ಮಕ್ಕಳೊಂದಿಗೆ ಸಂವಾದದಲ್ಲಿ ಯೋಧ ಸಂತೋಷ್ ಹೇಳಿಕೆ
370ನೇ ವಿಧಿ ರದ್ದತಿ ಬಳಿಕ ಕಲ್ಲೆಸೆತ ನಿಲುಗಡೆ
Team Udayavani, Feb 11, 2020, 6:00 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಅನಂತರ ಸೈನಿಕರ ಮೇಲೆ ಜನರು ಕಲ್ಲೆಸೆಯುವುದು ಸಂಪೂರ್ಣ ನಿಂತಿದೆ. ಸೈನಿಕರಿಗೆ ಸರಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವುದರಿಂದ ಜನರು ಸೈನಿಕರಿಗೆ ಪ್ರತಿರೋಧ ಒಡ್ಡುವುದನ್ನು ಬಿಟ್ಟಿದ್ದಾರೆ ಎಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಸೇನಾ ಕಮಾಂಡರ್, ಮೂಲತಃ ವಿಜಯಪುರದ ಸಂತೋಷ್ ಹೇಳಿದರು.
ರಜೆಯ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಆಗಮಿಸಿದ್ದ ಅವರು ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಿಎಎ, ಎನ್ಪಿಆರ್ ಅನಿವಾರ್ಯ ಪ್ರಪಂಚದ ಬಹುತೇಕ ರಾಷ್ಟ್ರಗಳು ಸಿಎಎ, ಎನ್ಪಿಆರ್ನಂತಹ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೆ ತಂದಿವೆ. ಭಾರತದಲ್ಲಿ ಮಾತ್ರ ಇದು ಜಾರಿ ಇರಲಿಲ್ಲ. ಪ್ರಸ್ತುತ ಕೇಂದ್ರ ಸರಕಾರ ಇದನ್ನು ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯ ಕೆಲಸ. ಇದು ಆಗಲೇ ಬೇಕು. ಪ್ರತಿಯೊಂದು ದೇಶವೂ ಅಕ್ರಮ ನುಸುಳುಕೋರರನ್ನು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸದೆ ಹೋದಲ್ಲಿ ಆ ದೇಶಕ್ಕೆ ಉಳಿಗಾಲವಿಲ್ಲ. ಜನರಿಗೆ ನೆಮ್ಮದಿಯಿಂದ ಜೀವನ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಈ ಕಾನೂನು ಬರಲೇಬೇಕಿತ್ತು ಎಂದರು.
ಸೇನೆಗೆ ಸೇರ್ಪಡೆ ಸುಲಭ ಸಾಧ್ಯ
ಯುವಕರು ಸೇನೆಗೆ ಸೇರ್ಪಡೆಗೊಳ್ಳುವುದು ಈಗ ಹಿಂದಿಗಿಂತ ಸರಳ ಮತ್ತು ಸುಲಭವಾಗಿದೆ. ಸೇನೆ ಸೇರ್ಪಡೆಯ ಪ್ರತಿ ಮಾಹಿತಿಗಳನ್ನು ಆನ್ಲೈನ್ ತಂತ್ರಜ್ಞಾನದಂತಹ ಸುಧಾರಿತ ವ್ಯವಸ್ಥೆಗೆ ಅಳವಡಿಸಲಾಗಿದೆ. ತರಬೇತಿಯೂ ಉತ್ತಮವಾಗಿದ್ದು ಯುವಕರು ಸೇನೆಗೆ ಸೇರ್ಪಡೆಗೊಳ್ಳಲು ಮನಸ್ಸು ಮಾಡಬೇಕು ಎಂದರು.
ಸದ್ಯದಲ್ಲೇ ಯುವತಿಯರೂ ಕಮಾಂಡರ್
ಜಗತ್ತಿನ ಅನ್ಯ ರಾಷ್ಟ್ರಗಳಲ್ಲಿ ಈಗಾಗಲೇ ಸೇನೆಯ ಸೇವೆಗೆ ಯುವತಿಯರನ್ನು ಸೇರ್ಪಡೆಗೊಳಿ ಸಲಾಗು ತ್ತಿದೆ. ಇಸ್ರೇಲ್ ಸೇನೆಯಲ್ಲಿ ಯುವತಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸದ್ಯದಲ್ಲೇ ನಮ್ಮ ಯುವತಿ ಯರು ಸೇನೆಯಲ್ಲಿ ಕಮಾಂಡರ್ಗಳಾಗಿ ಗಡಿ ಕಾಯುವ ಅವಕಾಶ ಸಿಗಲಿಏಆ ಎಂದರು.
ರಾಜ್ಯದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಆದರೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸೇರಿದಂತೆ ಜನಜೀವನ ವ್ಯವಸ್ಥೆ ಇನ್ನೂ ನಿರೀಕ್ಷಿತ ಸುಧಾರಣೆ ಕಾಣದಿರುವುದು ವಿಷಾದನೀಯ. ಹುತಾತ್ಮ ಯೋಧ ಹನುಮಂತಪ್ಪ ಅವರ ಗ್ರಾಮಕ್ಕೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ರಸ್ತೆ, ಶಾಲೆ ಮತ್ತು ಆ ಯೋಧನ ಮನೆಯ ಗಂಭೀರ ಸ್ಥಿತಿ ಕಂಡು ಕಣ್ಣೀರು ಬಂತು ಎಂದರು. ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಸಾಮಾಜಿಕ ಕಾರ್ಯಕರ್ತರಾದ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಪ್ರಶಾಂತ್ ಶೆಟ್ಟಿ ಅಂಜಾರು ಉಪಸ್ಥಿತರಿದ್ದರು.
ಗುಮಾಸ್ತನಿಂದ ಕಮಾಂಡರ್ ತನಕ
ಸೈನಿಕನಾಗಬೇಕೆಂಬ ಹಂಬಲದಿಂದ ಗುಮಾಸ್ತನಾಗಿ ಸೇನೆಗೆ ಸೇರಿಕೊಂಡೆ. ಅನಂತರ ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಮಾಂಡರ್ ಆಗಿ ಭಡ್ತಿ ಪಡೆದ ಅವರು ಸಿಯಾಚಿನ್, ಲಡಾಖ್, ಪೂಂಛ… ಸುಂದರಬನಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಂತಹ ಅತೀ ಕೊರೆಯುವ ಚಳಿ ಇರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಕ್ಷಣಗಳನ್ನು ಎಳೆ ಎಳೆಯಾಗಿ ಮಕ್ಕಳೊಡನೆ ತೆರೆದಿಟ್ಟರು.