ದುರಸ್ತಿಗಾಗಿ ಕಾಯುತ್ತಿದೆ ಅಚ್ಚಡ ಶಾಲೆಯ ಮೇಲ್ಛಾವಣಿ
Team Udayavani, May 16, 2019, 6:10 AM IST
ಕಟಪಾಡಿ: ಕನ್ನಡ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದ್ದು, ಅತ್ಯುತ್ತಮ ಶಿಕ್ಷಣವನ್ನೂ ನೀಡುತ್ತಿರುವ ಶಾಲೆಯೊಂದು ಇದೀಗ ದುರಸ್ತಿ ಕಾಮಗಾರಿಗಾಗಿ ಕಾದು ಬಸವಳಿದಿದೆ.
ಕಟಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೂಡಬೆಟ್ಟು ಗ್ರಾಮದ ಏಕೈಕ ಸರಕಾರಿ ಕನ್ನಡ ಮಾಧ್ಯಮ ಶಾಲೆ (ಅಚ್ಚಡ ಶಾಲೆ)ಯಲ್ಲಿ ಮೇಲ್ಛಾವಣಿ ರಿಪೇರಿ ಶಾಲೆ ಶುರುವಾಗುವ ಮುನ್ನ ತುರ್ತಾಗಿ ಆಗಬೇಕಿದೆ.
ತುರ್ತಾಗಿ ಆಗಬೇಕು ದುರಸ್ತಿ
ಸರಕಾರಿ ಗುಡ್ಡೆ ಬಳಿಯ ಅಚ್ಚಡದಲ್ಲಿರುವ ಈ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದೆ. ಶಾಲೆಯ ಮೇಲ್ಛಾವಣಿ ಮಳೆಗಾಲದಲ್ಲಿ ಬೀಳುವಂತಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇದರೊಂದಿಗೆ ಕಿಟಕಿ ಬಾಗಿಲುಗಳು, ಕುಡಿಯುವ ನೀರಿನ ಬಾವಿಯ ದುರಸ್ತಿ ಕಾರ್ಯಗಳೂ ತುರ್ತಾಗಿ ಆಗಬೇಕಿದೆ.
ಅಪಾಯದ ಸೂಚನೆ
ಕಳೆದ 2018ರ ಸಾಲಿನ ಮಳೆಗಾಲದಲ್ಲಿ ಈ ಶಾಲೆಯ ಆವರಣಗೋಡೆಯು ನೆರೆಯ ಹಾವಳಿಯಿಂದ ಕುಸಿದು ಬಿದ್ದು ಸಾಕಷ್ಟು ಹಾನಿ ಸಂಭವಿಸಿತ್ತು. ಇದರೊಂದಿಗೆ ಶೌಚಾಲಯದ ಭಾಗ ಮತ್ತು ಬಾವಿಯ ಒಳಗೂ ಕುಸಿತ ಕಂಡು ಬಂದಿತ್ತು. ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಿಂದ ಈ ಶಾಲೆಯ ಆವರಣ ಗೋಡೆಯು ಮತ್ತೆ ಎದ್ದು ನಿಂತಿದೆ. ಆದರೆ ಬಾವಿ ದುರಸ್ತಿ ಕಂಡಿಲ್ಲ. ಅಪಾಯದ ಸೂಚನೆಯನ್ನು ನೀಡುತ್ತಿದೆ.
ಮನವಿಗೆ ಪ್ರತಿಕ್ರಿಯೆಯಿಲ್ಲ
ಇವೆಲ್ಲದರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಲಾ ಭೌತಿಕ ಅವಶ್ಯಕತೆಗಳನ್ನು ಪೂರೈಸಬೇಕೆಂದು ಮನವಿಯನ್ನು ಗ್ರಾ.ಪಂ., ಕಾಪು ಶಾಸಕರಿಗೆ, ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದರು. ಆದರೆ ವರ್ಷ ಕಳೆದರೂ ಈ ಬಗ್ಗೆ ಯಾವುದೇ ಪ್ರಗತಿ ಕಂಡಿಲ್ಲ. ಶಾಲೆಯ ಒಳರಂಗಮಂಟಪವನ್ನು ಒಳಗೊಂಡಿರುವ ಐದು ತರಗತಿ ಕೋಣೆಗಳ ದೊಡ್ಡ ಕಟ್ಟಡದ ಶಿಥಿಲಗೊಂಡಿರುವ ಮೇಲ್ಛಾವಣಿ ನವೀಕರಣವೂ ಆಗಿಲ್ಲ. ದುರಸ್ತಿಯನ್ನೂ ಕಂಡಿಲ್ಲ. ಒಂದು ತರಗತಿ ಕೋಣೆಯ ನೆಲ ಮತ್ತು ಗೋಡೆಗೆ ಸಿಮೆಂಟ್ ಗಾರೆಯೂ ಕಂಡಿಲ್ಲ. ಹುಡುಗರ ಶೌಚಾಲಯ ದುರಸ್ತಿಗಾಗಿ ಕಾಯುತ್ತಿದೆ.
ಕುಡಿಯುವ ನೀರಿನ ಬಾವಿಯ ಒಳಗಡೆ ಕುಸಿದಿರುವ ಕಲ್ಲುಗಳ ಮರು ಜೋಡಣೆ ಹಾಗೂ ಹೂಳು ತೆಗೆಯಲು ಕಾಯುತ್ತಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
ಸರಕಾರದಿಂದ ಈ ಬಗ್ಗೆ ಅನುದಾನ ತಾಲೂಕು ಪಂಚಾಯತ್ಗೆ ಬಂದಿಲ್ಲ. ಶಾಲಾ ದುರಸ್ತಿಗೆ ಬರುವ ಅನುದಾನವನ್ನು ಪ್ರಥಮ ಪ್ರಾಶಸ್ತÂದ ಮೇರೆಗೆ ಈ ಶಾಲೆಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇತರೇ ಬೇಡಿಕೆಗಳ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಲೆಗೆ ಭೇಟಿ ನೀಡಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ.
-ಮಂಜುಳಾ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ, ಉಡುಪಿ
ಮನವಿ ಮಾಡಿಕೊಳ್ಳಲಾಗಿದೆ
ಶಾಲಾ ದೊಡ್ಡ ಕಟ್ಟಡದ ದುರಸ್ತಿ,ನವೀಕರಣಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯತ್, ಕ್ಷೇತ್ರದ ಶಾಸಕರಲ್ಲಿ ಮನವಿಯನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸ್ಪಂದಿಸುವ ಭರವಸೆ ಇದೆ.
-ಶಕುಂತಳಾದೇವಿ, ಮುಖ್ಯೋಪಾಧ್ಯಾಯಿನಿ, ಅಚ್ಚಡ ಶಾಲೆ
ವಿಜಯ ಆಚಾರ್ಯ, ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?