ಒಂದೇ ಇಲಾಖೆಯಡಿ ಹಲವು ಯೋಜನೆಗೆ ಚಿಂತನೆ
ನೂತನ ಜಲಶಕ್ತಿ ಸಚಿವಾಲಯ ಆರಂಭಕ್ಕೆ ತೀರ್ಮಾನ | ನದಿ ಜೋಡಣೆಗೆ ಸಿಎಂ ಪ್ರಸ್ತಾವನೆ ಸಲ್ಲಿಸಲಿ: ಜಿಎಸ್ಬಿ
Team Udayavani, Jun 4, 2019, 8:29 AM IST
ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತುಮಕೂರು: ಕೇಂದ್ರ ಸರ್ಕಾರ ಹೊಸದಾಗಿ ಜಲಶಕ್ತಿ ಸಚಿವಾಲಯ ಆರಂಭಿಸಿ, ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಯನ್ನು ಒಂದೇ ಇಲಾಖೆ ಅಡಿ ತರುವ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು. ಈ ಮೂಲಕ ದೇಶದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಮತ್ತು ಕೃಷಿಗೆ ನೀರು ನೀಡಲು ಪ್ರಧಾನ ಮಂತ್ರಿಗಳು ಚಿಂತಿಸಿದ್ದಾರೆ. ಇಂತ ಸಂದರ್ಭದಲ್ಲಿ ನದಿ ಜೋಡಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಸದ ಜಿ.ಎಸ್. ಬಸವರಾಜ್ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ತಪಸ್ಸು. ಈ ಯೋಜನೆಯಡಿಯಲ್ಲಿ ದಕ್ಷಿಣ ಭಾರತದಲ್ಲಿ ನದಿ ಜೋಡಣೆಗೆ ಯೋಜನೆ ತಯಾರಾಗುತ್ತಿದೆ. ರಾಜ್ಯದಲ್ಲಿನ ನದಿ ಜೋಡಣೆಯಿಂದ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಾಶ್ವತ ನೀರಾವರಿಗೆ ವಿಶೇಷ ಅಧಿವೇಶನ:ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಬೇಕಾದರೆ ನದಿ ಜೋಡಣೆ ಆಗಬೇಕು. ಈ ಒತ್ತಾಯ ನಮ್ಮ ರಾಜ್ಯದಿಂದಲೇ ಮೊದಲು ಪ್ರಾರಂಭವಾಗಬೇಕು. ಹೀಗಾಗಿ ಸಂಸದರ ಹಾಗೂ ಸರ್ವ ಪಕ್ಷಗಳ ಸಭೆ ಕರೆಯಬೇಕು. ಶಾಶ್ವತ ನೀರಾವರಿಗಾಗಿ ವಿಶೇಷ ಅಧಿವೇಶನ ಮಾಡಬೇಕಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಚಿವ ಗಜೇಂದ್ರ ಶೇಖಾವತ್ ಅವರನ್ನು ತುಮಕೂರಿಗೆ ಕಾರ್ಯಕ್ರಮಕ್ಕೆ ಕರೆಯಲಾಗುವುದು. ನೀರಾವರಿ ಯೋಜನೆ ಜಾರಿಗೆ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಮಾಡಲಾಗುತ್ತದೆ. ರಾಜ್ಯದ ಸರ್ವ ಧರ್ಮದ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸುವರು. ಈಗಾಗಲೇ ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ 2019-20 ಸಾಲಿನ ಬಜೆಟ್ನಲ್ಲಿ ಈ ಯೋಜನೆ ಸೇರಿಸಿ ಅನುದಾನ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದರು.
ಹೇಮಾವತಿ ನೀರು ಹಂಚಿಕೆಯಲ್ಲಿ ಅನ್ಯಾಯ: ಹೇಮಾವತಿ ನೀರು ಜಿಲ್ಲೆಗೆ ಬಿಡದಿದ್ದೇ ನನಗೆ ವರದಾನವಾಗಿದೆ. ಹಾಸನದಿಂದ ಜಿಲ್ಲೆಗೆ ಹೇಮಾವತಿ ನೀರಿನ ಹಂಚಿಕೆಯಲ್ಲಾದ ಅನ್ಯಾಯವನ್ನು ಜನರು ಅರಿತುಕೊಂಡಿದ್ದರು. ಇದರಿಂದ ದೇವೇಗೌಡರು ನಿಂತರೂ ನನಗೆ ಜನ ಮತ ನೀಡಿದರು. ಇದು ನೀರಾವರಿ ಬಗ್ಗೆ ಜನತೆಗೆ ಅರಿವು ಮೂಡಿಸಲಾಗಿದೆ.
ರಾಜ್ಯದ ರೈತರಿಗೆ ನೀರು, ವಿದ್ಯುತ್ ಹಾಗೂ ಅವರ ಉತ್ಪನ್ನಕ್ಕೆ ಉತ್ತಮ ಬೆಲೆ ನೀಡಿದರೆ ಯಾವ ಸರ್ಕಾರವೂ ಅವರ ಸಾಲಮನ್ನಾ ಮಾಡುವ ಅವಶ್ಯಕತೆಯಿಲ್ಲ. ರೈತರೇ ಸರ್ಕಾರಕ್ಕೆ ಸಾಲ ನೀಡುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ್, ನಟರಾಜ್, ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಸೇರಿದಂತೆ ಮತ್ತಿತರಿದ್ದರು.