ಉಡುಪಿಯ “ಮೈನ್’ ಶಾಲೆಗೆ ಶಾಶ್ವತ ಬೀಗ
Team Udayavani, Aug 2, 2017, 8:10 AM IST
ಉಡುಪಿ: 132 ವರ್ಷಗಳ ಇತಿಹಾಸವಿರುವ, ಪೇಜಾವರ ಶ್ರೀಗಳಂತಹ ಮಹನೀಯರು ವಿದ್ಯಾರ್ಜನೆ ಮಾಡಿರುವ, ಸಾವಿರಾರು ಮಂದಿ ವಿದ್ಯಾರ್ಥಿಗಳ ಬದುಕು ರೂಪಿಸಲು ನೆರವಾದ “ಮೈನ್ ಶಾಲೆ’ ಎಂದೇ ಜನಜನಿತವಾದ ಮಹಾತ್ಮಾ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಅಧಿಕೃತ ಬೀಗಮುದ್ರೆ ಬಿದ್ದಿದೆ.
ಹೌದು ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು 1885ರಲ್ಲಿ ತನ್ನದೇ ಜಾಗದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟಿದ್ದ ಈ ಶಾಲೆಯನ್ನು ಮುಚ್ಚಿ ಮಕ್ಕಳನ್ನು ಪಕ್ಕದ ನಾರ್ತ್ ಶಾಲೆಗೆ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ) ವರ್ಗಾಯಿಸಲಾಗಿದೆ. ಶಾಲಾ ಕಟ್ಟಡ ದುರ್ಬಲಗೊಂಡಿರುವ ಹಿನ್ನೆಲೆ ಹಾಗೂ ಹಳೆ ಕಾಲದ ಮಣ್ಣಿನ ಗೋಡೆಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಕಲಿಯುತಿದ್ದ 50 ಮಕ್ಕಳು, ನಾಲ್ವರು ಶಿಕ್ಷಕರೊಂದಿಗೆ ಕಾರ್ಪೋರೇಷನ್ ಬ್ಯಾಂಕ್ ಬಳಿಯ ನಾರ್ತ್ ಶಾಲೆಗೆ ಶನಿವಾರ ವರ್ಗಾಯಿಸಲಾಗಿದೆ. ಸೋಮವಾರದಿಂದ ನಾರ್ತ್ ಶಾಲೆಯಲ್ಲಿ ಇವರೆಲ್ಲರಿಗೆ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಜು. 16 ರಂದು ಭಾರೀ ಮಳೆಗೆ ಶಾಲೆಗೆ ತಾಗಿಕೊಂಡಿರುವ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇದ್ದ ಕಟ್ಟಡದ ಗೋಡೆ ಕುಸಿದುಬಿದ್ದ ಕಾರಣ ಈ ಶಾಲಾ ಕಟ್ಟಡದ ಬಗ್ಗೆಯೂ ಆತಂಕ ಎದುರಾಗಿತ್ತು. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಕ್ಕಳು ಹಾಗೂ ಶಿಕ್ಷಕರನ್ನು ಕೂಡಲೇ ನಾರ್ತ್ ಶಾಲೆಗೆ ವರ್ಗಾಯಿಸುವಂತೆ ಸೂಚಿಸಿದರೆನ್ನಲಾಗಿದೆ.
ನಾರ್ತ್ ಶಾಲೆಯಲ್ಲಿ ಈಗ 63 ವಿದ್ಯಾರ್ಥಿಗಳಿದ್ದು, ಮೈನ್ನ 50 ಮಕ್ಕಳು ಸೇರಿ ಒಟ್ಟು ಮಕ್ಕಳ ಸಂಖ್ಯೆ 113ಕ್ಕೇರಿದೆ. ಇಲ್ಲಿ ಮೂವರು ಶಿಕ್ಷಕರಿದ್ದು, ಅಲ್ಲಿನ ನಾಲ್ವರು ಸೇರಿ ಶಿಕ್ಷಕರ ಸಂಖ್ಯೆ ಏಳಕ್ಕೇರಲಿದೆ. ಆರ್ಟಿಇ ಪ್ರಕಾರ 113 ಮಂದಿ ಮಕ್ಕಳಿಗೆ ಐವರು ಶಿಕ್ಷಕರಿಗೆ ಮಾತ್ರ ಅವಕಾಶವಿದ್ದು, ಉಳಿದ ಇಬ್ಬರು ಹೆಚ್ಚುವರಿಯಿದ್ದು, ಅವರನ್ನು ಎಲ್ಲಿ ಆವಶ್ಯಕತೆ ಇದೆಯೋ ಅಲ್ಲಿಗೆ ವರ್ಗಾಯಿಸಲಾಗುವುದು ಅವರನ್ನು ಎಲ್ಲಿಗೆ ವರ್ಗಾಯಿಸ ಬೇಕೆಂಬುದರ ಕುರಿತು ಮುಂದೆ ನಿರ್ಧರಿಸಲಾಗುವುದು ಎಂದು ಉಡುಪಿಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯ್ಕ ಹೇಳಿದರು.
ನಾರ್ತ್ ಶಾಲೆಯಲ್ಲಿ ಮಕ್ಕಳಿಗೆ ಬೇಕಷ್ಟು ಸ್ಥಳಾವಕಾಶವಿದೆ. ಅವರ ದಾಖಲೆಗಳು, ಅಕ್ಷರ ದಾಸೋಹವೂ ಇಲ್ಲಿಗೆ ಬಂದಿದೆ. ಎಲ್ಲರಿಗೂ ಇಲ್ಲಿಯೇ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಮೈನ್ ಶಾಲೆಯ ಅಂಗನವಾಡಿ ಈಗಲೂ ಅಲ್ಲೇ ಇದೆ. ಅದಲ್ಲದೇ ಅಲ್ಲಿ ಉಡುಪಿ ವಿಭಾಗದ ಮಕ್ಕಳಿಗೆ ನೀಡುವ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಇತರ ವಸ್ತುಗಳ ಗೋಡೌನ್ ಅಲ್ಲಿಯೇ ಮುಂದುವರಿಯಲಿದೆ. ಈ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿದ ಬಳಿಕ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರ
ಶಾಲೆಯ ಒಂದು ಬದಿಯ ಗೊಡೆ ಬೀಳುವ ಆತಂಕದಲ್ಲಿದ್ದುದರಿಂದ ಹಾಗೂ ಶಾಲೆಯ ಮೇಲ್ಛಾವಣಿ ಕೂಡ ಕುಸಿದು ಬೀಳುವ ಅಪಾಯವಿದ್ದುದರಿಂದ ಜಿಲ್ಲಾಧಿಕಾರಿಯ ಸೂಚನೆಯಂತೆ ಸುರಕ್ಷತೆ ದೃಷ್ಟಿಯಿಂದ ಸೋಮವಾರದಿಂದ ಶಾಲೆಯ ಎಲ್ಲ 50 ವಿದ್ಯಾರ್ಥಿಗಳನ್ನು ನಾರ್ತ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅವರೆಲ್ಲರಿಗೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ನಾಲ್ವರು ಶಿಕ್ಷಕಿಯರಿಗೂ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಪ್ರಭಾರ ಉಪ ನಿರ್ದೇಶಕ ಶೇಖರ್ ಕುಲಾಲ್ ಹೇಳಿದರು. ರಾಜ್ಯಾದ್ಯಂತ ಕನ್ನಡ ಶಾಲೆಗಳಿಗೆ ಕಂಡುಬಂದ ವಿದ್ಯಾರ್ಥಿಗಳ ಕೊರತೆ ಈ ಶಾಲೆಗೂ ಕಾಡಿತ್ತು. ಆದರೆ ಶಾಲೆಯ ಹಳೆ ವಿದ್ಯಾರ್ಥಿಗಳ ಹಾಗೂ ಸ್ಥಳೀಯರ ಸತತ ಪ್ರಯತ್ನದಿಂದ 1 ರಿಂದ 7ನೇ ತರಗತಿಯವರೆಗೆ 60 ರಿಂದ 70 ಮಕ್ಕಳು ಕಲಿಯುವಂತೆ ನೋಡಿಕೊಳ್ಳಲಾಗಿತ್ತು. ಇಲ್ಲಿ ಕಲಿಯುವವರು ಹೆಚ್ಚಿನವರು ವಲಸೆ ಕಾರ್ಮಿಕರ ಮಕ್ಕಳೆಂಬುದು ವಿಶೇಷ. ವಲಸೆ ಕಾರ್ಮಿಕರು ಉಡುಪಿಯಲ್ಲಿ ಇಲ್ಲದಿರುತ್ತಿದ್ದರೆ ಈ ಶಾಲೆ ಯಾವತ್ತೋ ಬಾಗಿಲು ಮುಚ್ಚಿರುತ್ತಿತ್ತು. ಈ ಶಾಲೆ ಶಾಶ್ವತವಾಗಿ ಮುಚ್ಚಿ ಹೋಗಲು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಇಲಾಖೆ ಎಲ್ಲ ಮೂಲಭೂತ ಸೌಕರ್ಯಗಳಿದ್ದರೂ, ಕೇವಲ ದುರಸ್ತಿ ಮಾಡುವ ನೆಪ ನೀಡಿ ಶಾಲೆಯನ್ನೇ ಮುಚ್ಚಲು ಹೊರಟಿರುವುದು ದುರಂತವೇ ಸರಿ.
ಶಾಲೆಗೆ ಬಂದ ಹಣ ಬಿಇಒ ಕಚೇರಿಗೆ
ಕೆಲ ವರ್ಷಗಳ ಹಿಂದೆ ಈ ಶಾಲೆಯ ದುರಸ್ತಿಗೆಂದು ಸರ್ವ ಶಿಕ್ಷಣ ಅಭಿಯಾನದಡಿ ಹಣ ಬಿಡುಗಡೆಯಾಗಿತ್ತು. ಆದರೆ ಆಗ ಉಡುಪಿ ಬಿಇಒ ಆಗಿದ್ದವರೊಬ್ಬರು ಅದನ್ನು ಶಾಲೆಗೆ ನೀಡದೆ ಬಿಇಒ ಕಚೇರಿಗೆಯೇ ಆ ಹಣವನ್ನು ಬಳಕೆ ಮಾಡಿದ್ದರು. ಅದಲ್ಲದೆ ಅಲ್ಲಿನ ಶಿಕ್ಷಕರು ಹಲವು ಬಾರಿ ದುರಸ್ತಿಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಸಣ್ಣ – ಸಣ್ಣ ದುರಸ್ತಿ ಮಾತ್ರ ನಡೆದಿತ್ತು. ಕುಸಿದು ಬೀಳುವ ಅಪಾಯವಿದ್ದರೂ ದೊಡ್ಡ ಮಟ್ಟದ ದುರಸ್ತಿ ಈವರೆಗೆ ನಡೆದಿಲ್ಲ. ಶಾಲೆ ಶಾಶ್ವತವಾಗಿ ಮುಚ್ಚಲು ಶಿಕ್ಷಣ ಇಲಾಖೆಯ ನಿರ್ಲRಕ್ಷ್ಯವೇ ಕಾರಣ. ಮುಚ್ಚುವಷ್ಟೇನೂ ಶಾಲೆಯ ಪರಿಸ್ಥಿತಿ ಹದಗೆಟ್ಟಿರಲಿಲ್ಲ. ದುರಸ್ತಿಗೆ ಮನಸ್ಸು ಮಾಡಿದ್ದರೆ ಸಾಕಿತ್ತು ಎನ್ನುವುದು ನಿವೃತ್ತ ಶಿಕ್ಷಕರೋರ್ವರ ಅಭಿಪ್ರಾಯ.
ಪೇಜಾವರ ಶ್ರೀಗಳು ಓದಿದ ಶಾಲೆ
ವಿಶೇಷವೆಂದರೆ ಪರ್ಯಾಯ ಶ್ರಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅವರ 6-7 ನೇ ವಯಸ್ಸಿನಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 8ನೇ ವರ್ಷಕ್ಕೆ ಆಶ್ರಮಕ್ಕೆ ಸೇರುವ ಮುನ್ನ ಕೇವಲ 2 ವರ್ಷದಲ್ಲಿ ರಾಮಕುಂಜದ ಸಂಸ್ಕೃತ ಹಿ. ಪ್ರಾ. ಶಾಲೆ, ಕಾಣಿಯೂರು ಶಾಲೆ, ರಾಮಕುಂಜದ ನೂರಂಕಿ ಶಾಲೆ ಹಾಗೂ ನಗರಸಭೆ ಎದುರಿರುವ ಈ ಗಾಂಧಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.
ಶಿಕ್ಷಣ ಇಲಾಖೆಗೆ ಬಳಕೆ : ಡಿಸಿ
ಕುಸಿದು ಬೀಳುವ ಆತಂಕದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕಾಯಿತು. ಅದರ ಜತೆಗೆ ಮಕ್ಕಳಿಗೆ ಮುಖ್ಯವಾಗಿ ಆಟವಾಡಲು ಬೇಕಾದ ಮೈದಾನವಿರಲಿಲ್ಲ. ನಾರ್ತ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಟ್ಟಡವನ್ನು ದುರಸ್ತಿ ಮಾಡಿ ಶಾಲೆಯಾಗಿ ಬಳಕೆ ಮಾಡದಿದ್ದರೂ, ಶಿಕ್ಷಣ ಇಲಾಖೆಯ ಕಾರ್ಯಕ್ಕೆ ಬಳಸಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ