ನೇಷನ್ ಫಸ್ಟ್ ತಂಡದಿಂದ ನಾಗಸಂಪಿಗೆ ಭತ್ತದ ತಳಿಯ ನೇಜಿ ನಾಟಿ
Team Udayavani, Jun 21, 2021, 8:08 AM IST
ಕಟಪಾಡಿ: ಟೀಂ ನೇಷನ್ ಫಸ್ಟ್ ತಂಡವು (ಎಕ್ಸ್ ಕೆಡೆಟ್ ಟೀಂ) ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಪ್ರದೇಶದಲ್ಲಿ ಮಾಜಿ ಅಧ್ಯಕ್ಷೆ ಸಾಧನಾ ದೇಜಪ್ಪ ಕೋಟ್ಯಾನ್ ಎಂಬವರ ಗದ್ದೆಯಲ್ಲಿ ಭತ್ತದ ಸಸಿಯನ್ನು ಜೂ.20ರಂದು ನೆಟ್ಟು ಸಂತೃಪ್ತಿ ವ್ಯಕ್ತಪಡಿಸಿದರು.
ಎನ್.ಸಿ.ಸಿ. ಎಕ್ಸ್ ಕೆಡೆಟ್ಸ್ ಮತ್ತು ಪ್ರಸ್ತುತ ಕೆಡೆಟ್ ಗಳನ್ನೊಳಗೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಯುವ ಪಡೆಯನ್ನೇ ಹೊಂದಿದ್ದ ಈ ತಂಡವು ಉಳುಮೆ ಪೂರೈಸಿ ನಾಟಿ ಮಾಡಲು ಸಮತಟ್ಟುಗೊಳಿಸಿದ ಗದ್ದೆಯಲ್ಲಿ ಸಾಲು ನಾಟಿ ಪದ್ಧತಿಯನ್ನು ಅನುಸರಿಸಿಕೊಂಡು ಭತ್ತದ ಸಸಿಯ (ನೇಜಿ) ನಾಟಿಯನ್ನು ಯಶಸ್ವಿಯಾಗಿ ನಡೆಸಿದರು.
ಸುಮಾರು 24 ದಿನಗಳ ನಾಗಸಂಪಿಗೆ ಭತ್ತದ ತಳಿಯ ನೇಜಿಯನ್ನು ನಾಟಿ ಪೂರೈಸಿದ ತಂಡದಲ್ಲಿ ಸುಮಾರು 40 ಕ್ಕೂ ಅಧಿಕ ಮಂದಿಯು ಭಾಗವಹಿಸಿದ್ದರು.
ಇದನ್ನೂ ಓದಿ:ಪೊಲಿಪು, ಮೂಳೂರು ಕಡಲ್ಕೊರೆತ : ಶಾಸಕ ಲಾಲಾಜಿ ಮೆಂಡನ್ ವೀಕ್ಷಣೆ
ಕೃಷಿಯಿಂದ ವಿಮುಕ್ತರಾಗಿರುವ ರೈತರನ್ನು ಮರಳಿ ಕೃಷಿಯತ್ತ ಆಕರ್ಷಿಸುವಂತೆ ಪ್ರೋತ್ಸಾಹಿಸುವುದು ಮತ್ತು ಯುವ ಜನರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಸುಮಾರು 300 ರಷ್ಟು ಸದಸ್ಯರನ್ನೊಳಗೊಂಡ ಈ ತಂಡವು ಉಡುಪಿಯ ವಿವಿಧ ಪ್ರದೇಶದಲ್ಲಿ ಸುಮಾರು 16 ಎಕರೆ ಹಡಿಲು ಬಿದ್ದ ಗದ್ದೆಯನ್ನು ಈ ವರ್ಷ ನಾಟಿ ಮಾಡುತ್ತಿದೆ.
ನೇಷನ್ ಫಸ್ಟ್ ತಂಡವು ಮೆ| ಪ್ರಕಾಶ್ ರಾವ್ ಅವರ ಮಾರ್ಗದರ್ಶನ ಮತ್ತು ಸೂರಜ್ ಕಿದಿಯೂರು ರವರ ನೇತೃತ್ವದಲ್ಲಿ ಕೃಷಿ ಕಾಯಕ ನಡೆಸುತ್ತಿದ್ದಾರೆ