ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢ
Team Udayavani, Jan 29, 2022, 2:24 PM IST
ತುಮಕೂರು: ಕೋವಿಡ್ ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ಎದುರಿಸಿ, ತುಮಕೂರು ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢವಾಗಿದೆ ಎಂದು ತುಮುಲ್ ಅಧ್ಯಕ್ಷ ಮಹಲಿಂಗಯ್ಯ ತಿಳಿಸಿದರು.
ನಗರದ ಬಡ್ಡಿಹಳ್ಳಿ 60 ಅಡಿ ರಸ್ತೆಯಲ್ಲಿರುವ ಗೋಕುಲ ಬಡಾವಣೆಯ 2ನೇ ಹಂತದಲ್ಲಿ ಪ. ಪಂಗಡ ಕಲ್ಯಾಣ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿರುವ ನೂತನ ನಂದಿನಿ ಹಾಲಿನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಡಿಮೆಯಾಗಿ ಹಾಲಿನ ಪೌಡರ್ ಮತ್ತು ಬೆಣ್ಣೆದಾಸ್ತಾನು ಉಳಿದಿದೆ. ಆದರೂ, ಒಕ್ಕೂಟ ಹಾಲು ಉತ್ಪಾದಕರಿಗೆ ಅತಿ ಹೆಚ್ಚಿನ ಹಾಲಿನ ದರವನ್ನು ನೀಡುತ್ತಿದೆ ಎಂದರು.
ಅಧಿಕಾರಿ ವರ್ಗ ಸಕ್ರಿಯ: ಹಾಲು ಉತ್ಪಾದಕ ರೈತರಿಗೆ ಒಕ್ಕೂಟದಿಂದ ಎಲ್ಲ ರೀತಿಯ ಸಹಕಾರ, ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರ ಬಟವಾಡಿಯನ್ನು ಬಾಕಿ ಉಳಿಸಿಕೊಳ್ಳುವುದಿಲ್ಲ. ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಒಕ್ಕೂಟ ಸದೃಢವಾಗಿದ್ದು, ಈಗಾಗಲೇ ಒಕ್ಕೂಟದ ಸಾಲವನ್ನು ಸಹ ತೀರುವಳಿ ಮಾಡಿ ಆರ್ಥಿಕವಾಗಿ ಸದೃಢವಾಗಿದ್ದೇವೆ ಎಂದು ಪುನರುಚ್ಚರಿಸಿದರು.
ಮಾರುಕಟ್ಟೆ ಅಭಿವೃದ್ಧಿಯಾಗಲಿ: ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಲಿ ಎಂದು ಒಕ್ಕೂಟ ಮತ್ತು ಕೆಎಂಎಫ್ ವತಿಯಿಂದ ಮಳಿಗೆಯನ್ನು ಉದ್ಘಾಟಿಸಲಾಗಿದೆ. ಫಲಾನುಭವಿಗಳು ಆರ್ಥಿಕಾಭಿವೃದ್ಧಿಹೊಂದಲಿ ಎಂಬುದು ನಮ್ಮ ಆಶಯ. ಇನ್ನು ಹೆಚ್ಚಿನ ರೀತಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಯಾಗಲಿ ಎಂದರು.
ಆರ್ಥಿಕ ಸದೃಢತೆಗೆ ಅನುದಾನ ಬಿಡುಗಡೆ: ವಾಲ್ಮೀಕಿ ಸಮುದಾಯದ ಮುಖಂಡ ವಿ. ಪ್ರತಾಪ್ ಮಾತನಾಡಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡಗಳ ಯುವಕರ ಆರ್ಥಿಕ ಸದೃಢತೆಗಾಗಿ ಸರ್ಕಾರ 10 ಲಕ್ಷ ರೂ.ಮಂಜೂರು ಮಾಡುತ್ತಿದೆ. ಈಗ ಸರ್ಕಾರ ಮತ್ತು ಕೆಎಂಎಫ್ ವತಿಯಿಂದ 7 ಲಕ್ಷ ರೂ. ಅನುದಾನ ನೀಡಿ ಸಮುದಾಯದ ಯುವಕರಿಗೆ ಉದ್ಯೋಗ ಕಲ್ಪಿಸಿ ಕೊಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್, ಪರಿಶಿಷ್ಟ ವರ್ಗಗಳಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತ್ಯಾಗರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಜಿಲ್ಲಾ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ತುಮುಲ್ನ ಮಾರುಕಟ್ಟೆ ವ್ಯವಸ್ಥಾಪಕ ಅಶೋಕ್ ಎನ್.ಸಿ., ಮಾರುಕಟ್ಟೆ ಅಧಿಕಾರಿ ನರಸೇಗೌಡ, ಮಾರುಕಟ್ಟೆ ಮೇಲ್ವಿಚಾರಕ ಶ್ರೀನಿವಾಸ್, ವಿಶ್ವನಾಥ್, ನಿತೀಶ್,ಭರತ್, ಫಲಾನುಭವಿ ಉಮೇಶ್, ಮೇಘನಾ ಹಾಗೂ ಮತ್ತಿತರರು ಇದ್ದರು.
ನಗರದಲ್ಲಿ 11 ನಂದಿನಿ ಮಳಿಗೆ ಸ್ಥಾಪನೆ: ಮಹಲಿಂಗಯ್ಯ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ಇಳಿಕೆಯಾಗಿ ಒಕ್ಕೂಟಕ್ಕೆ ಆರ್ಥಿಕವಾಗಿ ಹೆಚ್ಚಿನ ಸಹಾಯವಾದರೆ ರೈತರಿಗೆ ಮತ್ತಷ್ಟು ಸೌಲಭ್ಯಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನಗರದಲ್ಲಿ ಈಗಾಗಲೇ11 ನಂದಿನಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸರ್ಕಾರದ ಸಹಯೋಗದೊಂದಿಗೆ 7 ಲಕ್ಷ ರೂ. ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಹಾಗಾ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನೀಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಮಹಲಿಂಗಯ್ಯ ಹೇಳಿದರು.