ಸುಧಾರಿತ ಬೀಟ್ವ್ಯವಸ್ಥೆ ಕ್ರಾಂತಿಕಾರಕ ಬದಲಾವಣೆ: ಎಸ್ಪಿ
Team Udayavani, Jul 18, 2017, 3:25 AM IST
ಕುಂದಾಪುರ: ಸಮಾಜದ ಸ್ವಾಸ್ಥ್ಯ ರಕ್ಷಣೆ ಕೇವಲ ಪೊಲೀಸ್ ಇಲಾಖೆ ಒಂದರಿಂದ ಸಾಧ್ಯವಿಲ್ಲ. ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವಿದ್ದಲ್ಲಿ ಶೀಘ್ರ ಸಮಸ್ಯೆಗಳ ಪರಿಹಾರ ಸಾಧ್ಯ. ಈ ಹಿನ್ನೆಲೆಯಲ್ಲಿ ಸರಕಾರ ನೂತನ ಸುಧಾರಿತ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಇದಕ್ಕೆ ಶಾಸನಾತ್ಮಕವಾದ ಮನ್ನಣೆ ಇದೆ ಹಾಗೂ ಇದೊಂದು ಪೊಲೀಸ್ ಇಲಾಖೆಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಹೇಳಿದರು.
ಅವರು ಸೋಮವಾರ ಕುಂದಾಪುರ ತಾ. ಪಂ. ಕಚೇರಿಯಲ್ಲಿ ನಡೆದ ಕುಂದಾಪುರ ವೃತ್ತದ ಸುಧಾರಿತ ಗಸ್ತು ಸಮಿತಿ ಸದಸ್ಯರ ಸಭೆಯನ್ನು ಉದ್ದೇàಶಿಸಿ ಮಾತನಾಡಿದರು.
ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್ ಅವರು ಮಾತನಾಡಿ, ಈ ಸುಧಾರಿತ ಬೀಟ್ ವ್ಯವಸ್ಥೆ
ಯಲ್ಲಿ ಪ್ರತಿಯೊಬ್ಬ ಪೊಲೀಸ್ ಸಿಬಂದಿಯೂ ಪಾಲ್ಗೊಳ್ಳುವುದರಿಂದ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯ. ಈ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ಸಾಕಷ್ಟು ಪ್ರಚಾರ ಮಾಡಲಾಗಿದೆ. ಜನರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಲು, ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಈ ಬೀಟ್ ವ್ಯವಸ್ಥೆ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಬೀಟ್ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬೀಟ್ ಪೊಲೀಸ್ ಅಧಿಕಾರಿಗಳಾದ ಕುಂದಾಪುರ ಠಾಣೆಯ ಜ್ಯೋತಿ, ಕುಂದಾಪುರ ಗ್ರಾಮಾಂತರ ಠಾಣೆಯ ಮಧುಸೂದನ, ಶಂಕರನಾರಾಯಣ ಠಾಣೆಯ ವಿಠಲ. ಅಮಾಸೆಬೈಲು ಠಾಣೆ ವ್ಯಾಪ್ತಿಯ ಶಂಕರ್ ಅನಿಸಿಕೆಗಳನ್ನು ತಿಳಿಸಿದರು. ಬೀಟ್ ಸದಸ್ಯರಾದ ಕುಂದಾಪುರದ ವಿಶ್ವನಾಥ ಶೆಟ್ಟಿ, ಜಿ. ಮಹಮ್ಮದ್, ಭರತ್ ಕಾಮತ್, ಜಾನಕಿ ಬಿಲ್ಲವ ಕೋಟೇಶ್ವರ, ಗಣೇಶ್ ಅವರು ಅನಿಸಿಕೆಗಳನ್ನು ತಿಳಿಸಿದರು.
ಸುಧಾರಿತ ಬೀಟ್ ವ್ಯವಸ್ಥೆಯ ಬಗ್ಗೆ ಪೊಲೀಸ್ ಹಾಗೂ ಸದಸ್ಯರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು. ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.