ಅ.15ರವರೆಗೆ ಮತಪಟ್ಟಿ ಪರಿಷ್ಕರಣೆ
Team Udayavani, Sep 25, 2019, 5:39 PM IST
ತುಮಕೂರು: ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಪ್ರಯುಕ್ತ ಜಿಲ್ಲಾದ್ಯಂತ ಈಗಾಗಲೇ ಸೆ.1 ರಿಂದ ಹಮ್ಮಿಕೊಂಡಿರುವ ವಿಶೇಷ ಆಂದೋಲನ ಅ.15 ರವರೆಗೆ ನಡೆ ಯಲಿದೆ ಎಂದು ಜಿಪಂ ಸಿಇಒ ಶುಭಾಕಲ್ಯಾಣ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮತದಾರರ ಸಾಕ್ಷರತಾ ಸಂಘಗಳ ಉದ್ಘಾಟನೆ ಮತ್ತು ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ – 2020ರಅಂಗವಾಗಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅರಿವು ಮೂಡಿಸಿ: ಸಂಘಗಳ ಸದಸ್ಯರು ಮತಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಪಾಲ್ಗೊಂಡು 1950ಕ್ಕೆ ಉಚಿತ ಕರೆ ಮಾಡುವ ಮೂಲಕ ಮತಪಟ್ಟಿಯ ಮಾಹಿತಿ ಪಡೆಯುವ, ಹೊಸದಾಗಿ ಮತ ದಾರರ ಪಟ್ಟಿ ಸೇರ್ಪಡೆ ಹಾಗೂ ಮತದಾರರ ಪಟ್ಟಿ ಪರಿಶೀಲನೆ ಬಗ್ಗೆ ಸಾರ್ವ ಜನಿಕರಿಗೆ ಅರಿವು ಮೂಡಿಸಬೇಕೆಂದರು.
ತಾಂತ್ರಿಕ ವಿಷಯದ ಅರಿವು: ಪದವಿ ಕಾಲೇಜುಗಳ ವಿಶೇಷ ಅಧಿಕಾರಿ ಗೌರಿ ನಾಯ್ಡು, ಮತದಾರರ ಸಾಕ್ಷರತಾ ಸಂಘ ಗಳ ಪಾತ್ರದ ಬಗ್ಗೆ ವಿವರಿಸಿದರು. ಡಯಟ್ ಉಪನ್ಯಾಸಕ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತಿದಾರ ಶ್ರೀಧರ್, ಸಂಕ್ಷಿಪ್ತ ವಿಶೇಷ ಪರಿಷ್ಕರಣೆ-2020 ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ತಾಂತ್ರಿಕ ವಿಷಯ ವಿವರಿಸಿದರು. ಈ ಮುನ್ನ ನಡೆದ ಜಾಥಾಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಹಸಿರು ನಿಶಾನೆ ತೋರಿಸಿದರು. ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪದವಿ ಪೂರ್ವ ಕಾಲೇಜಿನ ಇಎಲ್ಸಿ ಸಂಚಾಲಕ ಡಾ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.