ಬೋವಿ ಕಾಲೋನಿ ರಸ್ತೆ ದುರಸ್ತಿ ಮಾಡಿ
Team Udayavani, Dec 7, 2019, 3:08 PM IST
ತಿಪಟೂರು: ನಗರದ ಗಾಂಧಿನಗರದ ಬೋವಿ ಕಾಲೋನಿ ರಸ್ತೆಯು ಮಳೆಯಿಂದ ಕೊಚ್ಚೆ ಗುಂಡಿಯಾಗಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸೈಫುಲ್ಲಾ ಒತ್ತಾಯಿಸಿದ್ದಾರೆ.
ಇಲ್ಲಿನ ರಸ್ತೆಗಳು ಡಾಂಬರ್ ಕಂಡು ಎಷ್ಟು ವರ್ಷಗಳಾಗಿವೆಯೊ ತಿಳಿಯದು. ರಸ್ತೆಗಳಲ್ಲಿ ಗುಂಡಿಗಳೆ ಹೆಚ್ಚಾಗಿವೆ. ಸೋನೆ ಮಳೆ ಬಂದರೂ ಕೊಚ್ಚೆಯಾಗಿ ಬಿಡುವ ರಸ್ತೆಗಳಲ್ಲಿ ಜನರು ನಡೆದಾಡಲು ಪರ ದಾಡಬೇಕು. ಯುಜಿಡಿ ಕಾಮಗಾರಿಮಾಡಿ ಅನೇಕ ರಸ್ತೆ ಹಾಳು ಮಾಡಿ ಎರಡು ವರ್ಷಗಳಾದರೂ ರಿಪೇರಿ ಮಾಡಿಲ್ಲ. ಇದರಿಂದ ಹಲವು ಅಪಘಾತ ಗಳಿಗೆ ಕಾರಣವಾಗಿದ್ದರೂ ನಗರಸಭೆ ಅಥವಾ ತಾಲೂಕು ಆಡಳಿತ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಇದ್ದಾಗಷ್ಟೇ ಬರುವ ಜನ ಪ್ರತಿನಿಧಿಗಳು ಇಲ್ಲಿನ ಸಮಸ್ಯೆ ಆಲಿಸುವ ಪ್ರಯತ್ನ ಮಾಡುತ್ತಿಲ್ಲ. ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ಶಾಲಾ ಮಕ್ಕಳು ಓಡಾಡುವಾಗ ಸಿಡಿಯುವ ಕೆಸರು ಬಟ್ಟೆಯನ್ನೆಲ್ಲಾ ಹಾಳು ಮಾಡುತ್ತಿದೆ. ಕೆಲ ಜನಪ್ರತಿನಿಧಿಗಳು ಬೋವಿ ಕಾಲೋನಿಕಡೆಗಣಿಸಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಡಾಂಬರೀಕರಣ ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ ಬೇಕೆಂದು ಸೈಫುಲ್ಲ ಒತ್ತಾಯಿಸಿದ್ದಾರೆ.