ವಿದ್ಯಾರ್ಥಿಗಳ ತಾಯಂದಿರಿಗೆ ಶಿಕ್ಷಕನಿಂದ ಅಶ್ಲೀಲ ಸಂದೇಶ: ಅಮಾನತು
Team Udayavani, Jun 29, 2022, 3:46 PM IST
ಮಧುಗಿರಿ: ಶಾಲೆಯ ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣ ಪತ್ರ ನೀಡಲು ಹಾಗೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ಮೊಬೈಲ್ ನಂಬರ್ ಪಡೆದು ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಡಿಡಿಪಿಐ ರೇವಣ್ಣ ಸಿದ್ದಯ್ಯ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಸುರೇಶ್ ಅಮಾನತ್ತಾದ ಶಿಕ್ಷಕ. ಈತ ಶಾಲೆಗೆ ಸರಿಯಾಗಿ ಹಾಜರಾಗದೆ ಮೇಲಧಿಕಾರಿಗಳ ಹೆಸರೇಳಿ ಕೊಂಡು ತಿರುಗುತ್ತಿದ್ದು, ಗ್ರಾಮದಲ್ಲಿ ಯುವಕರಿಗೆ ಮದ್ಯಪಾನ ಮಾಡಿಸಿ ರಾಜಕೀಯ ಮಾಡುತ್ತಿದ್ದರು ಎಂದು ಗ್ರಾಮದ ಗ್ರಾಪಂ ಸದಸ್ಯ ಶಿವಕುಮಾರ್ ಸೇರಿದಂತೆ ಗ್ರಾಮಸ್ಥರು ಆರೋಪಿಸಿ ಡಿಡಿಪಿಐಗೆ ದೂರು ಸಲ್ಲಿಸಿದ್ದರು.
ಮೊಬೈಲ್ ನಂಬರ್ ಪಡೆದು ಮಕ್ಕಳ ತಾಯಿಯಂದಿರಿಗೆ ಅಶ್ಲೀಲವಾದ ಮೆಸೇಜ್ ಮಾಡುವುದು, ವಿಡಿಯೋ ಕಳಿಸುವುದು ಮಾಡುತ್ತಿದ್ದ. ಇದಲ್ಲದೇ ಶಾಲೆಯ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವಿದ್ದು, ಈ ಶಿಕ್ಷಕನನ್ನು ವಜಾ ಅಥವಾ ಅಮಾನತುಗೊಳಿಸುವಂತೆ ದೂರು ನೀಡಲಾಗಿತ್ತು.
ಈ ದೂರಿನನ್ವಯ ಪರಿಶೀಲನೆ ನಡೆಸಿದ್ದ ಡಿಡಿಪಿಐ ಶಿಕ್ಷಕ ಎಂ.ಸುರೇಶ್ನನ್ನು ಅಮಾನತು ಗೊಳಿಸಿ ಆದೇಶಿಸಿದ್ದಾರೆ.