ಪೌರಕಾರ್ಮಿಕರಿಗೆ ಊಟ ಬಡಿಸಿದ ಸದಸ್ಯರು
Team Udayavani, Jan 31, 2021, 5:45 PM IST
ಚಿಕ್ಕನಾಯಕನಹಳ್ಳಿ: ಗುತ್ತಿಗೆ ಪದ್ಧತಿಯಿಂದ ಪೌರಕಾರ್ಮಿಕರ ಬದುಕು ಕಷ್ಟವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪೌರಕಾರ್ಮಿಕರು ಅಧಿಕಾರಿಗಳಿಂದ ಕೇಳಿ ಪಡೆಯಬೇಕು ಎಂದು ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಓಬಳೇಶ್ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನಾ ಮಂದಿರದಲ್ಲಿ ಪುರಸಭೆಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪೌರಕಾರ್ಮಿಕರು ಅತ್ಯಂತ ಕಡಿಮೆ ಸಂಬಳಕ್ಕೆ ಸೇವಾ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸುಮಾರು 1 ಲಕ್ಷ ಪೌರಕಾರ್ಮಿಕರ ಉದ್ಯೋಗ ಖಾಲಿ ಇದ್ದರು ಸಹ ಭರ್ತಿಯಾಗಿಲ್ಲ, ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದರಿಂದ, ಪೌರಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡ: ಪೌರಕಾರ್ಮಿಕರ ದಿನಾಚಾರಣೆ ಎಂದರೆ ಒಂದು ರೀತಿಯ ಹಬ್ಬ, ಕಾಟಚಾರಕ್ಕೆ ಈ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಪೌರ ಕಾರ್ಮಿಕರಿಗೆ ದಿನಾಚರಣೆ ದಿನವೂ ಸಹ ರಜೆ ನೀಡದೆ, ಆಹ್ವಾನ ಪತ್ರಿಕೆಯಲ್ಲಿ ಪೌರಕಾರ್ಮಿಕ ದಿನಾಚರಣೆ ಎಂದು ನಮೂದಿಸದೆ ಅವಮಾನ ಮಾಡಿಲಾಗಿದೆ. ಯಾವ ಸಮುದಾಯ ಮಾಡದ ಕೆಲಸಗಳನ್ನು ಮಾದಿಗ ಸಮುದಾಯ ಮಾಡುತ್ತಿದೆ. ಒಂದು ದಿನವಾದರು ಅಧಿಕಾರಿಗಳು ಪೌರಕಾರ್ಮಿ ಕರನ್ನು ನಾಗರಿಕರನ್ನಾಗಿ ಯಾಕೆ ನೋಡುತ್ತಿಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನಾಳೆಯಿಂದ ಮಾರಿಕಾಂಬಾ ಜಾತ್ರೆ
ಆಹ್ವಾನ ಪತ್ರಿಕೆಯಲ್ಲಿ ತಹಶೀಲ್ದಾರ್ ಹೆಸರೇ ಇಲ್ಲ: ಕೆಲ ದಿನಗಳ ಹಿಂದೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರ ಹೆಸರು ಇಲ್ಲ ಎಂದು ದೊಡ್ಡ ಸುದ್ದಿಯಾಗಿದ್ದ ಬೆನ್ನಲೇ ಪುರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲಿ ತಹಶೀಲ್ದಾರ್ ತೇಜಸ್ವಿನಿ ಅವರ ಹೆಸರು ಇಲ್ಲವಾಗಿತ್ತು. ಪುರಸಭೆ ಸದಸ್ಯರು ಪೌರಕಾರ್ಮಿಕರಿಗೆ ಊಟ ಬಡಿಸುವ ಮೂಲಕ ಪೌರಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ಪುರಸಭೆಯಿಂದ ಕೆಲ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತ್ತು. ಸಮಾಜಕಲ್ಯಾಣ ಅಧಿಕಾರಿ
ರೇಣುಕಾದೇವಿ, ಪುರಸಭೆ ಅಧ್ಯಕ್ಷೆ ಪುಷ್ಪ , ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ , ಪುರಸಭೆ ಉಪಾಧ್ಯಕ್ಷೆ ರೇಣುಕಾಗುರುಮೂರ್ತಿ , ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಸಿ.ಕೆ ಇದ್ದರು.