ಬ್ಯಾಂಕ್ ಸಾಲ ಒದಗಿಸುವ ಬ್ಯಾಂಕ್ಗಳ ಪಟ್ಟಿಯಿಂದ ಕೈ ಬಿಡಬೇಕು. ವಿವಿಧ ಇಲಾಖೆಗಳಡಿ ನೀಡಲಾಗುವ ಸಾಲ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕು. ಫಲಾನುಭವಿಗಳಿಗೆ ನಿಯಮಾನುಸಾರ ಸಾಲ ನೀಡಬೇಕು ಎಂದು ಸೂಚಿಸಿದರು.
ತೆಂಗು ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ತೆಂಗು ಆಧಾರಿತ ಉತ್ಪನ್ನಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ
ತೋಟಗಾರಿಕೆ ಇಲಾಖೆ ಮುಂದಾಗಬೇಕು. ಬ್ಯಾಂಕ್ ಗಳು ಇಂತಹ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಒದಗಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಅಗತ್ಯವಿರುವ ಸಾಲ-ಸೌಲಭ್ಯ ನೆರವು ನೀಡಬೇಕು ಎಂದು ನಿರ್ದೇಶಿಸಿದರು.
ಇದನ್ನೂ ಓದಿ:ಜನಪ್ರಿಯ ಗಾಲ್ಫ್ ಬಗ್ಗೆ ನೀವೇಷ್ಟು ತಿಳಿದಿದ್ದೀರಿ ? ಏಸ್, ಈಗಲ್, ಬರ್ಡಿ, ಪಾರ್ ಅಂದ್ರೇನು..?
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ,ಪ. ಜಾತಿ, ವರ್ಗಗಳ ಫಲಾನುಭವಿಗೆ ಸಾಲ ಸೌಲಭ್ಯ ನೀಡಲು ವಿನಾಕಾರಣ ನಿರಾಕರಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ನಿಗದಿತ ಸಮಯದೊಳಗೆ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಶಾಸಕ ಡಾ. ಎಂ.ಆರ್. ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಲೀಡ್ ಬ್ಯಾಂಕ್ನ ಭೈರವಿ ಯಲೂರ್ಕರ್, ನಬಾರ್ಡ್ ಮುಖ್ಯ ವ್ಯವಸ್ಥಾಪಕ ನೀರಜಾ ಕುಮಾರ್ ವರ್ಮಾ ಹಾಗೂ ಮತ್ತಿತರರು ಇದ್ದರು.
ಜಿಲ್ಲೆಯ ಎಲ್ಲ ಕೆರೆಗೆ ನೀರು ತುಂಬಿಸಲು ಪ್ರಯತ್ನಿಸುವೆ
ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ವಿವಿಧ ನೀರಾವರಿ ಯೋಜನೆಗಳಡಿ ನೀರು ಹಂಚಿಕೆ ಮಾಡಿರುವ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಜಿಪಂನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗೊಂಡಿರುವ ತುಮಕೂರು-ರಾಯದುರ್ಗ ರೈಲ್ವೇ ಕಾಮಗಾರಿ ಹಾಗೂ ಎತ್ತಿನ ಹೊಳೆಕಾಮಗಾರಿಗಳು ಪ್ರಗತಿಯಲ್ಲಿವೆ.ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಭಾಗದಲ್ಲಿನ ಭೂಸ್ವಾಧೀನಗೊಳಪಟ್ಟ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.
ಬೈರಗೊಂಡನಹಳ್ಳಿ ಜಲಾಶಯ ಮಾಡಲು ನಾವು ಬದ್ಧರಾಗಿರುತ್ತೇವೆ. ಯಾವುದೇ ಕಾರಣಕ್ಕೂ ಈ ಯೋಜನೆ ಹೋಗಲು ಬಿಡುವುದಿಲ್ಲ ಎಂದರು.
ಇದೇ ಖಾತೆ ಬೇಕು ಎಂದು ಕೇಳಿರಲಿಲ್ಲ: ನಾನು ಇದೇ ಖಾತೆ ಕೊಡಿ ಎಂದು ಕೇಳಿರಲಿಲ್ಲ. ಯಾವ ಖಾತೆ ಕೊಟ್ಟರೂ ಅದನ್ನು ಮಾಡುತ್ತೇನೆ. ನನ್ನ
ತಾಲೂಕಿನಲ್ಲಿ ಅರ್ಧ ಕೆಲಸ ಆಗಿತ್ತು. ಅಂದು ಸಣ್ಣ ನೀರಾವರಿ ಖಾತೆ ಬೇಕು ಎಂದು ಹಠ ಮಾಡಿದ್ದೆ. ನಮ್ಮ ತಾಲೂಕಿನ ಕೆಲಸ ಆಗಿದೆ. ಈಗ ಮತ್ತೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಇರುವ ಎಲ್ಲ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು. ಶಾಸಕ ಡಾ.ಎಂ.ಆರ್.ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಇದ್ದರು.
ಮದಲೂರುಕೆರೆಗೆ ಹೇಮೆ ಇಲ್ಲ: ಮಾಧುಸ್ವಾಮಿ
ಮದಲೂರುಕೆರೆಗೆ ಹೇಮಾವತಿ ನೀರು ಬಿಡಲು ಸಾಧ್ಯವಿಲ್ಲ. ಆ ಕೆರೆಗೆ ಅಲೋಕೇಷನ್ ಆಗಿಲ್ಲ. ಮದಲೂರು ಕೆರೆಗೆ ನೀರು ಬಿಡುವ ವಿಚಾರದಲ್ಲಿ ನನ್ನ ನಿಲುವಿಗೆ ಬದ್ಧ. ಕಾನೂನಿನ ರೀತಿಯಲ್ಲಿ ಅಲ್ಲಿಗೆ ಹೇಮಾವತಿ ನೀರು ಬಿಡಲು ಸಾಧ್ಯವೇ ಇಲ್ಲ. ಅದಕ್ಕೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಅಲೋಕೇಷನ್ ಆಗಿದೆ. ಹೇಮಾವತಿ ನೀರು ಶಿರಾಕ್ಕೆ 8 ಟಿಎಂಸಿ ನೀರು ಅಲೋಕೇಷನ್ ಆಗಿದೆ. ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ ಹರಿಸುತ್ತೇವೆ.
ಮದಲೂರು ಕೆರೆಗೆ ಕಾನೂನು ತೊಂದರೆ ಇದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.