13 ಗಂಟೆ ಅಖಂಡ ಭಜನಾ ಸೇವೆ
Team Udayavani, Sep 21, 2017, 2:07 PM IST
ಕುಂದಾಪುರ : ಸಾಮಾನ್ಯವಾಗಿ ಕೆಲವು ಗಂಟೆಗಳಿಗೆ ಸೀಮಿತವಾಗಿರುವ ಭಜನೆ ಸೇವೆಯನ್ನು ಅಖಂಡ 13 ಗಂಟೆಗಳ ಕಾಲ ಮಾಡುವ ಮೂಲಕ ಇಲ್ಲೊಬ್ಬರು ದಾಖಲೆ ಬರೆದಿದ್ದಾರೆ.
ಗಂಗೊಳ್ಳಿಯ ಡಾ| ಕಾಶೀನಾಥ ಪಿ. ಪೈ ಅವರು ಈ ಸಾಧನೆ ಮಾಡಿದವರು. ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುತ್ತಿರುವ ಶ್ರೀ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮೀಜಿ ಅವರ ಚಾತುರ್ಮಾಸ ವ್ರತದಲ್ಲಿ ಡಾ| ಪೈ ಅವರು ಬೆಳಗ್ಗೆ 8ರಿಂದ ರಾತ್ರಿ 9 ಗಂಟೆ ವರೆಗೆ ತಮ್ಮ ಅಖಂಡ ಭಜನಾ ಸೇವೆ ಸಮರ್ಪಿಸಿದ್ದಾರೆ. ಕನ್ನಡ, ಮರಾಠಿ, ಹಿಂದಿ ಮತ್ತು ಕೊಂಕಣಿ ಭಜನೆಗಳನ್ನು ನಿರಂತರವಾಗಿ ಹಾಡಿ ಪ್ರಶಂಸೆಗೆ ಪಾತ್ರರಾದರು.
ಡಾ| ಪೈ ಅವರಿಗೆ ಹಾರ್ಮೋನಿಯಂನಲ್ಲಿ ಉಡುಪಿ ಪ್ರಸಾದ್, ನಗರ ಸದಾಶಿವ ನಾಯಕ್, ಹಾಲಾಡಿ ಕೃಷ್ಣ ಕಾಮತ್, ಕೆ. ರಾಮಕೃಷ್ಣ ಕಿಣಿ, ಮಟ್ಟಾರು ಸತೀಶ ಕಿಣಿ ಸಹಕರಿಸಿದರು. ತಬಲಾದಲ್ಲಿ ಉಡುಪಿಯ ಗುರುದತ್ತ ನಾಯಕ್, ಕೆ. ಶ್ರೀನಿವಾಸ ಮಲ್ಯ, ದೇವಧರ ಕಿಣಿ, ವೇದಮೂರ್ತಿ ಕೆ. ಜಯದೇವ ಭಟ್ ಮತ್ತು ಕೆ. ರೂಪೇಶ ನಾಯಕ್ ಸಹಕರಿಸಿದರು.
ಭಜನೆಯ ಸಾಧಕ ಡಾ| ಪೈ ಅವರನ್ನು ಶ್ರೀ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಈ ಸಂದರ್ಭ ದೇಗುಲದ ಆಡಳಿತ ಮೊಕ್ತೇಸರ ಕೆ. ಅರುಣಾಕ್ಷ ಕಿಣಿ, ಪಾಂಡುರಂಗ ಭಟ್,ವೇದಮೂರ್ತಿ ಕೆ. ಕಾಶೀನಾಥ ಭಟ್, ಮಂಜುನಾಥ ನಾಯಕ್ ಉಪಸ್ಥಿತರಿದ್ದರು.