ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿ
Team Udayavani, Jun 24, 2020, 6:51 AM IST
ತುರುವೇಕೆರೆ: ತಾಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ದಾನಿ ಗಳಿಂದ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಊಟ, ತಿಂಡಿ ಕೊಡಿಸಬಾರದು ಎಂದು ತಹಶೀಲ್ದಾರ್ ಆರ್. ನಯೀಂ ಉನ್ನೀಸಾ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಪಟ್ಟಣದ ಜೆಪಿ ಆಂಗ್ಲಪ್ರೌಢ ಶಾಲಾ ಆವರಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಕೋವಿಡ್-19ರ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಪೋಷಕರ ಭಯ ದೂರ ಮಾಡಿ ಅವರಲ್ಲಿ ಆತ್ಮಸ್ಥೆçರ್ಯ ತುಂಬಿ. ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಕಾಪಾಡಲು ನಿಮ್ಮ ಹತ್ತಿರದ ಗ್ರಾಪಂ ಹಾಗೂ ಪಪಂಗಳ ನೆರವು ಪಡೆಯಿರಿ ಎಂದರು.
ಎಲ್ಲ ಕೇಂದ್ರಗಳಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸ ಲಾಗುವುದು. ತುರ್ತು ಚಿಕಿತ್ಸಾ ಕಿಟ್ ವ್ಯವಸ್ಥೆ ಮಾಡಲಾಗುವುದು. ಮಾಸ್ಕ್ ಧರಿಸುವುದು ಕಡ್ಡಾಯ. ಮುಖ್ಯವಾಗಿ ಅಂತರ ಕಾಯ್ದುಕೊಳ್ಳುವಂತೆ ನೋಡಿ ಕೊಳ್ಳಿ, ಒಟ್ಟಾರೆಯಾಗಿ ಯಾವ ಮಕ್ಕಳೂ ಸಹ ಸೌಕರ್ಯಗಳ ಸಮಸ್ಯೆಯಿಂದ ಪರೀಕ್ಷೆಯಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಬಿಇಒ ಸಿ.ರಂಗಧಾಮಯ್ಯ ಮಾತ ನಾಡಿ, ತಾಲೂಕಿನ ಎಲ್ಲ ಕೇಂದ್ರಗಳಲ್ಲಿ 2016 ಮಕ್ಕಳು ಪರೀಕ್ಷೆ ಬರೆಯಲಿದ್ದು, ಹೊರ ತಾಲೂಕುಗಳಿಂದ ಇಲ್ಲಿಗೆ 46 ಮಕ್ಕಳು ಪರೀಕ್ಷೆ ಬರೆಯಲು ಬಂದಿದ್ದಾರೆ ಎಂದು ಹೇಳಿದರು. ಪಪಂ ಮಾಜಿ ಸದಸ್ಯ ಎ.ಆರ್. ಜಯರಾಮ್, ಟಿಎಚ್ಒ ಡಾ. ಸುಪ್ರಿಯಾ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್, ಬಿಆರ್ಸಿ ವಸಂತ್ ಕುಮಾರ್, ರೋಟರಿ ಅಧ್ಯಕ್ಷ ಗುಪ್ತಾ ಮತ್ತಿತರರು ಹಾಜರಿದ್ದರು.