ಮಲ್ಪೆ ಪಡುಕರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಕೇಂದ್ರ
Team Udayavani, Nov 2, 2017, 8:54 AM IST
ಮಲ್ಪೆ: ಯುವಕರಿಗೆ ಸಾಹಸ ಕ್ರೀಡೆಗಳಲ್ಲಿ ತರಬೇತಿ ನೀಡಿ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಪಡುಕರೆ ಶಾಂತಿನಗರ ಬೀಚ್ನಲ್ಲಿ 2 ಎಕ್ರೆ ಭೂಮಿಯನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಈಗಾಗಲೇ ಹಸ್ತಾಂತರ ಮಾಡಲಾಗಿದ್ದು ಇದನ್ನು ಜೆತ್ನಾ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಮೀನುಗಾರಿಕಾ ಬಂದರು ಸಮೀಪದ ಬ್ರೇಕ್ ವಾಟರ್ ಬಳಿ 53.5 ಲಕ್ಷ ರೂಪಾಯಿ ವೆಚ್ಚದ ಸೀ ವಾಕ್ ವೇ ಸೇರಿದಂತೆ ಒಟ್ಟು 1.12 ಕೋ.ರೂ. ವೆಚ್ಚದ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸ್ವಚ್ಛ, ಸುಂದರ ಬೀಚ್ ಮಲ್ಪೆ ಬೀಚನ್ನು ಪಡುಕರೆ ಭಾಗದ ವರೆಗೆ ವಿಸ್ತರಿಸಿ ಕೊಡವೂರು ಗ್ರಾಮ ಬೀಚ್ಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಹೊಂದಲಾಗಿದೆ. ಪಡುಕರೆ ಶಾಂತಿನಗರ ಬೀಚನ್ನು ಸುಂದರವಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಪಡುಕರೆ ಸೇತುವೆಯಿಂದ ಶಾಂತಿನಗರ ಬೀಚ್ಗೆ ರಸ್ತೆ, ಶೌಚಾಲಯ, ಹಟ್ಗಳ ನಿರ್ಮಾಣಕ್ಕೆ ಸುಮಾರು 75 ಲಕ್ಷ ರೂ. ಬಿಡುಗಡೆಯಾಗಿದ್ದು ಆ ಕೆಲಸ ಶೀಘ್ರದಲ್ಲಿ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಕೊಡವೂರು ಗ್ರಾಮದ ಎಲ್ಲ ಬೀಚ್ಗಳು ಭಾರತ ದೇಶದಲ್ಲೇ ಅತ್ಯಂತ ಸ್ವತ್ಛ, ಸುಂದರ ಬೀಚ್ ಅಗಿ ರೂಪುಗೊಳ್ಳಲಿವೆ. ಜನರ ಆಕರ್ಷಣೆಯ ಕೇಂದ್ರ ಆಗಲಿದೆ ಎಂದವರು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯರಾದ ವಿಜಯ ಕುಂದರ್, ನಾರಾಯಣ ಪಿ. ಕುಂದರ್, ಗಣೇಶ ನೆರ್ಗಿ, ಮಲ್ಪೆ ಬೀಚ್ ಅಭಿವೃದ್ಧಿ ನಿರ್ವಾಹಕ ಸುದೇಶ್ ಶೆಟ್ಟಿ ರಾಜರಾಜೇಶ್ವರಿ ಟೂರಿಸ್ಟ್ ಬೋಟ್ ಮಾಲಕ ಗಣೇಶ್ ಅಮೀನ್ ಬಾಪುತೋಟ, ಸದಾನಂದ ಅಮೀನ್, ಉಡುಪಿ ನಗರಸಭೆಯ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.
ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣ
ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ 53.5 ಲ. ರೂ. ಸೀ ವಾಕ್ವೆà ಸೇರಿದಂತೆ ಸೈಂಟ್ಮೇರಿಸ್ ದ್ವೀಪದಲ್ಲಿ ಲಸೌಕರ್ಯಗಳ ಅಭಿವೃದ್ಧಿಗೆ 13 ಲ.ರೂ., ಪ್ರವಾಸಿ ಜೆಟ್ಟಿ ಆವರಣಗೋಡೆ ನಿರ್ಮಾಣಕ್ಕೆ 12.5 ಲ.ರೂ., ಮಲ್ಪೆ ಬೀಚ್ನ ಪ್ರವೇಶ ದ್ವಾರದಿಂದ ಗಾಂಧಿ ಪ್ರತಿಮೆ ವರೆಗೆ ಲೋಹದ ದಾರಿದೀಪ ಕಂಬ ಆಳವಡಿಕೆಗೆ 17 ಲ.ರೂ., ಬೀಚ್ನಲ್ಲಿ ಹಟ್ಗಳ ದುರಸ್ತಿ ಕಾಮಗಾರಿಗೆ 5 ಲ.ರೂ., ಬೀಚ್ ಸ್ವತ್ಛತೆ ಯಂತ್ರ ಇಡುವ ಶೆಡ್ ನಿರ್ಮಾಣಕ್ಕೆ 7 ಲಕ್ಷ ರೂ., ಗ್ರಾನೈಟ್ ಆಸನಗಳ ನಿರ್ಮಾಣ 2.7 ಲ.ರೂ., ಅಭಿವೃದ್ಧಿ ಸಮಿತಿಯ ಕ್ಯೂಬಿಕಲ್ ಮಾದರಿಯ ಕಚೇರಿ ನಿರ್ಮಾಣ 2 ಲ.ರೂ. ಒದಗಿಸಲಾಗುವುದು. ಈ ಎಲ್ಲ ಕಾಮಗಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.