ನಿರಂತರ ಮಳೆ: ಮಂಗಳ, ಮಾರ್ಕೋನಹಳ್ಳಿ ಜಲಾಶಯ ಭರ್ತಿ
Team Udayavani, Jul 31, 2022, 7:10 PM IST
ಕುಣಿಗಲ್ : ಕುಣಿಗಲ್ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಮಾರ್ಕೋನಹಳ್ಳಿ, ಮಂಗಳ ಜಲಾಶಯಗಳು ಭರ್ತಿಯಾಗಿದ್ದು ತಾಲೂಕಿನ ಹಲವು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ.
ಹಲವು ದಿನಗಳಿಂದ ನಿರಂತರವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಹಾಗೂ ಮಂಗಳ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಮಾರ್ಕೋನಹಳ್ಳಿ ಜಲಾಶಯಕ್ಕೆ 4500 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಮಹಬಲೇಶ್ವರ ತಿಳಿಸಿದ್ದಾರೆ.
ಜಲಾಶಯ ಭರ್ತಿ ಆದ ಕಾರಣ ಸ್ವಯಂ ಚಾಲಿತ ಸೈಪೋನ್ ತೆರೆದು ನೀರು ಹೊರ ಹೋಗುತ್ತದೆ. ಹಾಗಾಗಿ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯ ಬಾರದು, ಜಾನುವಾರಗಳನ್ನು ನಾಲೆ ಬಳಿ ಬಿಡಬಾರದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಜನ ಜಾಗೃತಿ ಮೂಡಿಸಲು ಹೇಮಾವತಿ ಇಲಾಖೆಯ ಅಧಿಕಾರಿಗಳಿಗೆ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾ.ಪಂ ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೆರೆಬೇಟೆ ಗಲಾಟೆ ಪ್ರಕರಣ: ರೈತರ ಹಿತ ಕಾಯ್ದ ಗೃಹ ಸಚಿವರಿಗೆ ಅಭಿನಂದನೆ
11 ವರ್ಷದ ಬಳಿ ಮಂಗಳ ಜಲಾಶಯ ಭರ್ತಿ : ಮಳೆ ನೀರು ಅಧಿಕ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ 11 ವರ್ಷದ ಬಳಿಕ ಮಂಗಳ ಜಲಾಶಯ ಹಾಗೂ 15 ವರ್ಷದ ನಂತರ ಎಡಿಯೂರು ಹೋಬಳಿ ಕಂಠನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿದೆ.
ಶಾಸಕರ ಹರ್ಷ : ನಿರಂತರವಾಗಿ ಹಲವು ದಿನಗಳಿಂದ ಬೀಳುತ್ತಿರು ಮಳೆಯಿಂದ ಹಾಗೂ ಹೇಮಾವತಿ ನಾಲೆಯಲ್ಲಿ ನೀರು ಹರಿಯುತ್ತಿರುವುದರಿಂದ 11 ವರ್ಷದ ಬಳಿಕ ಮಂಗಳ ಜಲಾಶಯ ತುಂಬಿದೆ ಹಾಗೂ ಕಳೆದ ಭಾರಿ ಕಂಠನಹಳ್ಳಿ ಕೆರೆಗೆ ಹೇಮಾವತಿಯಿಂದ ನೀರು ಹರಿಸಿದ ಕಾರಣ ಅರ್ಧ ಕೆರೆ ನೀರು ತುಂಬಿತು ಈ ಭಾರಿ ನಿರಂತರ ಮಳೆಯಿಂದ್ದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕಂಠನಹಳ್ಳಿ ಕೆರೆ 15 ವರ್ಷದ ನಂತರ ಕೆರೆ ತುಂಬಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮುಂದಿನ ವಾರ ಕುಣಿಗಲ್ ದೊಡ್ಡಕೆರೆ ಸಂಪೂರ್ಣವಾಗಿ ತುಂಬಲಿದೆ ಇದರ ಮೂಲಕ ಬೇಗೂರು ಹಾಗೂ ಚಿಕ್ಕಕೆರೆಗಳಿಗೆ ನೀರು ಹರಿಸಿ ಈ ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಭಾರಿ ಮಳೆ ಕೆರೆಯಾದ ಖಾಸಗಿ ಬಸ್ ನಿಲ್ದಾಣ : ಶನಿವಾರ ರಾತ್ರಿ ಹಾಗೂ ಭಾನುವಾರ ಮಧ್ಯಾಹ್ನ ಸಿರಿದ ಭಾರಿ ಮಳೆಯಿಂದ್ದಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಜಲಾವೃತಗೊಂಡಿದೆ. ವಾಹನಗಳ ಸಂಚಾರ ಹಾಗೂ ನಾಗರೀಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಈ ಹಿಂದೆ ಇದ್ದ ರಾಜಕಾಲುವೆಗಳನ್ನು ಬಲಾಡ್ಯ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಮುಚ್ಚಿಸಿರುವ ಕಾರಣ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ಬಸ್ ನಿಲ್ದಾಣ ಕೆರೆಯಾಗಿದೆ ಎಂದು ನಾಗರೀಕರ ಆರೋಪವಾಗಿದೆ.