5 ಕೋಟಿ ರೂ.ಕ್ರಿಯಾ ಯೋಜನೆಗೆ ಸಮ್ಮತಿ
ಕೋರಂಕೊರತೆಯಿಂದ 4 ಸಭೆ ಮುಂದೂಡಿಕೆ
Team Udayavani, Nov 21, 2020, 4:20 PM IST
ತುಮಕೂರು: ಜಿಪಂ ಅಧ್ಯಕ್ಷರ ವಿರುದ್ಧ ಸಿಡಿದೆದ್ದಿದ್ದ ಜಿಪಂ ಸದಸ್ಯರು, ಕೋರಂ ಕೊರತೆಯಿಂದ 4 ಜಿಪಂ ಸಾಮಾನ್ಯ ಸಭೆ ಸಭೆಗಳು ಮುಂದೂಡುತ್ತಲೇ ಬಂದಿದ್ದವು. ಜಿಲ್ಲಾ ಉಸ್ತುವಾರಿ ಸಚಿವರ ಮನವಿ ಮೇರೆಗೆ ಜಿಪಂ ಸದಸ್ಯರು, ಶಾಸಕರು ಶುಕ್ರವಾರ ಜಿಪಂ ಸಾಮಾನ್ಯ ಸಭೆಗೆ ಹಾಜರಾಗಿ ವಾರ್ಷಿಕ ಕ್ರಿಯಾಯೋಜನೆಗೆ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್ನಡಿ 2020-21ನೇ ಸಾಲಿಗಾಗಿ 529.78 ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆನೀಡಲಾಯಿತು. ಲಿಂಕ್ ಡಾಕ್ಯುಮೆಂಟ್ನಡಿ ವಿವಿಧಇಲಾಖಾ ಕಾರ್ಯಕ್ರಮಗಳ 529 ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಯೊಂದಿಗೆ ಜಿಪಂ ಶಾಸನಬದ್ಧ(ಅನಿರ್ಬಂಧಿತ) ಅನುದಾನದಡಿ 6.93ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 8.97ಕೋಟಿ ರೂ.ಗಳ ಕ್ರಿಯಾ ಯೋಜನೆ ಅನುಮೋದನೆಗೆ ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಅನುಮೋದಿಸಿದ ಲಿಂಕ್ ಡಾಕ್ಯುಮೆಂಟ್ನ ವಾರ್ಷಿಕ ಕ್ರಿಯಾ ಯೋಜನೆಯಡಿ ನಿಗದಿಪಡಿಸಲಾದ 529 ಕೋಟಿ ರೂ.ಗಳನ್ನು ಲೋಕೋಪಯೋಗಿ(ಪಂಚಾಯತ್ ರಾಜ್)ಗೆ 666ಲಕ್ಷ ರೂ., ಅಕ್ಷರದಾಸೋಹಕ್ಕಾಗಿ 8660ಲಕ್ಷ, ಸಾಮಾನ್ಯ ಶಿಕ್ಷಣಕ್ಕಾಗಿ 18275ಲಕ್ಷ, ಕ್ರೀಡಾ ಮತ್ತು ಯುವಜನ ಸೇವೆಗಾಗಿ 138ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯಕ್ಕಾಗಿ 5902ಲಕ್ಷ, ಕಲೆ ಮತ್ತು ಸಂಸ್ಕೃತಿಗಾಗಿ 5ಲಕ್ಷ, ಕುಟುಂಬಕಲ್ಯಾಣ-3288ಲಕ್ಷ, ಆಯುಷ್-545ಲಕ್ಷ, ಪರಿಶಿಷ್ಟ ಜಾತಿ ಕಲ್ಯಾಣ-3145ಲಕ್ಷ, ಪರಿಶಿಷ್ಟ ಪಂಗಡ ಕಲ್ಯಾಣ-1214ಲಕ, ಹಿಂದುಳಿದ ವರ್ಗಗಳ ಕಲ್ಯಾಣ-5587ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ-490 ಲಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-126ಲಕ್ಷ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ-225ಲಕ್ಷ, ಕೃಷಿ-408ಲಕ್ಷ, ಭೂಸಾರ ಮತ್ತು ಜಲ ಸಂರಕ್ಷಣೆ-146ಲಕ್ಷ, ತೋಟಗಾರಿಕೆ-870 ಲಕ್ಷ, ಪಶು ಸಂಗೋಪನೆ-545ಲಕ್ಷ, ಮೀನುಗಾರಿಕೆ-233ಲಕ್ಷ, ಅರಣ್ಯ-959ಲಕ, ಆರ್ ಡಿಪಿಆರ್-440ಲಕ್ಷ, ಸಣ್ಣ ನೀರಾವರಿ-204ಲಕ್ಷ, ರೇಷ್ಮೆ-436ಲಕ್ಷ, ಗ್ರಾಮೀಣಮತ್ತು ಸಣ್ಣ ಕೈಗಾರಿಕೆ-123ಲಕ್ಷ, ಕೈಮಗ್ಗ ಮತ್ತು ಜವಳಿ-66ಲಕ್ಷ ಹಾಗೂ ಮತ್ತಿತರ ಸಾಮಾನ್ಯ ಸೇವೆಗಳಿಗಾಗಿ ವಿನಿಯೋಗಿಸಲಾಗಿದೆ.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಪಂನ 2020-21ನೇ ಸಾಲಿನ ಕ್ರಿಯಾ ಯೋಜನೆಅನುಮೋದನೆಗಾಗಿ ಸಭೆಗೆ ಹಾಜರಾಗಿದ್ದ ಎಲ್ಲಾ ಜಿಪಂಸದಸ್ಯರು, ಶಾಸಕರು, ತಾಪಂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಜಿಪಂನ ವಿವಿಧ ಸ್ಥಾಯಿ ಸಮಿತಿಗಳ ನಡಾವಳಿಗಳಿಗೆ ಅನುಮೋದನೆ ನೀಡಲಾಯಿತು. ನಂತರ ಆರೋಗ್ಯ ಇಲಾಖೆಯಲ್ಲಿ ಸಿಸಿ ಟಿವಿ ಹಾಗೂ ಬಯೋಮೆಟ್ರಿಕ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಚರ್ಚಿಸ ಲಾಯಿತು. ಈ ವೇಳೆ ಸಂಸದರಾದ ಜಿ.ಎಸ್.ಬಸವರಾಜು, ನಾರಾಯಣಸ್ವಾಮಿ, ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಸಿ.ನಾಗೇಶ್, ಜಿಪಂ ಉಪಾಧ್ಯಕ್ಷೆಶಾರದಾ ನರಸಿಂಹಮೂರ್ತಿ, ಶಾಸಕರಾದ ಡಾ.ರಂಗನಾಥ್, ವೆಂಕಟರಮಣಪ್ಪ, ಮಸಾಲಜಯರಾಂ, ಡಾ.ಸಿ.ಎಂ.ರಾಜೇಶ್ಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಜಿಪಂಸದಸ್ಯರು, ತಾಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ನೀವೇ ಒಪ್ಪಿಗೆ ಸೂಚಿಸಿದ್ದೀರಾ : ಜಿಲ್ಲೆ ಆಸ್ಪತ್ರೆಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಮತ್ತು ಸಿಸಿ ಟಿವಿ ಕ್ಯಾಮರಾ ಅಳವಡಿಕೆಯಲ್ಲಿ ಭಾರೀ ಭ್ರಷ್ಟಾಚಾರವಾಗಿದೆ. ಸಭೆಯ ಅನುಮೋದನೆಪಡೆಯದೇ 1.36 ಕೋಟಿ ಅವ್ಯವಹಾರವಾಗಿದೆ. ಇದನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಸಭೆಯಲ್ಲಿ ಹೇಳಿದ್ದೆವು ಆ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಂದು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಡಾ.ನವ್ಯಾಬಾಬು ಕೂಡ ತನ್ನ ಗಮನಕ್ಕೆ ತರದೇ ಈ ರೀತಿ ಅನುಮೋದನೆ ಆಗಿದೆ ಎಂದು ಹೇಳಿದರು. ಸಚಿವರು ಎಲ್ಲರ ಮಾತು ಆಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ನೀವೇ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದೀರಾಇಲ್ಲಿ ದಾಖಲಾಗಿದೆ ನೀವು ವಿರೋಧ ಮಾಡಿರುವುದು ಎಲ್ಲಿ ದಾಖಲಾಗಿದೆ ಎಂದು ಸದಸ್ಯರನ್ನು ಪ್ರಶ್ನಿಸಿದರು. ಅಂದು ಅಧ್ಯಕ್ಷರ ವಿರುದ್ಧ ಬಯೋಮೆಟ್ರಿಕ್, ಸಿಸಿಟಿವಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೆಚ್ಚು ಆರೋಪಿಸಿದ್ದ ಕಾಂಗ್ರೆಸ್ ಸದಸ್ಯರು ಈ ಸಭೆಯಲ್ಲಿ ಅಧ್ಯಕ್ಷರ ರಕ್ಷಣೆಗೆ ನಿಂತಂತೆ ಕಂಡು ಬಂದಿತು.