ಶ್ರೀಗಳ ಗದ್ದುಗೆ ನೋಡಲು ನಿಲ್ಲದ ಭಕ್ತಸಾಗರ
Team Udayavani, Jan 25, 2019, 6:44 AM IST
ತುಮಕೂರು: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಭಕ್ತ ಸಾಗರ ಹರಿದು ಬರುವುದು ನಿಂತಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡು ಬರುತ್ತಲೇ ಇದೆ. ಶ್ರೀಗಳ ಗದ್ದುಗೆ ನೋಡಿ ಭಕ್ತರು, ಗಣ್ಯರ ದಂಡು ನಮಿಸುತ್ತಿದ್ದಾರೆ.
ಭಕ್ತರ ಪಾಲಿನ ನಡೆದಾಡುವ ದೇವರಾಗಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಯವರು ಶಿವೈಕ್ಯರಾಗಿ ನಾಲ್ಕು ದಿನವಾಗಿದೆ. ಆದರೆ, ಭಕ್ತರ ಮನದಾಳದ ನೋವು ಕಡಿಮೆಯಾಗಿಲ್ಲ. ಶ್ರೀ ಮಠಕ್ಕೆ ಬರುವ ಭಕ್ತರು ಶ್ರೀಗಳು ಇಲ್ಲದ ಮಠವನ್ನು ನೋಡಿ ಕೆಲವರು ಕಣ್ಣೀರು ಹಾಕಿದರೆ, ಕೆಲವು ಭಕ್ತರು ಗದ್ದುಗೆಯಲ್ಲಿ ಶ್ರೀಗಳಿದ್ದಾರೆ. ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ಎನ್ನುವ ಧನ್ಯತಾ ಭಾವನೆ ವ್ಯಕ್ತಪಡಿಸುತ್ತಿದ್ದದ್ದು, ಶ್ರೀಮಠದಲ್ಲಿ ಗುರುವಾರ ಕಂಡು ಬಂದಿತು.
ಒಂಬತ್ತು ದಶಕಗಳ ಕಾಲ ಸಿದ್ಧಗಂಗಾ ಮಠದ ಬೆಳಕಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಇಲ್ಲದಿರುವುದು ಭಕ್ತರಿಗೆ ಇನ್ನೂ ಸಹಿಸಲು ಸಾಧ್ಯವಾಗದಾಗಿದೆ.
ವಿದ್ಯಾರ್ಥಿಗಳಿಂದ ಪೂಜೆ: ಗುರುವಾರ ಬೆಳಗ್ಗೆ ಶ್ರೀಕ್ಷೇತ್ರ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಯವರು ಪಂಚಾಕ್ಷರ ಮಂತ್ರ ಪಠಿಸಿ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗದ್ದುಗೆಗೆ ಮಠದ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ನಮಿಸಿದರು.
ಇದಕ್ಕೂ ಮುನ್ನ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮುಂಜಾನೆಯೇ ಬೆಟ್ಟದ ಮೇಲಿನ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಉದ್ಧಾನ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಶ್ವಾನ ನಮನ: ಶ್ರೀಮಠದಲ್ಲಿ ನಡೆದಾಡುವ ದೇವರು ಇಲ್ಲದ ನಡೆದ ಮಕ್ಕಳ ಮೊದಲ ಪ್ರಾರ್ಥನೆಯಲ್ಲಿ ಶ್ವಾನ ಭಾಗಿಯಾಗಿದ್ದು ವಿಶೇಷವಾಗಿತ್ತು. ಶ್ರೀಗಳಿಗೆ ಶ್ವಾನ ಸೇರಿದಂತೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹಾಗಾಗಿ ಶ್ರೀಗಳ ಕುರಿತು ವಿದ್ಯಾರ್ಥಿಗಳಿಂದ ನಡೆದ ಪ್ರಾರ್ಥನೆಯಲ್ಲಿ ಶ್ವಾನ ಭಾಗವಹಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಮಕ್ಕಳ ಪ್ರಾರ್ಥನೆ ಮುಗಿಯುವವರೆಗೂ ಶ್ವಾನ ದುಃಖದ ಮಡುವಿನಲ್ಲಿರುವಂತೆ ಕಂಡು ಬಂದಿತ್ತು. ಪ್ರಾಣಿಗಳಿಗೂ ಶ್ರೀಗಳು ಇಲ್ಲದ ನೋವು ಸಹಿಸಲು ಸಾಧ್ಯವಾಗದ ಸಿœತಿ ನಿರ್ಮಾಣವಾಗಿದೆ.
ಮಾಜಿ ಸಚಿವ ಚೆಲುವರಾಯ ಸ್ವಾಮಿ ಮಠಕ್ಕೆ ಭೇಟಿ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ದೇವರು ಎನ್ನುವ ಪದಕ್ಕೆ ಸೂಕ್ತ ವ್ಯಕ್ತಿ: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಷ್ಟ್ರದ ಜನರೇ ಶ್ರೀಗಳ ಶಿವೈಕ್ಯಕ್ಕೆ ಮಿಡಿದಿದ್ದಾರೆ. ಶ್ರೀಗಳ ಕ್ರಿಯಾ ಸಮಾಧಿ ರೀತಿ ದೇಶದಲ್ಲಿ ಎಲ್ಲೂ ನಡೆದಿಲ್ಲ. ದೇವರು ಎನ್ನುವ ಪದಕ್ಕೆ ಸೂಕ್ತವಾದ ವ್ಯಕ್ತಿ ಸಿದ್ಧಗಂಗಾ ಶ್ರೀಗಳು ಎಂದು ಬಣ್ಣಿಸಿದರು.
ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದಾಡುವ ದೇವರಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ದೇವರಾಗಿಯೇ ನೆಲೆಸುತ್ತಾರೆ. ಅವರ ಶರೀರ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ಶಕ್ತಿ ಸದಾ ನಮ್ಮೊಂದಿಗಿದೆ ಎಂದರು.
ನಾನು ಮಠದ ವಿದ್ಯಾರ್ಥಿ: ಶ್ರೀಮಠವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಕಿರಿಯ ಶ್ರೀಗಳು ತುಂಬಾ ಸರಳರು, ಬುದ್ಧಿಜೀವಿಗಳು, ಎಲ್ಲವನ್ನೂ ಹಾಗೆಯೇ ನಡೆಸಿಕೊಂಡು ಹೋಗುತ್ತಾರೆ. ಹಿರಿಯ ಶ್ರೀಗಳು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲೇ ಮಠ ನಡೆಸುತ್ತಾರೆ ಎಂದರು.