ವಿದ್ಯಾನಗರದ ರಸ್ತೆ ದುರಸ್ತಿಗೆ ಪಟ್ಟು
Team Udayavani, Nov 20, 2019, 4:54 PM IST
ತಿಪಟೂರು: ನಗರದ ವಾರ್ಡ್ ನಂ.14ರ ವಿದ್ಯಾನಗರದಲ್ಲಿ ನಗರಾಡಳಿತದ ನಿರ್ಲಕ್ಷ್ಯಹಾಗೂ ಅವೈಜ್ಞಾನಿಕ ಯುಜಿಡಿ ಕಾಮಗಾರಿಗಳಿಂದ ರಸ್ತೆಗಳೆಲ್ಲ ಕೆಸರು ಗದ್ದೆಗಳಾಂತಾಗಿದೆ. ಡಾಂಬರೀಕರಣ ಕಾಣದೆ ಗುಂಡಿಗಳಿಂದ ಕೂಡಿದ್ದು, ಎಷ್ಟೇ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ದುರಸ್ತಿಗೆ
ಮುಂದಾಗದ ಕಾರಣ ನಿವಾಸಿ ಗಳೊಂದಿಗೆ ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ನಗರಸಭಾ ಸದಸ್ಯ ವಿ. ಯೋಗೇಶ್ ನೀಡಿರುವ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಯುಜಿಡಿ ಕಾಮಗಾರಿಯಿಂದ ರಸ್ತೆ ಗಳೆಲ್ಲಾ ಕೆಸರು ಮಯವಾಗಿವೆ. ನಗರ ಸಭೆ ಪೌರಾಯುಕ್ತರು ಸೇರಿ ಎಂಜಿನಿಯರುಗಳಿಗೆ ಅನೇಕ ಬಾರಿ ತಿಳಿಸಿದರೂಕ್ರಮ ಕೈಗೊಂಡಿಲ್ಲ. ಪ್ರತಿ ವಾರ್ಡ್ ಗಳಲ್ಲಿಯೂ ಇದೇ ಸಮಸ್ಯೆ ಇದ್ದು, ಜನರು ನಮಗೆ ಬೈಯುತ್ತಿದ್ದಾರೆ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿ ಚರಂಡಿ ಯಾವುದು, ಗುಂಡಿ ಯಾವುದೆಂದು ತಿಳಿ ಯದೇ ಓಡಾಡುವುದು ಕಷ್ಟವಾಗಿದೆ ಅಲ್ಲದೆ ಶಾಲೆಗೆ ತೆರಳುವ ಮಕ್ಕಳು, ಮಕ್ಕಳನ್ನು ಕರೆದುಕೊಂಡು ಹೋಗುವ ಮಹಿಳೆಯರು, ವಯೋ ವೃದ್ಧರು ಅನೇಕ ಬಾರಿ ಬಿದ್ದು ಕೈಕಾಲು ಮುರಿದು ಕೊಂಡಿದ್ದರೂ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.