ಆಧಾರ್ ತಿದ್ದುಪಡಿಗೆ ಪರದಾಟ
ಗ್ರಾಮ ಪಂಚಾಯ್ತಿಗಳಲ್ಲಿ ತಿದ್ದುಪಡಿ ಕಾರ್ಯ ಅನುಷ್ಠಾನವಾಗಿಲ್ಲ
Team Udayavani, May 6, 2019, 5:45 PM IST
ಚಿಕ್ಕನಾಯಕನಹಳ್ಳಿ: ಆಧಾರ್ ಕಾರ್ಡ್ ತಿದ್ದುಪಡಿ ಸಮಸ್ಯೆ ತಾಲೂಕಿನಲ್ಲಿ ಇನ್ನೂ ಬಗೆಹರಿಸಿಲ್ಲ. ಇಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಉಲ್ಬಣಿಸುತ್ತಿದ್ದು, ಆಧಾರ್ ಕಾರ್ಡ್ ತಿದ್ದುಪಡಿಗೆ ಪರದಾಡುತ್ತಿದ್ದಾರೆ. ಬಡವರು, ಅಮಾಯಕ ರೈತರು, ಸಾರ್ವಜನಿಕರು ಪಟ್ಟಣದ ಎಸ್ಬಿಐ ಬ್ಯಾಂಕ್ ಮುಂಭಾಗ ಬೆಳಗ್ಗೆ 6 ಗಂಟೆಗಳಿಂದ ಕಾಯ್ದು ಸುಸ್ತಾಗುತ್ತಿದ್ದಾರೆ.
ಪಟ್ಟಣದ ಎಸ್ಬಿಐ ಬ್ಯಾಂಕ್ ಒಳಗೆ ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುವಂತೆ, ಆಧಾರ್ ಕಾರ್ಡ್ ತಿದ್ದುಪಡಿ ಘಟಕವನ್ನು ಸ್ಥಾಪಿಸಿದ್ದಾರೆ. ನೂರಾರು ಜನ ಆಧಾರ್ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮುಗಿ ಬಿಳುತ್ತಿದ್ದು, ಬ್ಯಾಂಕ್ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಿಸಿಲು ಮಳೆಯಲ್ಲಿ ಸಾರ್ವಜನಿಕರು ಒಣಗಿ, ನೆನೆದು ರೋಸಿಹೊಗುತ್ತಿದ್ದಾರೆ.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕು ಎಂಬ ಸರ್ಕಾರದ ಸುತ್ತೋಲೆ ಇದ್ದರು ಸಹ, ತಾಲೂಕಿನ ಬಹುತೇಕ ಪಂಚಾÀ್ತುಗಳಲ್ಲಿ ತಿದ್ದುಪಡಿ ಕಾರ್ಯ ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದ ಹಳ್ಳಿಗಳ ಜನ ಪ್ರಯಾಣ ವೆಚ್ಚ ಬರಿಸಿಕೊಂಡು ಪಟ್ಟಣಕ್ಕೆ ಬಂದು ಆಧಾರ್ ಕಾರ್ಡ್ ತಿದ್ದುಪಡಿ ಕೆಲಸ ಮಾಡಿಕೊಳ್ಳಬೇಕಾಗಿದೆ. ಸಂಬಂಧಪಟ್ಟ ಅದಿಕಾರಿಗಳು ಆಧಾರ್ ಕಾರ್ಡ್ ತಿದ್ದುಪಡಿ ಕೆಲಸವನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಸಿದರೆ. ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದು ಎಲ್ಲಾರ ಆಶಯವಾಗಿದೆ.