ಚುರುಕುಗೊಂಡ ಬೆಟ್ಟಿಂಗ್ ಭರಾಟೆ!
Team Udayavani, May 23, 2019, 6:20 AM IST
ಉಡುಪಿ: ಹೋದ ವರ್ಷ ನಡೆದ ವಿಧಾನಸಭಾ ಚುನಾವಣೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಂಡು ಬಂದಿದ್ದ ಬೆಟ್ಟಿಂಗ್ ಭರಾಟೆ ಲೋಕಸಭಾ ಚುನಾವಣೆ ನಡೆದ ತತ್ಕ್ಷಣ ಕಂಡುಬಂದಿರಲಿಲ್ಲ. ಆದರೆ ಮತ ಎಣಿಕೆ ಹಿಂದಿನ ಎರಡು ದಿನಗಳಲ್ಲಿ ಇದು ಚುರುಕುಗೊಂಡಿದೆ.
ಹಲವು ವಿಷಯಗಳ ಆಧಾರದಲ್ಲಿ ಬೆಟ್ಟಿಂಗ್
ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೋ? ಇಲ್ಲವೋ?, ಬಿಜೆಪಿಗೆ
272 ಸ್ಥಾನ ಸಿಗುತ್ತದೋ? 272 ಸ್ಥಾನ ಎನ್ಡಿಎಗೆ ಸಿಗುತ್ತದೋ?, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವಿನ ಅಂತರ ಎಷ್ಟಿರುತ್ತದೆ? , ಮೋದಿ ಮತ್ತೂಮ್ಮೆ ಪ್ರಧಾನಿ ಯಾಗುತ್ತಾರೋ? ಇಲ್ಲವೋ?, ಅಮೇಠಿಯಲ್ಲಿ ರಾಹುಲ್ಗಾಂಧಿ ಗೆಲುವು ಸಾಧಿಸುತ್ತಾರೋ? ಇಲ್ಲವೋ?, ಕರ್ನಾಟಕದಲ್ಲಿ ಬಿಜೆಪಿ 20 ಸ್ಥಾನ ಗೆಲ್ಲುತ್ತದೋ? ಇಲ್ಲವೋ? ಇತ್ಯಾದಿ ವಿಷಯಗಳಲ್ಲಿ ಬೆಟ್ಟಿಂಗ್ ನಡೆಯುತ್ತಿದೆ.
ಗಮ್ಮತ್ತಿಗಾಗಿ ಬೆಟ್ಟಿಂಗ್!
ಒಬ್ಬೊಬ್ಬರೇ ಬೆಟ್ಟಿಂಗ್ ಕಟ್ಟುವ ಬದಲು ಸಮೂಹ ಜತೆಗೂಡಿ ಬೆಟ್ಟಿಂಗ್ ಕಟ್ಟುವುದೂ ಇದೆ. ಕರಾವಳಿಯಲ್ಲಿ ಬೆಟ್ಟಿಂಗ್ಕಟ್ಟುವುದು ಹಣ ಮಾಡುವುದಕ್ಕಾಗಿ ಅಲ್ಲ. ಒಂದು ಗಮ್ಮತ್ತಿಗಾಗಿ ಬೆಟ್ಟಿಂಗ್ ಹೂಡುತ್ತಿದ್ದಾರೆ.
ಈ ಮೊತ್ತವನ್ನು ಫಲಿತಾಂಶ ಬಂದ ಬಳಿಕ ವಿಜಯೋತ್ಸವದಲ್ಲಿ ಖರ್ಚು ಮಾಡುತ್ತಾರೆ. ಆದ್ದರಿಂದ ಮೇ 23-24ರಂದು ವಿಜಯೋತ್ಸವದಲ್ಲಿ ಸ್ವಲ್ಪ ಅದ್ದೂರಿಯಾಗುವ ಸಾಧ್ಯತೆ ಇದೆ.
ಈ ಮೊದಲು ಚುನಾವಣೆ ಮುಗಿದ ತತ್ಕ್ಷಣ ಜಿದ್ದಾಜಿದ್ದಿನ ಪೈಪೋಟಿ ಇದ್ದರೆ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಜಾಸ್ತಿ ಇರುತ್ತದೆ.
ಆದರೆ ಇದು ಈ ಬಾರಿ ಆಗಲಿಲ್ಲ. ಮತದಾನವಾಗಿ ಫಲಿತಾಂಶಕ್ಕೆ ಒಂದು ತಿಂಗಳು ಕಾಲ ಕಾಯಬೇಕಾಗಿರುವುದರಿಂದ ಹಣವನ್ನು ಇಟ್ಟು ಒಂದು ತಿಂಗಳು ಕಾಯುವ ವ್ಯವಧಾನ ಇಲ್ಲದಿರುವುದು, ಚುನಾವಣೆಯಲ್ಲಿ ಖರ್ಚು ಮಾಡಿ ಕಿಸೆ ಖಾಲಿಯಾಗಿರುವುದು, ಚುನಾವಣೆ ಖರ್ಚಿಗೆ ಬಂದ ಹಣದಲ್ಲಿ ಉಳಿಸಿ ಕಟ್ಟುವವರಿಗೆ ಹಣ ನಿರೀಕ್ಷಿತ ಮಟ್ಟದಲ್ಲಿ ಬಾರದೆ ಇದ್ದದ್ದೂ ಬೆಟ್ಟಿಂಗ್ ಭರಾಟೆ ತುಸು ಕಡಿಮೆಯಾಗಲು ಕಾರಣವಾಗಿತ್ತು. ಈಗ ಬೆಟ್ಟಿಂಗ್ ಮತ ಎಣಿಕೆ ಸಮೀಪಿಸುತ್ತಿರುವಾಗ ಶುರುವಾಗಿದೆ.