ಕ್ಯಾನ್ಸರ್ನಿಂದ ಬಳಲುತ್ತಿರುವ ವಿದ್ಯಾರ್ಥಿ; ನೆರವಿಗಾಗಿ ಮೊರೆಯಿಡುತ್ತಿರುವ ಕುಟುಂಬ
Team Udayavani, Feb 2, 2020, 5:57 AM IST
ಕಾರ್ಕಳ: ಈತ ಮಿಯ್ಯಾರು ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಶಶಿಕುಮಾರ್. ಎಲ್ಲರಂತೆ ಲವಲವಿಕೆಯಿಂದ ಕಾಲೇಜಿನ ಆಟ-ಪಾಠಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಕ.
ಹೀಗಿರುವಾಗ 10 ದಿನಗಳ ಹಿಂದೆ ಈತನಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗಾಗಿ ಡಾಕ್ಟರ್ ಬಳಿ ತೆರಳಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂತು. ಆತನ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿರುವುದು ಕಂಡುಬಂತು. ಕಿಡ್ನಿ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ತಪಾಸಣೆಗೊಳಪಡಿಸಿದಾಗ ಬಾಲಕನಿಗೆ ರಕ್ತದ ಕ್ಯಾನ್ಸರ್ ಖಚಿತವಾಯಿತು. ಮೊದಲೇ ಕಿಡ್ನಿ ವೈಫಲ್ಯ ವಿಚಾರ ತಿಳಿದು ಆಘಾತಕ್ಕೀಡಾದ ಕುಟುಂಬಕ್ಕೆ ಕ್ಯಾನ್ಸರ್ಗೆ ತುತ್ತಾಗಿರುವ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಯಿತು.
ಬಾಲಕನನ್ನು ಬೆಂಗಳೂರಿನ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಡಯಾಲಿಸಿಸ್ ಮಾಡ ಲಾಗುತ್ತಿದ್ದು, ರಕ್ತದ ಕ್ಯಾನ್ಸರ್ಗೂ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ದುಬಾರಿಯಾದ ಪರಿಣಾಮ ಹಣ ಹೊಂದಿಸುವುದು ಕುಟುಂಬಕ್ಕೆ ಭಾರಿ ಕಷ್ಟಕರವಾಗಿದೆ.
ಬಾಲಕನ ಚಿಕಿತ್ಸೆಗಾಗಿ ಸುಮಾರು 8ರಿಂದ 15 ಲಕ್ಷ ರೂ. ಖರ್ಚಾಗಲಿದ್ದು, ಆ ಮೊತ್ತ ಭರಿಸಲು ಕುಟುಂಬ ಶಕ್ತವಾಗಿಲ್ಲ. ಹೀಗಾಗಿ ಸೃದಯ ಬಂಧುಗಳಲ್ಲಿ ನೆರ ವಾಗುವಂತೆ ಅಂಗಲಾಚುತ್ತಿದೆ.
ನೆರವು ನೀಡಲಿಚ್ಚಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆತ್ತೂರುವಿನ 37374599139 ಖಾತೆಗೆ ಪಾವತಿ ಮಾಡಬಹುದಾಗಿದೆ. ಐಎಫ್ಎಸ್ಸಿ ಎಸ್ಬಿಐಎನ್ 0040295. ಮೊ: 8861530896.
ಸಹಕಾರ ಬೇಕು
ನಮ್ಮ ವಿದ್ಯಾರ್ಥಿ ಶಶಿಕುಮಾರ್ ಗುಣಮುಖನಾಗಿ ಮತ್ತೆ ಎಂದಿನಂತೆ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಆತನಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಬೇಕಾಗಿದೆ. ಶಶಿಕುಮಾರ್ ಕುಟುಂಬ ತೀರಾ ಬಡತನದಿಂದ ಕೂಡಿರುವುದರಿಂದ ಆರ್ಥಿಕ ಸಹಕಾರ ಬೇಕಾಗಿದೆ. ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿ ಕುಟುಂಬದ ಕಣ್ಣೀರು ಒರೆಸುವಲ್ಲಿ ಸಹೃದಯ ಬಂಧುಗಳಲ್ಲಿ ಈ ಮೂಲಕ ವಿನಮ್ರವಾಗಿ ವಿನಂತಿಸುತ್ತಿದ್ದೇನೆ.
–ಈಶ್ವರ್ ಎಲ್.,
ಪ್ರಾಂಶುಪಾಲರು,ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು, ಮಿಯ್ಯಾರು