ಕಳ್ಳ ಸಾಗಣೆ:210 ಮೂಟೆ ಅಕ್ಕಿ ವಶ
ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿ ಜಪ್ತಿ, ಕ್ಯಾತ್ಸಂದ್ರ ಪೊಲೀಸರ ಕಾರ್ಯಾಚರಣೆ
Team Udayavani, May 12, 2019, 2:11 PM IST
ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದ ಲಾರಿ ಜಪ್ತಿ, ಕ್ಯಾತ್ಸಂದ್ರ ಪೊಲೀಸರ ಕಾರ್ಯಾಚರಣೆ
ತುಮಕೂರು: ಅಕ್ಕಿ ಕಳ್ಳ ಸಾಗಣೆ ಮಾಡುತ್ತಿದ್ದ ಮಿನಿಲಾರಿಯನ್ನು ಕ್ಯಾತ್ಸಂದ್ರ ಠಾಣೆ ಪಿಎಸ್ಐ ಡಿ.ಎಲ್.ರಾಜು ನೇತೃತ್ವ ದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಲಾರಿ ವಶಕ್ಕೆ ಪಡೆದು ಅದರಲ್ಲಿದ್ದ 210 ಚೀಲ ಅಕ್ಕಿ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮಿನಿ ಲಾರಿ ಯಲ್ಲಿ ಅಕ್ಕಿ ತುಂಬಿಕೊಂಡು ತುಮಕೂರಿನ ಕಡೆ ಬರುತ್ತಿದ್ದ ವೇಳೆ ಕ್ಯಾತ್ಸಂದ್ರ ಪೊಲೀಸರು ದಾಳಿ ನಡೆಸಿದರು. ಈ ವೇಳೆ ದಾಖಲೆ ಇಲ್ಲದೆ ಅಕ್ರಮವಾಗಿ ಕಳ್ಳಸಾಗಣೆಯಾಗು ತ್ತಿದ್ದ 210 ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕ್ಯಾತ್ಸಂದ್ರ ಠಾಣೆ ಪಿಎಸ್ಐ ಡಿ.ಎಲ್.ರಾಜು ಮತ್ತು ಅವರ ಸಿಬ್ಬಂದಿ ನಗರದ ಆಹಾರ ನಿರೀಕ್ಷಕ ಡಿ.ನಾಗರಾಜು ಸಹಯೋಗದೊಂದಿಗೆ ಕ್ಯಾತ್ಸಂದ್ರ ವೃತ್ತದ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 5.50ರ ವೇಳೆ ಚೊಕ್ಕೇನಹಳ್ಳಿ ಬಳಿ ಇರುವ ಎಚ್ಎಂಐಟಿಸಿ ಕಾಲೇಜು ಸಮೀಪದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಆರೋಪಿಗಳನ್ನು ಮತ್ತು ಅಕ್ಕಿಯ ಮಾಲಿಕರು, ಲಾರಿ ಮಾಲಿಕ, ಚಾಲಕ, ಕ್ಲೀನರ್ರನ್ನು ವಶಕ್ಕೆ ಪಡೆದು ಕ್ಯಾತ್ಸಂದ್ರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಈ ದಾಳಿ ನಡೆಸಿದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಶಿಸಿದ್ದಾರೆ.