ಕೊಬ್ಬರಿ ನಗರಿಯಲ್ಲಿ ಸಂಭ್ರಮದ ಹೊಸ ವರ್ಷ
Team Udayavani, Jan 2, 2021, 8:45 PM IST
ತಿಪಟೂರಿನ ಶ್ರೀ ಶಿವಲಿಂಗೇಶ್ವರ ಬೇಕರಿಯಲ್ಲಿ ಹೊಸವರ್ಷಕ್ಕಾಗಿ ವಿವಿಧ ಹಾಗೂ ಆಕರ್ಷಕ ಕೇಕ್ಗಳು ಸಿದ್ಧಗೊಂಡಿದ್ದವು. ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ವೀಟ್ ಪ್ರಿಯರು ಮುಗಿಬಿದ್ದಿದ್ದು ಕಂಡು ಬಂತು.
ತಿಪಟೂರು: 2020 ಹಳೆ ವರ್ಷಕ್ಕೆ ವಿದಾಯ ಹೇಳಿ ನೂತನ ವರ್ಷ 2021ನ್ನು ಕಲ್ಪತರು ನಾಡಿನ ಕೊಬ್ಬರಿ ನಗರೀಗರು ಸಂಭ್ರಮ ಹಾಗೂ ಸಡಗರಗಳಿಂದ ಸ್ವಾಗತಿಸಿದರು.
ನಗರದ ಬಿ.ಹೆಚ್. ರಸ್ತೆ ಸೇರಿದಂತೆ ಎಲ್ಲೆಡೆ ಬೇಕರಿಗಳು, ಸ್ವೀಟ್ಸ್ಟಾಲ್ ಮತ್ತು ಹೋಟೆಲ್ಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಾಲಂಕಾರ, ಬಣ್ಣಬಣ್ಣದ ತರಹೇವಾರಿ ಬಲೂನ್ಗಳೊಂದಿಗೆ ಕಂಗೊಳಿಸುತ್ತಿದ್ದವು. ಬೇಕರಿಗಳಲ್ಲಿ ವಿವಿಧ ಬಗೆಯ ಆಕರ್ಷಕಕೇಕ್ಗಳನ್ನು ತಯಾರಿಸಿಮಾರಾಟಕ್ಕಿಡಲಾಗಿತ್ತು. ಕೇಕ್, ಸ್ವೀಟ್, ಜ್ಯೂಸ್, ಕೂಲ್ಡ್ರಿಂಕ್ಸ್ ಮಾರಾಟಬಲು ಜೋರಾಗಿಯೆ ನಡೆಯಿತು.
ಆಕರ್ಷಕ ಉಡುಗೆ-ತೊಡುಗೆಗಳಿಂದ ನಗರದ ಪಾರ್ಕ್ಗಳು, ಹೋಟೆಲ್, ಬೇಕರಿಗಳ ಹೆಂಗಳೆಯರಿಂದ ಹೊಸವರ್ಷದ ಶುಭಾಶಯಗಳು ವಿನಿಮಯವಾಗುತ್ತಿದ್ದವು. ಕೋವಿಡ್ ದಿಂದ ಇಷ್ಟು ತಿಂಗಳ ಕಾಲ ಮುಚ್ಚಲಾಗಿದ್ದ ಶಾಲಾ ಕಾಲೇಜುಗಳನ್ನು ಹೊಸ ವರ್ಷವಾದ ಮೊದಲ ದಿನವಾದ ಶುಕ್ರವಾರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಶುಭಾಶಯ ವ್ಯಕ್ತಪಡಿಸಿದರು.
ನಗರದಲ್ಲಿರುವ ಗ್ರಾಮ ದೇವತೆ ಶ್ರೀ ಕೆಂಪಮ್ಮದೇವಿ, ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ, ಶ್ರೀ ಪಾಂಡುರಂಗಸ್ವಾಮಿ, ಸಾಯಿಬಾಬ ಮಂದಿರ, ರಾಮ ಮಂದಿರ, ಕೆಇಬಿ ರಾಮಮಂದಿರಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ,ಪೂಜೆಗಳು ನಡೆದವು. ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿಇಷ್ಟಾರ್ಥ ಸಿದ್ಧಿಗಾಗಿ ಪಾರ್ಥನೆ ಸಲ್ಲಿಸಿದರು. ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ವಿಶೇಷ ಹೂವುಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ಸಾಲುಸಾಲು ಭಕ್ತರ ದಂಡು ಹರಿದು ಬಂದು ದೇವರುಗಳ ದರ್ಶನ ಪಡೆದು ಪುನೀತರಾದರು.