ಟಾಸ್ಕ್ ಪೋರ್ಸ್ ಸಮಿತಿಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ಪರಿಶೀಲನೆ
Team Udayavani, May 26, 2021, 4:50 PM IST
ಶಿರ್ವ: ಕೋವಿಡ್19 ಹರಡದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಬುಧವಾರ ಶಿರ್ವಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊರೊನಾ ವೈರಸ್ ಹರಡದಂತೆ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಟಾಸ್ಕ್ಫೋರ್ಸ್ ಸಮಿತಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಕೊರೊನಾ ನಿಯಂತ್ರಿಸುವಲ್ಲಿ ಪೊಲೀಸ್ ಸಹಕಾರದೊಂದಿಗೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಶಿರ್ವ ಸಂತ ಮೇರಿ ಸರ್ಕಲ್ನಿಂದ ಪೆಟ್ರೋಲ್ ಪಂಪ್ವರೆಗೆ ಅಧಿಕಾರಿಗಳ ತಂಡದೊಂದಿಗೆ ಬಂದ ಅಪರ ಜಿಲ್ಲಾಧಿಕಾರಿಯವರು ಮಾಸ್ಕ್ ಧರಿಸದೆ ವ್ಯವಹಾರ ನಡೆಸಿದ ತರಕಾರಿ ಅಂಗಡಿಗೆ ದಂಡ ವಿಧಿಸುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ಆದೇಶಿಸಿದರು.
ಇದನ್ನೂ ಓದಿ : ಮುಂಬೈ – ದುಬೈ Emirates ವಿಮಾನದಲ್ಲಿ ಒಂಟಿ ಪಯಣಿಗ!!
ಕಾಪು ತಹಶೀಲ್ದಾರ್ಪ್ರತಿಭಾ ಆರ್., ಕಾಪು ಕಂದಾಯ ಪರಿವೀಕ್ಷಕ ಸುಧೀರ್ ಶೆಟ್ಟಿ, ಶಿರ್ವ ಗ್ರಾ. ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್,ಗ್ರಾ.ಪಂ. ಸದಸ್ಯ ರತನ್ ಶೆೆಟ್ಟಿ, ನೋಡಲ್ ಅಧಿಕಾರಿ ಡಾ| ಅರುಣ್ ಕುಮಾರ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಶಿರ್ವ ಗ್ರಾಮ ಕರಣಿಕ ವಿಜಯ್,ಸಹಾಯಕ ಭಾಸ್ಕರ್,ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ :
ಶಿರ್ವಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿಯವರು ಅಲ್ಲಿನ ವೈದ್ಯಾಧಿಕಾರಿ ಡಾ| ಗಾಯತ್ರಿ ಅವರಿಂದ ಕೋವಿಡ್ ಲಸಿಕೆ ಲಭ್ಯತೆ, ವಿತರಣೆ ಮತ್ತು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿ ಡಾ| ಕೃಷ್ಣಮೂರ್ತಿ, ಶಿರ್ವ ಗ್ರಾ.ಪಂ. ಸದಸ್ಯರು, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು,ಆಸ್ಪತ್ರೆಯ ಸ್ವಯಂಸೇವಕರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬಂದಿ, ಉಪಸ್ಥಿತರಿದ್ದರು.