ಕಾನೂನು ಅಸ್ತ್ರವಾಗಿ ಬಳಸಿ, ದುರುಪಯೋಗವಲ್ಲ
Team Udayavani, Mar 14, 2019, 9:44 AM IST
ತುಮಕೂರು: ಮಹಿಳೆಯರು ಅನ್ಯಾಯಕ್ಕೊಳಗಾದಾಗ ತಮಗಿರುವ ಕಾನೂನನ್ನು ಅಸ್ತ್ರವಾಗಿ ಬಳಸಬೇಕೇ ಹೊರತು ದುರುಪಯೋಗಪಡಿಸಿ ಕೊಳ್ಳಬಾರದು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಉಷಾರಾಣಿ ಸಲಹೆ ನೀಡಿದರು.
ನಗರದ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಮಹಿಳೆಯರಿಗಾಗಿ ಸಮಾನತೆ, ಸ್ವಾತಂತ್ರ್ಯ, ಹಕ್ಕು ನೀಡಲಾಗಿದ್ದರೂ, ತನ್ನ ಹಕ್ಕುಗಳಿಗಾಗಿ ಮಹಿಳೆ ಶತ
ಮಾನಗಳಿಂದಲೂ ಹೋರಾಡುತ್ತಲೇ ಬಂದಿದ್ದಾಳೆ. ಸಮಾಜದಲ್ಲಿ ಪುರುಷರಂತೆ ಮಹಿಳೆಯೂ ಸಮಾನವಾಗಿ ಬದುಕಬೇಕು ಎಂದು ಹೇಳಿದರು.
ಮನಸ್ಥಿತಿ ಬದಲಾಯಿಸಿಕೊಳ್ಳಿ: ಮಹಿಳೆಯರ ಸಮಾನತೆಗಾಗಿ ಮೊದಲು ಪುರುಷರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಪ್ರತಿ ನ್ಯಾಯಾಲಯ ದಲ್ಲಿಯೂ ಉಚಿತ ಕಾನೂನು ಸಲಹಾ ಕೇಂದ್ರವಿದ್ದು, ರ್ಜನ್ಯಕ್ಕೊಳಗಾದ ಮಹಿಳೆಯರು ಈ ಕೇಂದ್ರದಿಂದ ಉಚಿತವಾಗಿ ಕಾನೂನು ಸಲಹೆ ಪಡೆಯಬಹುದಾಗಿದೆ ಎಂದರು.
ಜೀವನ ಸುಖಮಯ: ಕುಟುಂಬಗಳಲ್ಲಿ ಸಂಭವಿಸುವ ಸಣ್ಣ-ಪುಟ್ಟ ಜಗಳ, ಮನಸ್ತಾಪಗಳನ್ನು ಗಂಡ-ಹೆಂಡತಿ ಯರಿಬ್ಬರು ಸಮಾಧಾನವಾಗಿ ಚರ್ಚಿಸಿ ಬಗೆಹರಿಸಿ ಕೊಳ್ಳಬೇಕೇ ಹೊರತು, ಪೊಲೀಸು ದೂರು ದಾಖಲಿಸ ಬಾರದು. ಯಾರೇ ಆಗಲಿ ಹೊಂದಿಕೊಂಡು ಹೋದಲ್ಲಿ ಜೀವನ ಸುಖಮಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಪೂಜನೀಯ ಸ್ಥಾನ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ್ ಮಾತನಾಡಿ, ಭಾರತವು ಪುರುಷ ಪ್ರಧಾನ ದೇಶವಾಗಿದ್ದರೂ, ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಸಾಧಿಸುವ ಛಲ ಪುರುಷರಿಗಿಂತ ಮಹಿಳೆ ಯರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತದೆ. ಯಾವುದೇ ಕ್ಷೇತ್ರದಲ್ಲಾಗಲಿ ಪುರುಷರನ್ನು ಮೀರಿಸುವ ಶಕ್ತಿ ಹೊಂದಿರುವ ಮಹಿಳೆ ದೈಹಿಕ ರಚನೆಯಲ್ಲಿ ಮಾತ್ರ ವ್ಯತ್ಯಾಸ ಹೊಂದಿರುತ್ತಾಳೆ. ಉಳಿದಂತೆ ಬುದ್ಧಿಶಕ್ತಿ, ಕಾರ್ಯಕ್ಷಮತೆ, ಹೋರಾಟ ಗುಣ, ಸಾಧನೆಗಳಲ್ಲಿ ಯಾರಿಗೇನು ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾಳೆ ಎಂದು ತಿಳಿಸಿದರು.
ಹೆಣ್ಣು ಶಿಶು ಹತ್ಯೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ದೇಶದಲ್ಲಿ ಪ್ರತಿ ವರ್ಷ 50 ಲಕ್ಷ ಮಕ್ಕಳು ಹುಟ್ಟುವುದೇ ಇಲ್ಲ. ಭ್ರೂಣಾವಸ್ಥೆಯಲ್ಲಿಯೇ ಹೆಣ್ಣು ಶಿಶುಗಳನ್ನು ಹತ್ಯೆ ಮಾಡಲಾಗುತ್ತಿದೆ. ಹುಟ್ಟುವ ಮೊದಲೇ ಹೆಣ್ಣು ಶೋಷಣೆಗೊಳಗಾಗುವ ಪದ್ಧತಿ ತಡೆಯಲು ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ನುಡಿದರು.
ಮಹಿಳೆಯರು ತನ್ನ ಸಾಧನೆಗಳ ಮೂಲಕ ದೇಶದ ಉನ್ನತ ಸ್ಥಾನವನ್ನಲಂಕರಿಸಿರುವ ಇನ್ಫೋಸಿಸ್ ಸುಧಾ ಮೂರ್ತಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾದರಿಯಾಗಿಟ್ಟು ಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಜನರಿಗೆ ಕಾನೂನು ಅರಿವು, ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಪೌಷ್ಟಿಕ ಆಹಾರ ಸೌಲಭ್ಯ ಪಡೆಯಿರಿ: ಮಕ್ಕಳ ಬೌದ್ಧಿಕಮಟ್ಟ ಶೇ.70ರಷ್ಟು ಬೆಳವಣಿಗೆಯಾಗುವ 0-6 ವರ್ಷದ ಅವಧಿಯಲ್ಲಿ ಪೌಷ್ಟಿಕ ಆಹಾರ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯಿಂದ
ದೊರೆಯುವ ಪೌಷ್ಟಿಕ ಆಹಾರ ಸೌಲಭ್ಯದ ಬಗ್ಗೆ ಪ್ರತಿ ಮನೆಗಳಿಗೆ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತವಾಗಿ ಮತ ಚಲಾಯಿಸುತ್ತೇನೆಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ 1ನೇ ಅಧಿಕ ಸಿವಿಲ್ ನ್ಯಾಯಾಧೀಶೆ ಎಚ್.ಎನ್.ರಹತ್ ಅರ್ಫಾನ್, 5ನೇ ಅಧಿಕ ಸಿವಿಲ್ ನ್ಯಾಯಾಧೀಶೆ ವಿದ್ಯಾಲಕ್ಷ್ಮೀಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಸಿಡಿಪಿಒಗಳಾದ ಆರ್.ಸತ್ಯನಾರಾಯಣ್ ಹಾಗೂ ಎಂ.ಎಸ್. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
ಊಟ ಬಡಿಸಿಲ್ಲವೆಂದು ಕೇಸ್ !
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ದಾಖಲಾದ ಪೊಲೀಸ್ ದೂರು ಪ್ರಕರಣಗಳ ನೊಂದವರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪ್ರಪಂಚದಲ್ಲಿ ಯಾರೂ ಹೆಚ್ಚಲ್ಲ. ಕಡಿಮೆಯೂ ಅಲ್ಲ; ಎಲ್ಲರೂ ಸಮಾನರು. ಪ್ರತಿಯೊಬ್ಬರೂ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿ ನಡೆಯಬೇಕು. ಎಷ್ಟೋ ಕುಟುಂಬಗಳಲ್ಲಿ ಗಂಡನಿಗೆ ಊಟ ಬಡಿಸಿಲ್ಲವೆಂಬ ಸಣ್ಣ ವಿಚಾರಗಳಿಗೂ ಪೊಲೀಸ್ ದೂರುಗಳು ದಾಖಲಾಗುತ್ತಿರುವುದು ಬೇಸರದ ಸಂಗತಿ. ಮಹಿಳೆಯರು ತನ್ನದೇ ಮನೆ, ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದರೆ ಮಾತ್ರ ಕಾನೂನು ಹೋರಾಟಕ್ಕೆ ನಿಲ್ಲಬೇಕು. ಉಳಿದಂತೆ ಹೊಂದಿಕೊಂಡು ಹೋಗುವುದೇ ನಿಜವಾದ ಜೀವನ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ