ಅಂಗನವಾಡಿ ಅನುದಾನ ದುರುಪಯೋಗ
Team Udayavani, Feb 18, 2020, 3:00 AM IST
ಕೊರಟಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು ನಿಯಮ ಉಲ್ಲಂ ಸಿ ಕುರಂಕೋಟೆ ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ಲಕ್ಷ್ಮಣ್ ದುರ್ಬಳಕೆ ಮಾಡಿರುವುದು ತಾಪಂ ಸಹಾಯಕ ಲೆಕ್ಕಾಧಿಕಾರಿ ಮತ್ತು ಇಒ ತನಿಖೆಯಿಂದ ಬಯಲಾಗಿದೆ.
2 ಲಕ್ಷ ರೂ. ಜಮೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಿಕ್ಕೆಗುಟ್ಟೆ ಅಂಗನವಾಡಿ ಕೇಂದ್ರದ ದುರಸ್ತಿ ಮತ್ತು ಮರು ನಿರ್ಮಾಣಕ್ಕೆ 2019ನೇ ಜೂ.18ರಂದು ಕುರಂಕೋಟೆ ಗ್ರಾಪಂ ವರ್ಗ-1ರ ಪಿಡಿಒ ಖಾತೆಗೆ 2 ಲಕ್ಷ ರೂ. ಜಮೆಯಾಗಿದೆ. ಆದರೆ ಹಣವನ್ನು ಯಾವುದೇ ಮಾನದಂಡವಿಲ್ಲದೇ ದುರುಪಯೋಗ ಮಾಡಿಕೊಂಡಿದ್ದಾರೆ.
ಸರ್ಕಾರದ ಆದೇಶದಂತೆ ಅಂಗನವಾಡಿ ಕೇಂದ್ರದ ದುರಸ್ತಿ, ಮರು ನಿರ್ಮಾಣ, ಶೌಚಗೃಹ, ಶೌಚಗುಂಡಿ, ಪ್ರತ್ಯೇಕ ಕೊಠಡಿ, ಅಡುಗೆ ಮನೆ ನೆಲಕ್ಕೆ ಟೈಲ್ಸ್, ನೀರಿನ ತೊಟ್ಟಿ, ಓವರ್ ಹೆಡ್ ಟ್ಯಾಂಕ್, ಕಾಂಪೌಂಡು, ನೆಲಹಾಸು, ವಿದ್ಯುತ್ ವ್ಯವಸ್ಥೆ, ಗೋಡೆ ವಿನ್ಯಾಸ, ಕಪಾಟು, ಕಿಟಕಿ, ಬಾಗಿಲು, ಸ್ಲಾéಬ್ ಸೇರಿ ಉನ್ನತೀಕರಣ ಮಾಡಿಸಿದ ನಂತರ ಅನುದಾನಕ್ಕೆ ಮಂಜೂರಾತಿ ನೀಡಬೇಕು.
ಕುರಂಕೋಟೆ ಗ್ರಾಪಂ ಕಾರ್ಯದರ್ಶಿ ಪ್ರಭಾರ ಪಿಡಿಒ ಆಗಿದ್ದ ಲಕ್ಷ್ಮಣ್ ನಿಯಮ ಉಲ್ಲಂ ಸಿ ಅನುದಾನ ದುರ್ಬಳಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿರುವ ತಾಪಂ ಸಹಾಯಕ ಲೆಕ್ಕಾಧಿಕಾರಿ ತನಿಖಾ ವರದಿ ಇಒ, ಜಿಪಂ ಸಿಇಒ ಮತ್ತು ಭ್ರಷ್ಟಚಾರ ನಿಗ್ರಹದಳ ಕಚೇರಿಗೆ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.
ಇನ್ನೂ ಹಲವೆಡೆ ಅವ್ಯವಹಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಪಂ ಎಇಇ, ತಾಪಂ ಮತ್ತು ಗ್ರಾಪಂ ಅಧ್ಯಕ್ಷ ಅನುಮತಿ ಇಲ್ಲದೆ ಗ್ರಾಪಂ ಪಿಡಿಒ ಹಣ ಬಿಡುಗಡೆ ಮಾಡಿರುವುದರಿಂದ ಅಂಗನವಾಡಿ ದುರಸ್ತಿ ಸ್ಥಗಿತಗೊಂಡಿದೆ. ಬ್ಯಾಂಕ್ ವ್ಯವಹಾರದ ದಾಖಲೆ ಗ್ರಾಪಂಗೆ ಒದಗಿಸದೆ ಹಣ ಲೂಟಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಕೊರಟಗೆರೆಯ ಕುರಂಕೋಟೆ, ಹಂಚಿಹಳ್ಳಿ, ಕೋಳಾಲ, ಪಾತಗಾನಹಳ್ಳಿ, ಅಕ್ಕಿರಾಂಪುರ, ತುಂಬಾಡಿ, ಬೂದಗವಿ ಮತ್ತು ಅರಸಾಪುರ ಗ್ರಾಪಂಗೆ ಎಸ್ಸಿಪಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕಾಗಿ ತಲಾ 2ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅಂಗನವಾಡಿ ಉನ್ನತೀಕರಣ ಆಗದೆ ಅನುದಾನ ಖರ್ಚಾಗಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕಾಗಿದೆ.
ಕುರಂಕೋಟೆ ಗ್ರಾಪಂ ಪ್ರಭಾರ ಪಿಡಿಒ ಲಕ್ಷ್ಮಣ್ ಅಂಗನವಾಡಿ ಕಾಮಗಾರಿ ಮತ್ತು ಅನುದಾನದ ದಾಖಲೆ ಹಸ್ತಾಂತರ ಮಾಡದಿರುವ ಬಗ್ಗೆ ತಾಪಂ ಇಒಗೆ ದೂರು ನೀಡಿದ್ದೇನೆ. ಗ್ರಾಪಂ ಖಾತೆಗೆ ಜಮಾ ಆಗಿರುವ ಅಂಗನವಾಡಿ ಅನುದಾನ ದುರುಪಯೋಗ ಆಗಿದ್ದರೆ ಜಿಪಂ ಸಿಇಒ ಕ್ರಮ ಕೈಗೊಳ್ಳಲಿದ್ದಾರೆ.
-ನಾಗರಾಜು, ಪಿಡಿಒ, ಕುರಂಕೋಟೆ
ಗ್ರಾಪಂನಿಂದಲೇ ಬರಕದ ಕದುರಯ್ಯನಿಗೆ ಅಂಗನವಾಡಿ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ. ಅರ್ಧ ಕಾಮಗಾರಿ ಮುಗಿದಿದ್ದು, ಕಾಮಗಾರಿ ಮುಗಿಯದೇ ಹಣ ಮಂಜೂರು ಮಾಡಲು ಗ್ರಾಪಂಗೆ ಸೂಚನೆ ನೀಡಿಲ್ಲ.
-ದಯಾನಂದ, ಜೆಇ, ಜಿಪಂ
ಗ್ರಾಪಂ ಸದಸ್ಯರ ದೂರಿನ ಅನ್ವಯ ತಾಪಂ ಸಹಾಯಕ ಲೆಕ್ಕಾಧಿಕಾರಿ ಈಗಾಗಲೇ ಕುರಂಕೋಟೆ ಗ್ರಾಪಂ ದಾಖಲೆ ಪರಿಶೀಲಿಸಿದ್ದಾರೆ. ಅಂಗನವಾಡಿ ಉನ್ನತೀಕರಣದ ಅನುದಾನ ದುರುಪಯೋಗ ಆಗಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಜಿಪಂ ಮತ್ತು ಭಷ್ಟ್ರಚಾರ ನಿಗ್ರಹ ದಳಕ್ಕೆ ಪತ್ರ ಬರೆಯಲಾಗಿದೆ.
-ಶಿವಪ್ರಕಾಶ್, ಇಒ, ಕೊರಟಗೆರೆ
* ಎನ್.ಪದ್ಮನಾಭ್