ಎಂ.ಬಿ. ಪಾಟೀಲ್ ವಿರುದ್ಧ ಆಕ್ರೋಶ
Team Udayavani, Sep 12, 2017, 8:00 AM IST
ತುಮಕೂರು: ಲಿಂಗಾಯತ, ವೀರಶೈವ ಧರ್ಮ ಬೇರೆ ಎಂಬ ಗೊಂದಲದಲ್ಲಿ ಪತ್ಯೇಕ ಧರ್ಮದ ಕೂಗು ಕೇಳುತ್ತಿರುವ ವೇಳೆಯೇ ಸಚಿವ ಎಂ ಬಿ ಪಾಟೀಲ್, “ಸಿದ್ಧಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಿದ್ದಾರೆ’ ಎನ್ನುವ ಹೇಳಿಕೆ ನೀಡಿರುವುದಕ್ಕೆ ಜಿಲ್ಲೆಯ ವೀರಶೈವ, ಲಿಂಗಾಯತ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ಸಿದ್ಧಗಂಗಾ ಮಠದಿಂದ ಯಾವುದೇ ಹೇಳಿಕೆ ಲಿಂಗಾಯಿತ ಧರ್ಮದ ಬಗ್ಗೆ ಬರದಿದ್ದರೂ, ಮಠಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ ಪಾಟೀಲರೊಬ್ಬರೇ “ನನ್ನ ಬಳಿ ಸ್ವಾಮೀಜಿಗಳು ಹೇಳಿದ್ದಾರೆ. ಲಿಂಗಾಯತ ಧರ್ಮಕ್ಕೆ ಸಿದ್ಧಗಂಗಾ ಮಠದ
ಶ್ರೀ ಶಿವಕುಮಾರ ಸ್ವಾಮೀಜಿಯವರ ಬೆಂಬಲ ಸಿಕ್ಕಿದೆ. ನಮ್ಮ ಹೋರಾಟಕ್ಕೆ ಬಲ ಬಂದಿದೆ’ ಎಂಬ ಹೇಳಿಕೆ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಗಳ ಅಭಿಪ್ರಾಯವೇನು ?: ಸಿದ್ಧಗಂಗಾ ಹಿರಿಯ ಶ್ರೀಗಳು ಸದಾ ಸಮಾಜದಲ್ಲಿ ಎಲ್ಲರ ಏಳಿಗೆಯನ್ನು ಬಯಸುವವರು ಶ್ರೀಗಳು ಸಚಿವರಾದ ಎಂ.ಬಿ. ಪಾಟೀಲ್ ಅವರ ಜೊತೆ ಮಾತನಾಡಿದರು. ಆ ವೇಳೆ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಏನೂ ಪ್ರಸ್ತಾಪಿಸಿಲ್ಲ. ಸಚಿವರು ಶ್ರೀಗಳನ್ನು ಮಾತನಾಡಿಸುವ ವೇಳೆ ಲಿಂಗಾಯತ ಧರ್ಮದ ಬಗ್ಗೆ ಪ್ರಸ್ತಾಪಿಸಿದಾಗ ಶ್ರೀಗಳು, ಇಂದಿಗೂ ಹಳ್ಳಿಗಳಲ್ಲಿ ಲಿಂಗಾಯಿತ ಎನ್ನುತಾರೆ ಪಟ್ಟಣ ಪ್ರದೇಶದಲ್ಲಿ ವೀರಶೈವ ಎನ್ನುತ್ತಾರೆ
ಇದರಲ್ಲಿ ಗೊಂದಲ ಯಾಕೆ ಎಲ್ಲರೂ ಒಟ್ಟಾಗಿ ನಡೆಯಿರಿ ಎಂದು ಹೇಳಿದ್ದಾರೆ ಎಂದು ಸದಾ ಡಾ.ಶ್ರೀ ಶಿವಕುಮಾರ ಸ್ವಾಮಿಜಿಗಳ ಬಳಿಯೇ ಇರುವ ಕಣ್ಣೂರು ಸ್ವಾಮಿಗಳು “ಉದಯವಾಣಿ’ಗೆ ತಿಳಿಸಿದರು.
“ಪ್ರತ್ಯೇಕತಾ ಧರ್ಮಕ್ಕೆ ನಮ್ಮ ಬೆಂಬಲವೂ ಇಲ್ಲ ಹಾಗೆಯೇ ವಿರೋಧವೂ ಇಲ್ಲ ಯಾರಿಗಾದರೂ ಒಳ್ಳೆಯದಾಗುವುದಾದರೆ ಅದಕ್ಕೆ ನಮ್ಮ ವಿರೋಧವಿಲ್ಲ, ಹಿರಿಯ ಶ್ರೀಗಳ ಜೊತೆ ಎಂ.ಬಿ ಪಾಟೀಲ ಮಾತನಾಡಿದ್ದಾರೆ, ಆದರೆ ಏನು ಮಾತನಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಲಿಂಗಾಯತ ಪ್ರತ್ಯೆಕ ಧರ್ಮಕ್ಕೆ ಬೆಂಬಲ ನೀಡಿದ್ದಾರೆಂಬುದು ನಮಗೆ ಗೊತ್ತಿಲ್ಲ’ ಎಂದು ಶ್ರೀಸಿದ್ದಲಿಂಗ ಸ್ವಾಮಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿದ್ಧಗಂಗಾ ಶ್ರೀಗಳು ಸಮಾಜದಲ್ಲಿ ಸಮಾನತೆಯನ್ನು ಬಯಸುವವರು. ಯಾವುದೇ ಧರ್ಮದ ಕುರಿತು
ಮಾತನಾಡುವವರಲ್ಲ. ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಶ್ರಮಿಸಿ ಎಂದು ಹೇಳಿರುತ್ತಾರೆ. ಆದರೆ ಸಚಿವರು ಗೊಂದಲ ಸೃಷ್ಠಿಮಾಡಿರಬಹುದು.
– ಕೆ.ಎಚ್. ಶಿವರುದ್ರಯ್ಯ, ಕಾರ್ಯದರ್ಶಿ
ಶ್ರೀ ಸಿದ್ಧಗಂಗಾ ಮಠದ ಹಳೆಯ
ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ
ರಾಜಕಾರಣಿಗಳು ತಮ್ಮ ಚಟಕ್ಕೆ ಏನು ಬೇಕಾದರೂ ಹೇಳುತ್ತಾರೆ, ಇವರು ಸಮಾಜದ ಜೊತೆ ಚಲ್ಲಾಟ ಆಡುತ್ತಿದ್ದಾರೆ, ವೀರಶೈವ ಲಿಂಗಾಯತ ಎರಡೂ ಒಂದೇ. ಹಿಂದೂ ಧರ್ಮದ ಕವಲುಗಳು. ಶ್ರೀಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ.
– ಸೊಗಡು ಎಸ್.ಶಿವಣ್ಣ ,
ಮಾಜಿ ಸಚಿವ
ಲಿಂಗಾಯತರು, ವೀರಶೈವರು ಒಂದೇ. ಇದರಲ್ಲಿ ವೈಭವೀಕರಣ ಬೇಡ, ಅಪಸ್ವರ ಬೇಡ, ಎಲ್ಲಾ ಮುಖಂಡರೂ ಒಂದು ಕಡೆ ಸೇರಿ ಒಗ್ಗಟ್ಟಾಗಿ ಹೋಗಿ ಎಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ. ಆದರೆ ಎಂ.ಬಿ.ಪಾಟೀಲ್ ಶ್ರೀಗಳ ಮಾತನ್ನು ತಿರುಚಿದ್ದಾರೆ.
– ಜಿ.ಎಸ್ ಬಸವರಾಜು,
ಮಾಜಿ ಸಂಸದ